ವಿಧಾನಸೌಧದಲ್ಲಿ ಸಚಿವ-ಶಾಸಕ ನಡುವೆ ಜಟಾಪಟಿ
ಬೆಂಗಳೂರು, ಸೆ.21: ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ವಿಧಾನಸಭೆಯ ಮುಂಭಾಗದ ಮೊಗಸಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜಟಾಪಟಿ ನಡೆದಿರುವುದು ವರದಿಯಾಗಿದೆ.
ಅನುದಾನ ಬಿಡುಗಡೆಗೆ ಸಂಬಂಧಿಸಿ ಈ ವಾಗ್ವಾದ, ಜಟಾಪಟಿ ನಡೆದಿದೆ ಎನ್ನಲಾಗಿದೆ. ಮಧ್ಯಾಹ್ನ 12:40ರ ಸುಮಾರಿಗೆ ಸಚಿವ ನಾರಾಯಣ ಗೌಡ ಉಪಾಹಾರ ಗೃಹದತ್ತ ಬರುತ್ತಿದ್ದರು. ಆಗ ಎದುರಾದ ಶಾಸಕ ಬೆಳ್ಳಿಪ್ರಕಾಶ್, ತಮ್ಮ ಕ್ಷೆತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ಅನುದಾನ ಬಿಡುಗಡೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದು ತಿಳಿದುಬಂದಿದೆ. ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.
ಗಲಾಟೆ ನಡೆಯುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್. ಈಶ್ವರಪ್ಪ, ಸೋಮಣ್ಣ ಕೂಡ ಅಲ್ಲೇ ಇದ್ದರು.
Next Story