ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಲು ಡಿಸಿಎಂ, ಸಚಿವರು, ಡಿಸಿಗಳ ನೇಮಕ
ದ.ಕದಲ್ಲಿ ಕೋಟ ಪೂಜಾರಿ, ಉಡುಪಿಯಲ್ಲಿ ಜಿಲ್ಲಾಧಿಕಾರಿಯಿಂದ ಧ್ವಜಾರೋಹಣ
ಬೆಂಗಳೂರು, ಆ. 12: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ಉಪಮುಖ್ಯಮಂತ್ರಿ, ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ-ಡಿಸಿಎಂ ಗೋವಿಂದ ಕಾರಜೋಳ, ರಾಮನಗರ-ಡಿಸಿಎಂ ಡಾ.ಅಶ್ವತ್ಥ ನಾರಾಯಣ, ರಾಯಚೂರು-ಡಿಸಿಎಂ ಲಕ್ಷ್ಮಣ ಸವದಿ, ಶಿವಮೊಗ್ಗ-ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ-ಕಂದಾಯ ಸಚಿವ ಆರ್.ಅಶೋಕ್, ಧಾರವಾಡ-ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಚಿತ್ರದುರ್ಗ-ಆರೋಗ್ಯ ಸಚಿವ ಬಿ.ಶ್ರೀರಾಮುಲು, ಚಾಮರಾಜನಗರ- ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಕೊಡಗು-ವಸತಿ ಸಚಿವ ವಿ.ಸೋಮಣ್ಣ, ಚಿಕ್ಕಮಗಳೂರು-ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಹಾವೇರಿ-ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ-ಮುಜರಾಯಿ ಸಚಿವ ಕೋಟ ಶ್ರೀನಿವಾಸಪೂಜಾರಿ.
ತುಮಕೂರು-ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗದಗ-ಗಣಿ ಮತ್ತು ಭೂವಿಜ್ಞಾನ ಸಚಿವ ಸಿಸಿ ಪಾಟೀಲ್, ಕೋಲಾರ-ಅಬಕಾರಿ ಸಚಿವ ಎಚ್.ನಾಗೇಶ್, ಬೀದರ್-ಪಶು ಸಂಗೋಪನಾ ಸಚಿವ ಪ್ರಭುಚೌವ್ಹಾಣ್, ಬಳ್ಳಾರಿ-ಅರಣ್ಯ ಸಚಿವ ಆನಂದ್ ಸಿಂಗ್, ದಾವಣಗೆರೆ-ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಮೈಸೂರು-ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೊಪ್ಪಳ-ಕೃಷಿ ಸಚಿವ ಬಿ.ಸಿ.ಪಾಟೀಲ್, ಚಿಕ್ಕಬಳ್ಳಾಪುರ-ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮಂಡ್ಯ-ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ, ಉತ್ತರ ಕನ್ನಡ-ಕಾರ್ಮಿಕ ಸಚಿವ ಅರೆಬೈಲ್ ಹೆಬ್ಬಾರ್ ಶಿವರಾಮ್.
ಬೆಳಗಾವಿ-ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಹಾಸನ-ಆಹಾರ ಸಚಿವ ಕೆ.ಗೋಪಾಲಯ್ಯ ಹಾಗೂ ಕಲಬುರಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸಲಿದ್ದಾರೆ. ಒಂದು ವೇಳೆ ಸಚಿವರು ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡತಕ್ಕದ್ದು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.