ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸ್ಸಾತಿಗೆ ಒತ್ತಾಯ: ಸೆ.24ರಂದು ಸಿಐಟಿಯುನಿಂದ ವಿಧಾನಸೌಧ ಚಲೋ
ಬೆಂಗಳೂರು, ಸೆ.22: ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ರಾಜ್ಯ ಸರಕಾರ ಕೈಬಿಡಬೇಕೆಂದು ಆಗ್ರಹಿಸಿ ಸಿಐಟಿಯು ವತಿಯಿಂದ ಸೆ.24ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಏಕಪಕ್ಷೀಯವಾಗಿ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸದನದಲ್ಲಿ ಏಕಪಕ್ಷೀಯವಾಗಿ ಅಂಗೀಕರಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಈ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ರೈತ-ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದೆ.
ಇತರೆ ಬೇಡಿಕೆಗಳು: ಕೇಂದ್ರ ಸರಕಾರ ರಾಜ್ಯದ ಜಿಎಸ್ಟಿ ಪಾಲು 13,700 ಕೋಟಿ ರೂ. ಕೂಡಲೇ ರಾಜ್ಯಕ್ಕೆ ನೀಡಬೇಕು. ಕೋವಿಡ್ ಪಿಡುಗಿನ ವಿರುದ್ದ ಹೋರಾಡುತ್ತಿರುವ ಫ್ರೆಂಟ್ಲೈನ್ ವಾರಿಯರ್ಸ್ಗೆ ಅಗತ್ಯ ರಕ್ಷಣೆ ಒದಗಿಸಿ, ವೇತನ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು. ಕೇಂದ್ರೀಕರಣ, ವಾಣಿಜ್ಯೀಕರಣ ಹಾಗೂ ಕೋಮುವಾದೀಕರಣಕ್ಕೆ ಎಡೆಮಾಡಿಕೊಡುವ ನೂತನ ಶಿಕ್ಷಣ ನೀತಿಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಲಾಗುತ್ತಿದೆ.