ತಬ್ಲೀಗ್ ಸಮಾವೇಶ ಹಿನ್ನೆಲೆ: ರಾಜ್ಯದಲ್ಲಿ ಒಂಬತ್ತು ವಿದೇಶಿಯರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು
ಬೆಂಗಳೂರು, ಆ.9: ತಬ್ಲೀಗ್ ಜಮಾತ್ ಸಮಾವೇಶದ ಹಿನ್ನೆಲೆ ರಾಜ್ಯದಲ್ಲಿ ಇದ್ದ 9 ವಿದೇಶಿಯರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕಾರ್ಯಕ್ರಮಗಳನ್ನು ಆಯೋಜಿಸುವಾಗ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ತುಮಕೂರು ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಸ್ಥಳೀಯರು ಸೇರಿ 16 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಯಾಣಿಕರ ದಾಖಲೆಗಳನ್ನು ಪ್ರವಾಸಿ ವೀಸಾ ಎಂದು ಪರಿಗಣಿಸಲು ಆಗುವುದಿಲ್ಲ. ಹೀಗಾಗಿ, ಪ್ರವಾಸಿ ವೀಸಾಕ್ಕೆ ಅನ್ವಯವಾಗುವ ಷರತ್ತುಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಬಳಿಕ ನ್ಯಾಯಪೀಠವು, ವಿದೇಶಿಯರ ವಿರುದ್ಧದ ಎಫ್ಐಆರ್ ರದ್ದುಪಡಿಸಿ, ಇದೇ ಪ್ರಕರಣದ ಸಂಬಂಧ ಸ್ಥಳೀಯರ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿತು. ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತು. ಅಲ್ಲದೇ, ಒಂಬತ್ತು ವಿದೇಶಿಯರು(ದಕ್ಷಿಣ ಆಫ್ರಿಕಾ ಮತ್ತು ಇಂಡೊನೇಷ್ಯಾದವರು) ಮುಂದಿನ 10 ವರ್ಷ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿದೆ.