ರೈತರು ರಸ್ತೆಗಿಳಿದರೆ ಈ ಸರಕಾರ ಉಳಿಯದು: ಐವನ್ ಡಿಸೋಜ
ಕರ್ನಾಟಕ ಬಂದ್: ಮಂಗಳೂರಿನಲ್ಲಿ ರೈತ -ದಲಿತ -ಕಾರ್ಮಿಕರ ಐಕ್ಯ ಪ್ರತಿಭಟನೆ
ಮಂಗಳೂರು, ಸೆ.28: ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆ ರೈತ ವಿರೋಧಿಯಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಅಂಬಾನಿ- ಅದಾನಿಗೆ ನೆರವಾಗುವ ನಿಟ್ಟಿನಲ್ಲಿ ಮಾಡಲಾದ ಕಾನೂನು ತಿದ್ದುಪಡಿಯಾಗಿದೆ. ಇದರ ವಿರುದ್ಧ ರೈತರು ರಸ್ತೆಗಿಳಿದರೆ ಈ ಸರಕಾರ ಉಳಿಯದು ಎಂದು ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್ ಕರೆಯ ಪ್ರಯುಕ್ತ ನಗರದ ಮಿನಿ ವಿಧಾನ ಸೌಧದ ಎದುರು ಸೋಮವಾರ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಜಿಲ್ಲಾ ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟ ಆಯೋಜಿಸಿದ್ದ ರೈತ ದಲಿತ ಕಾರ್ಮಿಕರ ಐಕ್ಯ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರೈತ, ವ್ಯಾಪಾರ ವರ್ಗದ ಅನುಮತಿ, ಬೇಡಿಕೆಯನ್ನು ಪಡೆಯದೆ ಕಾನೂನು ತಿದ್ದುಪಡಿ ಮಾಡಿದ್ದು ಯಾಕಾಗಿ? ಇದರ ಹಿಂದಿರುವ ಅಜೆಂಡವಾದರೂ ಏನು ಎಂದು ಪ್ರಶ್ನಿಸಿದ ಐವನ್, ರೈತರನ್ನು ಬೀದಿಪಾಲು ಮಾಡಿ ಗುಲಾಮಗಿರಿಗೆ ತಳ್ಳುವ ಷಡ್ಯಂತ್ರವಿದು ಎಂದು ಆರೋಪಿಸಿದರು.
ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ಸಂಸದ, ಏಳು ಮಂದಿ ಶಾಸಕರಿದ್ದು ರೈತರ ಪರ ಮಾತನಾಡುತ್ತಿಲ್ಲವೇಕೆ? ಇವರಿಗೆ ರೈತರ ಬಗ್ಗೆ ಹಿತಾಸಕ್ತಿಯಿಲ್ಲವೇ? ಒಂದು ವೇಳೆ ಈ ಕಾನೂನು ರೈತರಿಗೆ ಹಿತವಾಗಿದ್ದಲ್ಲಿ ಕೇಂದ್ರದ ಸಚಿವರೊಬ್ಬರು ರಾಜೀನಾಮೆ ನೀಡಿರುವುದೇಕೆ? ಕೇಂದ್ರದ ಮಂತ್ರಿ ಮಂಡಲದಲ್ಲೇ ಸಹಮತ ಇಲ್ಲ. ಯಡಿಯೂರಪ್ಪ ಹಸಿರು ಶಾಲು ಹೊದ್ದು ಅಧಿಕಾರಕ್ಕೇರಿ ಇದೀಗ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೆ.ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ಅನ್ನದಾತರನ್ನು ಅನ್ನ ಬೇಡುವ ಭಿಕ್ಷುಕರನ್ನಾಗಿ ಮಾಡುವ ಈ ಸುಗ್ರೀವಾಜ್ಞೆಯು ಶಾಸನವಾಗದಂತೆ ತಡೆಯುವುದು ರಾಜ್ಯದ ಜನತೆಯ ಜವಾಬ್ದಾರಿ ಎಂದರು.
ಪ್ರತಿಭಟನೆಯಲ್ಲಿ ಎಂ.ದೇವದಾಸ್, ಸದಾಶಿವ ಉಳ್ಳಾಲ್, ಪಿ.ವಿ.ಮೋಹನ್, ಸಂತೋಷ್ ಕುಮಾರ್, ಶಾಲೆಟ್ ಪಿಂಟೊ, ಎಚ್.ವಿ.ರಾವ್, ಸೀತಾರಾಂ ಬೇರಿಂಜ, ಯು.ಬಿ.ಲೋಕಯ್ಯ, ವಿ.ಕುಕ್ಯಾನ್, ಜೆಸಿಂತಾ, ಪದ್ಮನಾಭ ಅಮೀನ್, ಶುಭೋದಯ, ಭಾರತಿ ಬೋಳಾರ್, ಸುಮತಿ ಎಸ್. ಹೆಗ್ಡೆ, ಅರ್ಪಿತಾ, ಮುಹಮ್ಮದ್ ಮೋನು, ಶಶಿಕಲಾ ಯೆಯ್ಯೆಡಿ, ಹಬೀಬ್ ಖಾದರ್, ಸವಾದ್ ಸುಳ್ಯ, ಸುಹೈಲ್ ಕಂದಕ್, ಕವಿತಾ ವಾಸು, ದಯಾನಂದ ಶೆಟ್ಟಿ, ಪ್ರಮೀಳಾ ದೇವಾಡಿಗ, ಅಶಿತ್ ಪಿರೇರ, ಸಿರಾಜ್, ನಝೀರ್ ಬಜಾಲ್ ಮೊದಲಾದವರು ಭಾಗವಹಿಸಿದ್ದರು.
ಸುನೀಲ್ ಕುಮಾರ್ ಬಜಾಲ್ ಪ್ರತಿಭಟನಾ ಕಾರ್ಯಕ್ರಮ ನಿರ್ವಹಿಸಿದರು