‘ಸಾಮ್ನಾ’ದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಲೇಖನ: ಶಿವಸೇನೆಯ ಸಂಜಯ್ ರಾವತ್ಗೆ ನೋಟಿಸು
ಪಾಟ್ನಾ, ಆ. 12: ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಕುರಿತು ಶಿವಸೇನೆ ನಾಯಕ ಸಂಜಯ್ ರಾವತ್ ಬರೆದ ಕಾಲಂ ಹಿನ್ನೆಲೆಯಲ್ಲಿ ಅವರಿಗೆ ನಟನ ಸೋದರ ಸಂಬಂಧಿ ಹಾಗೂ ಬಿಹಾರದ ಶಾಸಕ ನೀರಜ್ ಕುಮಾರ್ ಬಬ್ಲು ಬುಧವಾರ ನೋಟಿಸು ಜಾರಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಪ್ರಕಟವಾದ ಕಾಲಂ ಒಂದರಲ್ಲಿ ಸಂಜಯ್ ರಾವತ್, ನಟ ಸುಶಾಂತ್ ಸಿಂಗ್ ರಜಪೂತ್ ಆತನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಅವರ ತಂದೆ ಎರಡನೇ ವಿವಾಹವಾದ ಬಳಿಕ ಸುಶಾಂತ್ ಸಿಂಗ್ ರಜಪೂತ್ ಹಾಗೂ ಅವರ ತಂದೆಯ ಸಂಬಂಧ ಹದಗೆಟ್ಟಿತ್ತು ಎಂದು ಬರೆದಿದ್ದರು.
‘‘ಸಂಜಯ್ ರಾವತ್ ಅವರು ಸಂಸತ್ತಿನ ಗೌರವಾನ್ವಿತ ಸದಸ್ಯರು ಹಾಗೂ ಪಕ್ಷದ ಜವಾಬ್ದಾರಿಯುತ ವಕ್ತಾರ. ಆಧಾರ ರಹಿತ ಹೇಳಿಕೆಗೆ ಅವರು 48 ಗಂಟೆಗಳ ಒಳಗೆ ಕ್ಷಮೆ ಕೇಳಬೇಕು ಎಂದು ನನ್ನ ಕಕ್ಷಿದಾರ ನೀರಜ್ ಕುಮಾರ್ ಬಬ್ಲು ಪ್ರತಿಪಾದಿಸಿದ್ದಾರೆ. ಅವರು ಹಾಗೆ ಮಾಡಿದರೆ, ನಾವು ಮುಂದುವರಿಯುವುದಿಲ್ಲ. ಇಲ್ಲದೇ ಇದ್ದರೆ ಕಾನೂ ಕ್ರಮ ತೆಗೆದುಕೊಳ್ಳಲಿದ್ದೇವೆ’’ ಎಂದು ಶಾಸಕನ ಪರ ನ್ಯಾಯವಾದಿ ಅನೀಶ್ ಜಾ ಹೇಳಿದ್ದಾರೆ.
2002ರಲ್ಲಿ ಪತ್ನಿಯ ಸಾವಿನ ಬಳಿಕ ನಟನ ತಂದೆ ಕೃಷ್ಣ ಕಿಶೋರ್ ಸಿಂಗ್ ಎರಡನೇ ವಿವಾಹವಾದರು ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ನೀರಜ್ ಕುಮಾರ್ ಬಬ್ಲು ಹೇಳಿದ್ದಾರೆ.