ಜಿಎಸ್ಟಿ ಪರಿಹಾರ ನಿಧಿ ಬೇರೆಡೆ ಬಳಸಿ ನಿಯಮ ಉಲ್ಲಂಘಿಸಿದ ಕೇಂದ್ರ: ಸಿಎಜಿ ವರದಿ
ಹೊಸದಿಲ್ಲಿ : ಜಿಎಸ್ಟಿ ಆದಾಯದಲ್ಲಿ ನಷ್ಟಕ್ಕೆ ರಾಜ್ಯಗಳಿಗೆ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಿಂದ ಪರಿಹಾರವೊದಗಿಸಲು ಕಾನೂನಿನಲ್ಲಿ ಯಾವುದೇ ನಿಬಂಧನೆಯಿಲ್ಲ ಎಂದು ಕಳೆದ ವಾರ ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ಸರಕಾರವೇ 2017-18 ಹಾಗೂ 2018-19ರಲ್ಲಿ ಜಿಎಸ್ಟಿ ಪರಿಹಾರ ಶುಲ್ಕವಾದ ರೂ. 47,272 ಕೋಟಿಯಷ್ಟು ಹಣವನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಲ್ಲಿ ಉಳಿಸಿದ್ದರಿಂದ "ದೊರೆತ ಆದಾಯ ಇದರಿಂದ ಉತ್ಪ್ರೇಕ್ಷಿಸಲ್ಪಟ್ಟಿತ್ತಲ್ಲದೆ ಆ ವರ್ಷಗಳ ವಿತ್ತೀಯ ಕೊರತೆಗಳೂ ಕಡಿಮೆಯಿರುವಂತೆ'' ಇದರಿಂದ ಕಂಡಿತ್ತು ಎಂದು ಸಿಎಜಿ ಕಂಡುಕೊಂಡಿದೆ. ಇದು ಜಿಎಸ್ಟಿ ಪರಿಹಾರ ಶುಲ್ಕ ಕಾಯಿದೆ, 2017ರ ಉಲ್ಲಂಘನೆಯಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
ಸರಕಾರ ಸಂಪೂರ್ಣ ಜಿಎಸ್ಟಿ ಶುಲ್ಕ ಮೊತ್ತವನ್ನು ಜಿಎಸ್ಟಿ ಪರಿಹಾರ ನಿಧಿಗೆ ವರ್ಗಾಯಿಸುವ ಬದಲು ಅದನ್ನು ಸಿಎಫ್ಐನಲ್ಲಿಯೇ ಉಳಿಸಿ ಇತರ ಉದ್ದೇಶಕ್ಕೆ ಬಳಸಿದೆ.
ಸಿಎಜಿ ವರದಿ ಪ್ರಕಾರ ವಿತ್ತ ಸಚಿವಾಲಯವು ಅಡಿಟ್ ಅಭಿಪ್ರಾಯವನ್ನು ಒಪ್ಪಿಕೊಂಡಿದೆ ಹಾಗೂ ಶುಲ್ಕ ಸಂಗ್ರಹದ ಮೊತ್ತ ಹಾಗೂ ನಿರ್ದಿಷ್ಟ ಖಾತೆಗೆ ವರ್ಗಾಯಿಸದೇ ಇದ್ದ ಮೊತ್ತವನ್ನು ಮುಂದಿನ ವರ್ಷದಲ್ಲಿ ವರ್ಗಾಯಿಸಲಾಗುವುದು ಎಂದು ಹೇಳಿದೆ.