ಭಾರತದಲ್ಲಿ ಮಾನವ ಹಕ್ಕುಗಳ ಸಂರಕ್ಷಕರ ಬಿಡುಗಡೆ: ವಿಶ್ವಸಂಸ್ಥೆ ತಜ್ಞರಿಗೆ ಡಾ.ಕಫೀಲ್ ಖಾನ್ ಮೊರೆ
ಹೊಸದಿಲ್ಲಿ, ಸೆ.21: ಭಾರತದಲ್ಲಿ ಮಾನವ ಹಕ್ಕುಗಳ ಸಂರಕ್ಷಕರನ್ನು ತಕ್ಷಣವೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಸೂಚಿಸಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ತಜ್ಞ ತಂಡಕ್ಕೆ ಡಾ.ಕಫೀಲ್ ಖಾನ್ ಪತ್ರ ಬರೆದಿದ್ದಾರೆ.
ಕಳೆದ ಜೂನ್ 26ರಂದು ವಿಶ್ವಸಂಸ್ಥೆ ಮಾನವಹಕ್ಕು ತಜ್ಞರ ತಂಡ ಭಾರತ ಸರ್ಕಾರಕ್ಕೆ ಪತ್ರ ಬರೆದು ತಕ್ಷಣ ಮಾನವಹಕ್ಕು ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಹಿಂಸೆಗೆ ಕರೆ ನೀಡದಿದ್ದರೂ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ವಿರುದ್ಧ ದೇಶದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ/ಯುಎಪಿಎ ಪ್ರಯೋಗಿಸಲಾಗುತ್ತಿದ್ದು, ಇದು ಖಂಡನೀಯ ಎಂದು ಡಾ.ಕಫೀಲ್ ಖಾನ್ ವಿವರಿಸಿದ್ದಾರೆ.
ಎಲ್ಲ ಅಡೆತಡೆಗಳ ಮಧ್ಯೆಯೂ ದೇಶದ ಜನತೆಗೆ ಸೇವೆ ಸಲ್ಲಿಸುವ ಬದ್ಧತೆಯನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
"ನನಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗಿದ್ದು, ಹಲವು ದಿನಗಳ ಕಾಲ ಅನ್ನ- ನೀರು ಕೂಡಾ ನೀಡಿಲ್ಲ. ಕೈದಿಗಳಿಂದ ತುಂಬಿ ತುಳುಕುತ್ತಿದ್ದ, ಇಕ್ಕಟ್ಟಾದ ಮಥುರಾ ಜೈಲಿನಲ್ಲಿ ಏಳು ತಿಂಗಳ ಬಂಧನದ ಅವಧಿಯಲ್ಲೂ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಅದೃಷ್ಟವಶಾತ್ ಉತ್ತರ ಪ್ರದೇಶ ಹೈಕೋರ್ಟ್ನಲ್ಲಿ ಎನ್ಎಸ್ಎ ಅಡಿ ಮಾಡಿದ್ದ ಆರೋಪದಿಂದ ನನ್ನನ್ನು ಮುಕ್ತಗೊಳಿಸಲಾಗಿದ್ದು, ಇಡೀ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಹೈಕೋರ್ಟ್ ಪರಿಗಣಿಸಿದೆ ಎಂದು ಖಾನ್ ಉಲ್ಲೇಖಿಸಿದ್ದಾರೆ.