ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಆ.14:ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ(ಸಿಜೆಐ) ಶರದ್ ಅರವಿಂದ್ ಬೋಬ್ಡೆ ಹಾಗೂ ಹಿಂದಿನ ಮುಖ್ಯ ನ್ಯಾಯಾಧೀಶರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಪರಿಗಣಿಸಿದೆ.
ಆಗಸ್ಟ್ 20ರಂದು ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಲಿದೆ.
ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯರ ಪೀಠ ಭೂಷಣ್ ಅವರ ನ್ಯಾಯಾಂಗ ನಿಂದನೆಯ ಟ್ವೀಟ್ ಕುರಿತು ಇಂದು ತೀರ್ಪು ನೀಡಿದರು.
ಭೂಷಣ್ ಎರಡು ಟ್ವೀಟ್ ಮಾಡಿದ್ದರು. ಜೂನ್ 27ರಂದು ಸುಪ್ರೀಕೋರ್ಟ್ ಕುರಿತು ಹಾಗೂ ಜೂನ್ 29ರಂದು ಸಿಜೆ ಐ ಬೋಬ್ಡೆ ಕುರಿತಂತೆ ಟ್ವೀಟಿಸಿದ್ದರು. ಜುಲೈ 22ರಂದು ನ್ಯಾಯಾಲಯವು ಭೂಷಣ್ಗೆ ನೋಟಿಸ್ ಜಾರಿ ಮಾಡಿತ್ತು.
ಭೂಷಣ್ ತನ್ನ ಎರಡು ನ್ಯಾಯಾಂಗ ನಿಂದನೆಯ ಟ್ವೀಟ್ಗಳನ್ನು ಸಮರ್ಥಿಸಿಕೊಂಡ ಬಳಿಕ ಉಚ್ಚ ನ್ಯಾಯಾಲಯ, ನ್ಯಾಯಾಂಗ ನಿಂದನೆಯ ಕುರಿತು ಆಗಸ್ಟ್ 5ರಂದು ತೀರ್ಪನ್ನು ಕಾಯ್ದಿರಿಸಿತ್ತು.
"ನಾನು ನನ್ನ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದು,ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಇದು ನ್ಯಾಯದ ಅಡಚಣೆಗೆ ಸಮನಾಗಿಲ್ಲ'' ಎಂದು ಭೂಷಣ್ ಹೇಳಿದ್ದಾರೆ.
ಆಗಸ್ಟ್ 3ರಂದು ಅಫಿಡವಿಟ್ ಸಲ್ಲಿಸಿರುವ ಭೂಷಣ್, "ನಾನು ಏನು ಟ್ವೀಟ್ ಮಾಡಿದ್ದೇನೆಯೋ ಆ ಬಗ್ಗೆ ಖೇದ ವ್ಯಕ್ತಪಡಿಸುತ್ತೇನೆ. ನ್ಯಾಯಾಧೀಶರನ್ನು ಟೀಕಿಸುವುದು ಒಂದು ಹಗರಣವಲ್ಲ ಅಥವಾ ಅವರ ಅಧಿಕಾರವನ್ನು ಕಡಿಮೆ ಮಾಡುವುದಿಲ್ಲ''ಎಂದು ಪ್ರತಿಪಾದಿಸಿದ್ದರು.