ಜಾತ್ಯತೀತತೆಗೆ ಬಹುದೊಡ್ಡ ಅಪಚಾರ
ನಾವು ಅಸಲಿ ಮಣ್ಣಿನ ಮಕ್ಕಳು ಎಂದು ಬೊಬ್ಬೆ ಹೊಡೆಯುತ್ತಿದ್ದ ಜಾತ್ಯತೀತ ಜನತಾದಳ ಆರ್ಥಿಕ ಲಾಭ ಮತ್ತು ರಾಜಕೀಯ ಅಧಿಕಾರಕ್ಕೋಸ್ಕರ ಮಸೂದೆಯನ್ನು ಬೆಂಬಲಿಸಿ ತನ್ನ ನಕಲಿ ಜಾತ್ಯತೀತತೆಯನ್ನು ಪ್ರದರ್ಶಿಸಿದೆ. ಇದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭ ದೊರಕಿದರೂ ಜಾತ್ಯತೀತ ಜನತಾದಳ ಕರ್ನಾಟಕದ ರೈತ ಸಮುದಾಯ ಮತ್ತು ಪ್ರಜ್ಞಾವಂತರ ವಿಶ್ವಾಸ ಕಳೆದುಕೊಂಡು ಅವನತಿಯ ಹಾದಿ ಹಿಡಿದಿದೆ.
ಭಾರತಕ್ಕೆ ಬಹುತ್ವ ಆತ್ಮವಾದರೆ ಜಾತ್ಯತೀತತೆ ಉಸಿರಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಭಾರತವು ಹಿಂದುತ್ವ ಕೇಂದ್ರಿತ ರಾಷ್ಟ್ರವಾಗದೇ ಜಾತ್ಯತೀತತೆ ಕೇಂದ್ರಿತ ಪ್ರಬುದ್ಧ ರಾಷ್ಟ್ರವಾಗಬೇಕೆಂದು ಗಾಂಧಿ, ನೆಹರೂ, ಅಂಬೇಡ್ಕರ್, ಲೋಹಿಯಾ ಮೊದಲಾದ ಮುತ್ಸದ್ದಿಗಳು ಬಯಸಿದ್ದರು. ಜಾತಿವಿನಾಶವಾಗದ ಹೊರತು ಭಾರತವು ಪ್ರಬುದ್ಧ ಭಾರತವಾಗಿ ರೂಪುಗೊಳ್ಳುವುದಿಲ್ಲವೆಂದು ರಾಷ್ಟ್ರನಾಯಕರು ಬಲವಾಗಿ ಪ್ರತಿಪಾದಿಸಿದ್ದರು. ಹಿಂದುತ್ವ ಕೇಂದ್ರಿತ ರಾಷ್ಟ್ರೀಯತೆ ಅಲ್ಪಸಂಖ್ಯಾತ ಮೇಲ್ವರ್ಗದ ಭಾರತೀಯರನ್ನು ಪ್ರಭುಗಳನ್ನಾಗಿ ಮತ್ತು ಬಹುಸಂಖ್ಯಾತ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿರಚಿತ ಭಾರತೀಯ ಸಂವಿಧಾನ ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜಾತ್ಯತೀತ ದಳ ಅಂದಿನಿಂದ ಇಂದಿನ ತನಕ ಜನರನ್ನು ದಿಕ್ಕುತಪ್ಪಿಸುವ ಕಾಯಕದಲ್ಲಿ ತಲ್ಲೀನವಾಗಿದೆ. ಇವರು ಆಕಸ್ಮಿಕವಾಗಿ ಒಕ್ಕಲಿಗರಾಗಿದ್ದರೂ ಹಳೆಯ ಮೈಸೂರು ಭಾಗದ ಒಕ್ಕಲಿಗರಲ್ಲಿ ಜಾತೀಯತೆ ಪ್ರಜ್ಞೆ ಮೂಡಿಸಿ ಅವರ ಬೆಂಬಲದಿಂದ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿ ಹುದ್ದೆಗೇರಿದರು. ಇವರ ಮಗ ಎಚ್.ಡಿ.ಕುಮಾರಸ್ವಾಮಿ ಮೊಸಳೆ ಕಣ್ಣೀರು ಸುರಿಸುತ್ತಲೇ ಎರಡು ಬಾರಿ ಅನೈತಿಕ ರಾಜಕೀಯ ಮೈತ್ರಿಯಿಂದ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರಿದರು. ಆದಾಗ್ಯೂ ಬಹುಸಂಖ್ಯಾತ ಒಕ್ಕಲಿಗರ ಶಿಕ್ಷಣ, ಸಂಘಟನೆ ಮತ್ತು ಸಬಲೀಕರಣಗಳಿಗೆ ನೀಡಿರುವ ಕೊಡುಗೆ ನಗಣ್ಯವೆಂದೇ ಹೇಳಬಹುದು. ಇದನ್ನು ಅರಿತ ಪ್ರಜ್ಞಾವಂತ ಒಕ್ಕಲಿಗರು ಮತ್ತು ಗೌರವಾನ್ವಿತ ಮತದಾರ 2019ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಅಪ್ಪ-ಮಕ್ಕಳು-ಮೊಮ್ಮಕ್ಕಳನ್ನು ಸೋಲಿಸುವುದರ ಮೂಲಕ ಸರಿಯಾದ ಪಾಠ ಕಲಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಗಳ ಮೂಲಕ ರೈತರ ಭೂಮಿಯನ್ನು ಕಸಿದುಕೊಂಡು ಬಲಾಢ್ಯ ಶ್ರೀಮಂತರಿಗೆ ಭೂ ಮಾಲಕತ್ವ ನೀಡಲು ಹೊರಟಿರುವುದನ್ನು ರೈತ ಸಮುದಾಯ ಉಗ್ರವಾಗಿ ಖಂಡಿಸಿದೆ. ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಕೃಷಿ ಕಾನೂನನ್ನು ವಿರೋಧಿಸಿ ಲಕ್ಷಾಂತರ ರೈತರು ನ್ಯಾಯೋಚಿತ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಅಖಂಡ ಬೆಂಬಲ ನೀಡಿವೆ. ಅಷ್ಟೇ ಅಲ್ಲದೆ ಬ್ರಿಟನ್, ಕೆನಡಾ, ಅಮೆರಿಕ ಮೊದಲಾದೆಡೆ ರೈತ ಚಳವಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಪಕ ಬೆಂಬಲ ದೊರಕಿ ಭಾರತ ಸರಕಾರ ಮುಜುಗರಕ್ಕೆ ಗುರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಅನೈತಿಕ ರಾಜಕಾರಣ ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ.ಎಸ್.ಯಡಿಯೂರಪ್ಪನೇತೃತ್ವದ ಸರಕಾರ ರೈತರ ಆರ್ಥಿಕ ಸ್ವಾವಲಂಬನೆ ಮತ್ತು ಬದುಕುವ ಹಕ್ಕಿಗೆ ವಿರುದ್ಧವಾಗಿ ರೈತ ವಿರೋಧಿ ಕಾಯ್ದೆಗಳನ್ನು ರೂಪಿಸಿದೆ. ರೈತ ಸಮುದಾಯದ ಉಗ್ರ ಪ್ರತಿಭಟನೆಯ ನಡುವೆಯೂ ಕರ್ನಾಟಕ ವಿಧಾನಸಭೆಯಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಲಭಿಸಿದೆ.
ವಿಧಾನಪರಿಷತ್ನಲ್ಲಿ ಬಿಜೆಪಿ- ಜಾತ್ಯತೀತ ಜನತಾ ದಳದ ಅನೈತಿಕ ಮೈತ್ರಿಯಿಂದಾಗಿ ಮಸೂದೆಗೆ ಅಂಗೀಕಾರ ದೊರಕಿದೆ. ನಾವು ಅಸಲಿ ಮಣ್ಣಿನ ಮಕ್ಕಳು ಎಂದು ಬೊಬ್ಬೆ ಹೊಡೆಯುತ್ತಿದ್ದ ಜಾತ್ಯತೀತ ಜನತಾದಳ ಆರ್ಥಿಕ ಲಾಭ ಮತ್ತು ರಾಜಕೀಯ ಅಧಿಕಾರಕ್ಕೋಸ್ಕರ ಮಸೂದೆಯನ್ನು ಬೆಂಬಲಿಸಿ ತನ್ನ ನಕಲಿ ಜಾತ್ಯತೀತತೆಯನ್ನು ಪ್ರದರ್ಶಿಸಿದೆ. ಇದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭ ದೊರಕಿದರೂ ಜಾತ್ಯತೀತ ಜನತಾದಳ ಕರ್ನಾಟಕದ ರೈತ ಸಮುದಾಯ ಮತ್ತು ಪ್ರಜ್ಞಾವಂತರ ವಿಶ್ವಾಸ ಕಳೆದುಕೊಂಡು ಅವನತಿಯ ಹಾದಿ ಹಿಡಿದಿದೆ. ಇಂತಹ ರೈತ ವಿರೋಧಿ ಹಾಗೂ ಜನವಿರೋಧಿ ಕ್ರಮದಿಂದಾಗಿ ಜಾತ್ಯತೀತ ಜನತಾದಳ ಕರ್ನಾಟಕದ ರಾಜಕೀಯ ಇತಿಹಾಸದ ಕಸದಬುಟ್ಟಿಗೆ ಸೇರಲು ಹೊರಟಿರುವುದು ದುರದೃಷ್ಟಕರ ಸಂಗತಿಯಾಗಿದೆ.
‘ಎಲ್ಲರನ್ನೂ ಎಲ್ಲ ಕಾಲಕ್ಕೂ ಮೋಸಗೊಳಿಸುವುದು ಸಾಧ್ಯವಿಲ್ಲ’ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಥಾಮಸ್ ಜೆಫರ್ಸನ್ ಅವರ ಮಾತುಗಳು ದೇವೇಗೌಡರ ಕುಟುಂಬದವರಿಗೆ ಅರ್ಥವಾಗಿಲ್ಲ. ಅನೈತಿಕ ಮಾರ್ಗ ಹಿಡಿದು ಗಳಿಸುವ ರಾಜ್ಯಾಧಿಕಾರ ಪ್ರಜೆಗಳ ಕಾಲಕಸಕ್ಕಿಂತಲೂ ಕೀಳೆಂಬ ಸತ್ಯದರ್ಶನ ಇವರಿಗೆ ಇದುವರೆಗೂ ಆಗಿಲ್ಲ. ಇತ್ತೀಚೆಗೆ ಜರುಗಿದ ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ದಳದವರು ಕರ್ನಾಟಕದ ಪ್ರಜಾಸತ್ತೆಗೆ ಬಹುದೊಡ್ಡ ಅಪಚಾರವೆಸಗಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿ.ಎಸ್. ಯಡಿಯೂರಪ್ಪಅವರಿಗೆ ಬೆಂಬಲಿಸದೇ ಬಿಜೆಪಿಗೆ ಬೆಂಬಲ ನೀಡಿದರೆ ದೇವೇಗೌಡರನ್ನು ಉಪರಾಷ್ಟ್ರಪತಿ ಮತ್ತು ಪ್ರಜ್ವಲ್ ರೇವಣ್ಣರನ್ನು ಕೇಂದ್ರದ ಮಂತ್ರಿ ಮಾಡುವ ಹುಸಿ ಭರವಸೆಗೆ ಇವರು ಮರುಳಾಗಿರುವುದು ನಗೆಪಾಟಲಿನ ಸಂಗತಿಯಾಗಿದೆ. ಜಾತ್ಯತೀತ ಜನತಾದಳದವರು ‘ಸುಮ್ಮನೆ ಜೀವಂತವಾಗಿ ಉಳಿಯುವುದಕ್ಕೂ ಘನತೆ ಗೌರವದಿಂದ ಬಾಳಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ’ ಎಂಬ ಅಂಬೇಡ್ಕರ್ ನುಡಿಯಿಂದ ಎಚ್ಚೆತ್ತುಕೊಂಡು ಬದುಕಿನಲ್ಲಿ ಸೂಕ್ತ ಪಾಠ ಕಲಿತು ತಮಗೆ ಅನ್ನ-ಅಧಿಕಾರ ನೀಡಿದ ಕರ್ನಾಟಕದ ಜನತೆಗೆ ದ್ರೋಹ ಬಗೆಯಬಾರದೆಂಬುದೇ ನಮ್ಮ ಅಭಿಲಾಷೆಯಾಗಿದೆ.