ಮಂಗಳೂರಲ್ಲಿ ಭಾರೀ ಮಳೆ: ಕಾರ್ಮಿಕ ಬಲಿ, ನಗರದಲ್ಲಿ ಕೃತಕ ಪ್ರವಾಹ
ವಾಹನ ಸಂಚಾರಕ್ಕೆ ಅಡಚಣೆ
ಮಂಗಳೂರು, ಸೆ.19: ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಗೆ ಮಂಗಳೂರು ನಗರದಲ್ಲಿ ಕಾರ್ಮಿಕನೋರ್ವ ಬಲಿಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬಿಕರ್ನಕಟ್ಟೆಯ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ನೀರುಮಾರ್ಗ ನಿವಾಸಿ ಉಮೇಶ್ (37) ಮೃತರು. ನಗರದ ಕೂಳೂರಿನ ಚರ್ಚ್ವೊಂದರ ತಡೆಗೋಡೆ ಭಾರೀ ಪ್ರಮಾಣದಲ್ಲಿ ಕುಸಿದ ಪರಿಣಾಮ ಕಾರ್ಮಿಕ ಉಮೇಶ್ ಮಣ್ಣಿನಡಿ ಸಿಲುಕಿ ಧಾರುಣವಾಗಿ ಮೃತಪಟ್ಟಿದ್ದಾರೆ. ಇದೇ ಅವಘಡದಲ್ಲಿ ಬಸವರಾಜ್ ಹಾಗೂ ನಾರಾಯಣ ಎಂಬ ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯ ಅಬ್ಬರ ಹೆಚ್ಚಾಗಿದೆ. ಶುಕ್ರವಾರ ರಾತ್ರಿಯಿಂದಲೇ ಆರಂಭವಾದ ಮಳೆ ಶನಿವಾರ ದಿನವಿಡಿ ಮಳೆ ಸುರಿದಿದೆ. ಕೂಳೂರು ಚರ್ಚ್ ಮೈದಾನದ ಕೆಳಭಾಗದಲ್ಲಿರುವ ಮನೆಯೊಂದರ ವಿಸ್ತರಣೆಗಾಗಿ ಪಿಲ್ಲರ್ ಕಾಮಗಾರಿ ನಡೆಯುತ್ತಿತ್ತು. ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಉಮೇಶ್ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾಗ ಏಕಾಏಕಿ ಆಳೆತ್ತರದ ಕಲ್ಲಿನ ತಡೆಗೋಡೆ ಜರಿದುಬಿದ್ದಿದೆ. ತಕ್ಷಣ ಗಮನಿಸಿದ ಉಮೇಶ್ ಓಡಿಹೋಗಿ ಪಾರಾಗಲು ಯತ್ನಿಸಿದ ಭರದಲ್ಲಿ ಪಿಲ್ಲರ್ನ ಹೊಂಡಕ್ಕೆ ಬಿದ್ದು ಮೇಲೇಳುವಷ್ಟರಲ್ಲಿ ಜರಿದ ತಡೆಗೋಡೆ ಬಿದ್ದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಸಾರ್ವಜನಿಕರು ಪಾರಾಗಿದ್ದಾರೆ.
ಮನೆ ವಿಸ್ತರಣೆ ಕೆಲಸಕ್ಕೆ ಮೂರು ಮಂದಿ ಯಾವಾಗಲೂ ಬರುತ್ತಿದ್ದರು. ಶನಿವಾರ ಇಬ್ಬರು ರಜೆ ಹಾಕಿದ್ದರು. ಉಮೇಶ್ ಮಾತ್ರ ವಿಧಿಯಾಟಕ್ಕೆ ಬಲಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಸೇರಿ ಸುಮಾರು ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ಮಾಡಿ ಮೃತದೇಹ ಹೊರತೆಗೆದಿದ್ದಾರೆ. ಈ ವೇಳೆ ಎರಡು ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಯಿತು. ಕದ್ರಿ ಮತ್ತು ಪಾಂಡೇಶ್ವರ ಠಾಣೆಗಳ ಎರಡು ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡವು.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ, ಕಾರ್ಪೊರೇಟರ್ ಅನಿಲ್ ಕುಮಾರ್, ಸಹಾಯಕ ಕಮೀಷನರ್ ಮದನ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಕಾವೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದರು. ತಡೆಗೋಡೆ ಕುಸಿತ ಘಟನೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಜಂಗುಳಿ: ತಡೆಗೋಡೆ ಕುಸಿತ ಘಟನೆಯ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಅಗ್ನಿಶಾಮಕ ದಳ, ಜೆಸಿಬಿಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾರಣೆಯನ್ನು ಸಾರ್ವಜನಿಕರು ವೀಕ್ಷಿಸಿದರು.
ಮಹಿಳೆ ಗಂಭೀರ: ಮಂಗಳೂರು ನಗರದ ಬಿಕರ್ನಕಟ್ಟೆ ಪದವು ನಾಯಿಗರ್ ಲೇನ್ನಲ್ಲಿ ಆವರಣ ಗೋಡೆ ಕುಸಿದು ಸ್ಥಳೀಯ ನಿವಾಸಿ ಚಂದ್ರ ಕಲಾ ಶೆಟ್ಟಿ ತೀವ್ರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಳೆಯಿಂದಾಗಿ ಯೆಯ್ಯಾಡಿಯ ಜಯಲಕ್ಷ್ಮಿ ಎಂಬವರ ಮನೆ ಗೋಡೆ ಶಿಥಿಲವಾಗಿ ಕುಸಿತದ ಹಂತಕ್ಕೆ ತಲುಪಿದೆ.
ಕೃತಕ ಪ್ರವಾಹ: ಶುಕ್ರವಾರ ತಡರಾತ್ರಿಯಿಂದಲೇ ಆರಂಭವಾಗಿದ್ದ ಮಳೆ ನಿರಂತರವಾಗಿ ಸುರಿಯುತ್ತಿತ್ತು. ಸಾಮಾನ್ಯವಾಗಿದ್ದ ಮಳೆ ಮಧ್ಯಾಹ್ನದ ವೇಳೆಗೆ ಧಾರಾಕಾರ ರೂಪ ಸುರಿದಿದೆ. ಪರಿಣಾಮ ಮಂಗಳೂರು ನಗರದ ವಿವಿಧೆಡೆ ಕೃತಕ ಪ್ರವಾಹ ಉಂಟಾಗಿ ಜನರು ಪ್ರಯಾಸ ಪಡಬೇಕಾಯಿತು.
ಬಜಾಲ್ ರೈಲ್ವೆ ಕ್ರಾಸ್ ಅಂಡರ್ ಪಾಸ್, ಪಡೀಲ್ ಅಂಡರ್ಪಾಸ್ನಲ್ಲಿ ಆಳೆತ್ತರದವರೆಗೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ, ಪಂಪ್ವೆಲ್ ಫ್ಲೈಓವರ್ ಅಡಿಭಾಗ, ಜ್ಯೋತಿ ಬಸ್ ನಿಲ್ದಾಣ, ಸಿಟಿ ಸೆಂಟರ್ ಮುಂಭಾಗ, ಕೊಟ್ಟಾರ ಚೌಕಿ, ಜಪ್ಪಿನ ಮೊಗರು, ಅಳಕೆ, ಎಕ್ಕೂರು, ಸುರತ್ಕಲ್, ಸೂರಿಂಜೆ, ಚೇಳ್ಯಾರು ಪ್ರದೇಶದಲ್ಲಿ ಮಳೆ ನೀರು ರಸ್ತೆಗೆ ನುಗ್ಗಿತ್ತು. ನಗರದ ಹೊರವಲಯದ ಸೂರಿಂಜೆ, ಚೇಳ್ಯಾರು, ಎಕ್ಕೂರು ಪ್ರದೇಶದಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಅನೇಕ ಕಡೆ ಕೃಷಿ ಬೆಳೆ ಹಾನಿಯಾದ ಕುರಿತು ವರದಿಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಸೋಮೇಶ್ವರ, ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಅಬ್ಬರ ಮಳೆಯಿಂದ ಕಡಲ್ಕೊರತೆ ತೀವ್ರವಾಗಿದೆ.