ಶುಕ್ರವಾರದ ನಮಾಝ್ ಬಿಟ್ಟು ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸಹಕರಿಸಿದ ಯುವಕರು
ಸಕಲೇಶಪುರ, ಸೆ.18: ಶುಕ್ರವಾರದ ನಮಾಝ್ ಬಿಟ್ಟು ಯುವಕರ ತಂಡ ಕೊರೋನ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಹಕರಿಸಿದ ಮಾನವೀಯ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮದ ನಿವಾಸಿ ಮೂರ್ತಿ ಕೋರೋನ ಸೊಂಕಿನಿಂದ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ
ತಾಲೂಕು ಆಡಳಿತದ ಕರೆಯ ಮೇರೆಗೆ ತಾಲೂಕಿನ ಆಚಂಗಿ ಗ್ರಾಮದ ಮೊಹಿದ್ದೀನ್ ಮಸೀದಿ ಸಮಿತಿಯ ಸಮೀರ್, ಆರಿಫ್, ಅಝೀಝ್, ಅಬ್ದುಲ್ ಮಜೀದ್, ಮಹಾಝ್, ಹಮೀದ್ ಕುಡುಗರಹಳ್ಳಿ ಮತ್ತು ಬಾತೀಶ್ ಎಂಬುವವರು ಧಾವಿಸಿ, ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಸಾಮಾನ್ಯವಾಗಿ ಮುಸ್ಲಿಮರಿಗೆ ಶುಕ್ರವಾರದ ಜುಮಾ ನಮಾಝ್ ಪವಿತ್ರವಾದದ್ದು. ಆದರೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗಾಗಿ ಧಾವಿಸಿದ ಯುವಕರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅಝೀಝ್, ಮನುಷ್ಯನ ಅಂತ್ಯಕ್ರಿಯೆಗೆ ಕೊರೋನ ಅಡ್ಡಿಯಾಗಬಾರದು. ಮನುಷ್ಯನ ಅಂತ್ಯ ಸಂದರ್ಭ ಗೌರವಯುತವಾಗಿ ನಡೆಯಬೇಕು. ಕೊರೋನ ಸೋಂಕಿತರನ್ನು ಅಗೌರವದಿಂದ ದಫನ್ ಮಾಡುತ್ತಿದ್ದರು. ಇದನ್ನು ಕಂಡು ನಮ್ಮ ಮನ ಮಿಡಿಯಿತು. ಈ ನಿಟ್ಟಿನಲ್ಲಿ ನಾವು ತಂಡ ರಚಿಸಿ ಈ ಮೂಲಕ ಸೇವೆಗೆ ಮುಂದಾಗಿದ್ದೇವೆ ಎಂದರು.