ವಕ್ಫ್ ಬೋರ್ಡ್ ಅಧ್ಯಕ್ಷ ನಿಧನ: ಮುತವಲ್ಲಿ ವಿಭಾಗಕ್ಕೆ ಚುನಾವಣೆ ನಡೆಸುವಂತೆ ಎ.ಬಿ.ಇಬ್ರಾಹಿಮ್ ಸೂಚನೆ
ಬೆಂಗಳೂರು, ಆ.11: ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯೂಸುಫ್ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ಸೂಚನೆ ನೀಡಿದ್ದಾರೆ.
ಮಂಗಳವಾರ ಈ ಸಂಬಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವ ಎ.ಬಿ.ಇಬ್ರಾಹಿಮ್ ಅವರು ಮುಹಮ್ಮದ್ ಯೂಸುಫ್ ರಾಜ್ಯ ವಕ್ಫ್ ಬೋರ್ಡ್ ಗೆ ಮುತವಲ್ಲಿ ವಿಭಾಗದಿಂದ ಚುನಾಯಿತರಾಗಿದ್ದರು. ಆನಂತರ ಅವರನ್ನು ಐದು ವರ್ಷಗಳ ಅವಧಿಗೆ ಬೋರ್ಡ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಮುಹಮ್ಮದ್ ಯೂಸುಫ್ ನಿಧನದಿಂದ ಇದೀಗ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ. ವಕ್ಫ್ ಬೋರ್ಡ್ ಗೆ ಅಧ್ಯಕ್ಷರನ್ನು ಹಾಲಿ ಸದಸ್ಯರ ನಡುವೆಯೇ ಆಯ್ಕೆ ಮಾಡಲಾಗುತ್ತದೆ ಎಂದು ಇಬ್ರಾಹಿಮ್ ಹೇಳಿದ್ದಾರೆ.
ಮುತವಲ್ಲಿ ವಿಭಾಗದಲ್ಲಿ ಖಾಲಿಯಾಗಿರುವ ಸ್ಥಾನವನ್ನು ಭರ್ತಿ ಮಾಡಬೇಕಾದ ಅಗತ್ಯವಿದ್ದು, ವಾರ್ಷಿಕ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಇರುವ ವಕ್ಫ್ ಸಂಸ್ಥೆಗಳ ಪಟ್ಟಿ ಸಿದ್ಧವಾಗಿದ್ದು, ಮತದಾನ ಪ್ರಕ್ರಿಯೆಗೆ ಬಳಸಿಕೊಳ್ಳಬಹುದಾಗಿದೆ. ಆದುದರಿಂದ, ಮುತವಲ್ಲಿ ವಿಭಾಗಕ್ಕೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.