ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರು ಅತಂತ್ರ
► ಆನ್ಲೆನ್ ಪಠ್ಯ ಬೋಧನಾ ಕಾರ್ಯದಿಂದ ವಂಚಿತ ► ಪರಿಹಾರ, ಸೇವಾ ಭದ್ರತೆ ಒದಗಿಸಲು ಉಪನ್ಯಾಸಕರ ಒತ್ತಾಯ
ಸಾಂದರ್ಭಿಕ ಚಿತ್ರ
ಮಂಗಳೂರು: ಕಳೆದ ಹಲವು ವರ್ಷಗಳಿಂದ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಕೋವಿಡ್ನಿಂದಾಗಿ ಕೈ ಬಿಟ್ಟಿದೆ. ಇದರಿಂದ ಸಾವಿರಾರು ಅತಿಥಿ ಉಪನ್ಯಾಸಕರ ಬದುಕು ಈಗ ಅತಂತ್ರಗೊಂಡಿದೆ.
ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಈಗಾಗಲೇ 2, 4, 6ನೇ ಸೆಮಿಸ್ಟರ್ಗಳ ಆನ್ಲೈನ್ ತರಗತಿಗಳು ಆರಂಭಗೊಂಡಿವೆ. ಇಲ್ಲಿ ಖಾಯಂ ಉಪನ್ಯಾಸಕರು ಆನ್ಲೈನ್ ಬೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅತಿಥಿ ಉಪನ್ಯಾಸಕರು ಮಾತ್ರ ಇದರಿಂದ ವಂಚಿತರಾಗಿದ್ದಾರೆ. ಉಪನ್ಯಾಸ ವೃತ್ತಿಯನ್ನೇ ಅವಲಂಬಿಸಿದ್ದ ಬಹುತೇಕ ಅತಿಥಿ ಉಪನ್ಯಾಸಕರು ಭೀಕರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದಾಗಿ ಹಲವರು ಬದುಕು ಕಳೆದುಕೊಂಡಿದ್ದಾರೆ. ಕೆಲವರು ಕೂಲಿ ಕೆಲಸಕ್ಕೆ ಹೊರಟಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ವರ್ಷ ಅತಿಥಿ ಉಪನ್ಯಾಸಕರ ಸೇವೆಯನ್ನೇ ಕಡಿತ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಕೂಡ ಅತಿಥಿ ಉಪನ್ಯಾಸಕರಲ್ಲಿ ಆತಂಕ ಮೂಡಿಸುತ್ತಿದೆ.
ಅರೆಕಾಲಿಕ ಉಪನ್ಯಾಸಕರಿಗೆ ವರ್ಷದ ಎಲ್ಲ ತಿಂಗಳಲ್ಲೂ ವೇತನ ದೊರಕುವುದಿಲ್ಲ. ಕಾಲೇಜು ಅವಧಿವರೆಗೆ ಮಾತ್ರ ಸಂಬಳ ಸಿಗುತ್ತದೆ. ಪ್ರತಿ ವರ್ಷ ಎಪ್ರಿಲ್ವರೆಗೆ ನಡೆಯುತ್ತಿದ್ದ ಕಾಲೇಜುಗಳ ಕೆಲಸದ ಅವಧಿಯನ್ನು ಕೋವಿಡ್ನಿಂದಾಗಿ ಮಾರ್ಚ್ನಲ್ಲೇ ಮೊಟಕುಗೊಳಿಸಲಾಗಿದೆ. ರಾಜ್ಯದ ಅತಿಥಿ ಉಪನ್ಯಾಸಕರಿಗೆ ಮಾ.31ರ ನಂತರ ವೇತನ ನೀಡಿಲ್ಲ. ಇದರಿಂದ ಸಾವಿರಾರು ಉಪನ್ಯಾಸಕರು ಮೂರು ತಿಂಗಳಿಂದ ವೇತನ ಇಲ್ಲದೆ, ಬೇರೆ ಕಡೆ ಕೆಲಸವೂ ಕುಟುಂಬ ನಿರ್ವಹಿಸಲು ಪರದಾಡುವ ಪರಿಸ್ಥಿತಿ ತಲೆ ದೋರಿದೆ. ಈ ನಡುವೆ ಪರೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆ ನಡೆಯದೇ ಮೇ ತಿಂಗಳಲ್ಲಿ ಬರುತ್ತಿದ್ದ ಸ್ವಲ್ಪ ಪ್ರಮಾಣದ ಆದಾಯಕ್ಕೂ ಹೊಡೆತ ಬಿದ್ದಂತಾಗಿದೆ.
ಉಪನ್ಯಾಸಕರ ಕಡಿತ: 2019-20ರ ಶೈಕ್ಷಣಿಕ ವರ್ಷದ ಕೊನೆಯಿಂದ ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಅರೆಕಾಲಿಕ ಉಪನ್ಯಾಸಕರ ನೇಮಕಾತಿ ನಿಯಮಗಳು ಮತ್ತು ವಿದ್ಯಾರ್ಹತೆಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಬದಲಾವಣೆ ಮಾಡಲಾಗಿದೆ. ಇದರಿಂದ ಬಹುಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಾಗಿ ನಿರುದ್ಯೋಗದ ಸಮಸ್ಯೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಈ ಶೈಕ್ಷಣಿಕ ವರ್ಷ 2020-21ರ ಆರಂಭದಿಂದಲೇ ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ನೇಮಕಗೊಂಡಿರುವ ಅರೆಕಾಲಿಕ ಉಪನ್ಯಾಸಕರ ಸಂಖ್ಯೆಯಲ್ಲಿ 1,200ರಿಂದ 700ಕ್ಕೆ ಕಡಿತಗೊಂಡಿರುವುದು ಕೂಡ ಉಪನ್ಯಾಸಕರ ವಲಯದಲ್ಲಿ ಕಾರ್ಮೋಡ ಕವಿದಂತಾಗಿದೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಪ್ರಶಾಂತ್, 2020-21ರ ಹಣಕಾಸು ವರ್ಷದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಖಾಯಂ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಕೋವಿಡ್ ಸಂದರ್ಭದಲ್ಲೂ ಏಳನೇ ವೇತನ ಆಯೋಗದ ಸಂಬಳ ಹೆಚ್ಚಳ ಮಾಡಲಾಗಿದೆ. ಇಲ್ಲಿ ಅತಿಥಿ ಉಪನ್ಯಾಸಕರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಬೇಸರ ತರಿಸಿದೆ ಎನ್ನುತ್ತಾರೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಮನವಿ ಮೂಲಕ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸಲು ಒತ್ತಾಯಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲದಿರುವುದು ಆತಂಕ ಹೆಚ್ಚಿಸಿದೆ ಎನ್ನುತ್ತಾರೆ ಅವರು.
ಹೊಸ ಪಠ್ಯದಿಂದ ನಿರುದ್ಯೋಗ!
ತಾಂತ್ರಿಕ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಡಿಪ್ಲೊಮಾ ಕೋರ್ಸ್ನ ಹೊಸ ಸಿ-20 ಪಠ್ಯಕ್ರಮ ಜಾರಿಗೊಳಿಸಿತು. ಈ ಪಠ್ಯಕ್ರಮ ದೇಶದ ವಿವಿಧ ರಾಜ್ಯಗಳ ಡಿಪ್ಲೊಮಾ ಪಠ್ಯಕ್ರಮಕ್ಕಿಂತ ಅತಿಸಣ್ಣ ಪಠ್ಯಕ್ರಮವಾಗಿದ್ದು, ಇದು ಕೂಡ ನಿರುದ್ಯೋಗಕ್ಕೆ ನೇರ ಕಾರಣವಾಗಿದೆ. ನೂತನ ಪಠ್ಯಕ್ರಮದಂತೆ, ಡಿಪ್ಲೊಮಾದಲ್ಲಿ 12 ವಿಷಯಗಳನ್ನು ಕಡಿಮೆ ಮಾಡಲಾಗಿದೆ. ಇದರಿಂದ ಬೇರೆ ರಾಜ್ಯದ ಡಿಪ್ಲೊಮಾ ಪೂರೈಸಿದವರು ಬೆಂಗಳೂರಿಗೆ ಉದ್ಯೋಗಕ್ಕೆಂದು ಬಂದಲ್ಲಿ ರಾಜ್ಯದ ವಿದ್ಯಾರ್ಥಿಗಳು ಇವರೊಂದಿಗೆ ಸ್ಪರ್ಧಿಸುವುದು ತೀರಾ ಕಷ್ಟಕರವಾಗಲಿದೆ. ಈ ಹೊಸ ಪಠ್ಯಕ್ರಮ ಜಾರಿಗೆ ಬಂದ ಪರಿಣಾಮ ಬಹಳಷ್ಟು ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರು ಮತ್ತು ಖಾಸಗಿ ಪಾಲಿಟೆಕ್ನಿಕ್ ಪೂರ್ಣಕಾಲಿಕ ಉಪನ್ಯಾಸಕರು ಕೂಡ ನಿರುದ್ಯೋಗಿಗಳಾಗಿದ್ದಾರೆ ಎನ್ನುತ್ತಾರೆ ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಪ್ರಶಾಂತ್.
ಸರಕಾರಿ ಪಾಲಿಟೆಕ್ನಿಕ್ನ ವಿವಿಧ ಸೆಮಿಸ್ಟರ್ಗಳಿಗೆ ಆನ್ಲೈನ್ ಶಿಕ್ಷಣ ಬೋಧಿಸಲು ಅತಿಥಿ ಉಪನ್ಯಾಸಕರಿಗೂ ರಾಜ್ಯ ಸರಕಾರ ಅವಕಾಶ ನೀಡಬೇಕು. ಕಳೆದ ಮೂರು ತಿಂಗಳ ವೇತನ ನೀಡಬೇಕು. ಖಾಯಂ ಉಪನ್ಯಾಸಕರಿಗೆ ವೇತನ ಹೆಚ್ಚಿಸಿದಂತೆ ಅತಿಥಿ ಉಪನ್ಯಾಸಕರಿಗೂ ಸಂಬಳ ಹೆಚ್ಚಿಸಬೇಕು.
ಎಂ.ಪ್ರಶಾಂತ್,
ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ಅ ರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ