ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವ
ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣಾ ಸ್ಪರ್ಧೆಯಲ್ಲಿ ಉಳಿಯಲು ಪಕ್ಷವು ಹೇಗೆ ಬಲಪಂಥೀಯ ಮತ್ತು ಎಡಪಂಥೀಯ ನಿಲುವುಗಳ ವಾಸ್ತವಿಕ ಮಿಶ್ರಣವನ್ನು ತಂದು ದೇಶದ ಯುವ ಮತದಾರರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಎಷ್ಟರ ಮಟ್ಚಿಗೆ ಸಫಲವಾಗುತ್ತದೆ ನೊಡಬೇಕು. ಇದು ಕಾಂಗ್ರೆಸ್ ಪಕ್ಷದ ಮುಂದಿರುವ ಬಹು ದೊಡ್ಡ ಸವಾಲು.
ಭಾರತದ ಸಮಕಾಲೀನ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಮೇಲೆ ಗಾಂಧಿ ಕುಟುಂಬದ ಹಿಡಿತದ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಯಲ್ಲಿ ಎರಡು ಬಗೆಗಿನ ವಾದಗಳು ಮುಂಬದಿಗೆ ಬಂದಿರುವುದು ಗಮನಾರ್ಹ. ಹಲವರು ಗಾಂಧಿ ಮನೆತನದ ನಾಯಕತ್ವದಿಂದಲೇ ಪಕ್ಷ ಉಳಿಯಲು ಸಾಧ್ಯವೆಂದು ವಾದಿಸಿದರೆ ಮತ್ತೆ ಕೆಲವರು ಪಕ್ಷದ ಬೆಳವಣಿಗೆ ಗಾಂಧಿ ಕುಟುಂಬದ ಕಪಿ ಮುಷ್ಟಿಯಿಂದ ಹೊರಬಂದರೆ ಮಾತ್ರ ಸಾಧ್ಯ ಎನ್ನುವ ನಿಲುವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ವಾದಿಸುವವರು 2014ರಿಂದ ಪಕ್ಷವು ಚುನಾವಣೆಗಳಲ್ಲಿ ಎದುರಿಸಿದ ಪರಾಭವಕ್ಕೆ ಗಾಂಧಿ ಕುಟುಂಬದ ಕಳಪೆ ಮುಂದಾಳತ್ವವೇ ಕಾರಣ, ಅದರಿಂದಾಗಿ ಅವರು ಪಕ್ಷದ ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಪಕ್ಷದ ವಿಷಯಗಳಲ್ಲಿ ರಾಹುಲ್ ಗಾಂಧಿ ಅಧಿಕೃತವಾಗಿ ಸ್ಧಾನ ಹೊಂದಿಲ್ಲದಿದ್ದರೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇದರಿಂದ ಪಕ್ಷದ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ, ಹಾಗಾಗಿ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವುದು ಅವರ ನಿಲುವು.
ಪಕ್ಷದ ಅತ್ಯಂತ ಹಿರಿಯ ಸದಸ್ಯ ಅಶ್ವಿನಿ ಕುಮಾರ್(46 ವರ್ಷ ಪಕ್ಷದಲ್ಲಿ ಸೇವೆಸಲ್ಲಿಸಿದ್ದರು) ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದು ಇತ್ತೀಚಿನ ಬೆಳವಣಿಗೆ. ಆದರೆ, ಅವರ ರಾಜೀನಾಮೆಗೆ ಕಾರಣ ಅವರ ಮಗನಿಗೆ ಪಂಜಾಬಿನ ಪ್ರಸಕ್ತ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡದಿರುವುದಕ್ಕೆ ಸಂಬಂಧಿಸಿದೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷ ಪಂಜಾಬಿನ ಅಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಮತ್ತು ಅದರಿಂದ ಪಕ್ಷ ಅನುಭವಿಸುತ್ತಿರುವ ತೀವ್ರ ನಷ್ಟಗಳು ಮತ್ತು ಅವರು ಬಿಜೆಪಿ ಜೊತೆ ಕೈ ಜೊಡಿಸಿರುವುದರ ಪರಿಣಾಮವಾಗಿ ಚುನಾವಣೆಯಲ್ಲಿ ಅಧಿಕಾರವನ್ನೇ ಕಳೆದುಕೊಳ್ಳಬಹುದು ಎನ್ನುವ ಆತಂಕವೂ ಪಕ್ಷವನ್ನು ಕಾಡುತ್ತಿದೆ. ಆ ನಿರ್ಧಾರವನ್ನು ಸೋನಿಯಾ ಗಾಂಧಿಯವರಲ್ಲ, ಪ್ರಿಯಂಕಾ ಗಾಂಧಿ ಏಕ ಪಕ್ಷೀಯವಾಗಿ ತೆಗೆದುಕೂಂಡರು; ನಂತರ ಅದನ್ನು ರಾಹುಲ್ ಗಾಂಧಿ ಸಮರ್ಥಿಸಿದರು ಎಂದೂ ಟೀಕಿಸಲಾಗಿದೆ. ಈ ರೀತಿಯ ನಕಾರಾತ್ಮಕ ಬೆಳವಣಿಗೆಗಳಿಂದಾಗಿ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವ ಮಾತುಗಳು ಮುಂಬದಿಗೆ ಬಂದಿವೆ. ಇತ್ತೀಚೆಗೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ರನ್ನು ಪಕ್ಷವು ನಡೆಸಿಕೊಂಡ ರೀತಿ ಮತ್ತು ಅವರು ಪಕ್ಷದಿಂದ ಹೊರಗೆ ಹೋಗಬಹುದೆನ್ನಿಸಿದಾಗ ರಾಹುಲ್ ಗಾಂಧಿ ಪರಿಸ್ಥ್ಧಿತಿಯನ್ನು ನಿಭಾಯಿಸಿದ್ದನ್ನು ಗಮನಿಸಿದರೆ ಪಕ್ಷದ ನಿರ್ಣಯ ಪ್ರಕ್ರಿಯೆಗಳಲ್ಲಿನ ತಾತ್ಕಾಲಿಕತೆ ಗೊಚರವಾಗುತ್ತವೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ಹಾಗೂ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಕೂಡ ನಾಯಕತ್ವದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅವರ ಅನುಪಸ್ಥಿತಿಯ ಪ್ರಭಾವ ಈಗ ನಡೆಯುತ್ತಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮೇಲೆ ಬೀರಬಹುದೆಂಬ ಶಂಕೆ ಪಕ್ಷವನ್ನು ಬಾಧಿಸುತ್ತಿದೆ.
ಈ ಹಿಂದೆ ಮಾಜಿ ವಕ್ತಾರ ಸಂಜಯ್ ಝಾ ಪಕ್ಷವನ್ನು ಖಾಸಗಿ ಕಂಪೆನಿಗೆ ಹೋಲಿಸಿ, ‘‘ಕಂಪೆನಿ ನಷ್ಷ ಅನುಭವಿಸಿದರೆ ಮುಖ್ಯಸ್ಥನ ಬದಲಾವಣೆಯಾಗುತ್ತದೆ, ರಾಜಕೀಯ ಪಕ್ಷಗಳಲ್ಲಿ ಹಾಗೆ ಏಕಾಗಬಾರದು?’’ ಎಂದು ವಾದಿಸಿದ್ದು ನೆನಪಿಗೆ ಬರುತ್ತದೆ. ಹಿರಿಯ ಅನುಭವಿ ರಾಜಕಾರಣಿಗಳಾದ ಕಪಿಲ್ ಸಿಬಲ್, ಆನಂದ್ ಶರ್ಮಾ, ಶಶಿ ತರೂರ್, ಮನೀಶ್ ತಿವಾರಿ ಮತ್ತು ಗುಲಾಂ ನಬಿ ಆಝಾದ್ ಅವರು ಕೂಡ ಪಕ್ಷದ ನಾಯಕತ್ವ ಮತ್ತು ಅದರ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ಆಗಿಂದಾಗ ವ್ಯಕ್ತಪಡಿಸುತ್ತಲೇ ಬಂದಿರುವುದು ಗಮನಾರ್ಹವಾದ ವಿಷಯ. ಆದರೆ, ಸೋನಿಯಾ ಗಾಂಧಿಯವರ ಅಚಲ ಅನುಯಾಯಿಗಳಾದ ಎ.ಕೆ. ಆ್ಯಂಟನಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಗಾಂಧಿ ಕುಟುಂಬದ ಪರವಾಗಿ ಸದಾ ಕಾಲ ನಿಂತಿರುವುದೂ ಸತ್ಯ.
ವಿಸ್ತೃತವಾಗಿ ಅವಲೋಕಿಸಿದರೆ, ಸೋನಿಯಾ ಗಾಂಧಿಯವರು 20 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಮತ್ತು ಕಳೆದ ಎರಡು ವರ್ಷಗಳಿಂದ ಹಂಗಾಮಿ ಅಧ್ಯಕ್ಷರಾಗಿ ಪಕ್ಷದ ಐಕ್ಯತೆಯನ್ನು ಕಾಪಾಡಿರುವುದನ್ನು ಅಲ್ಲಗಳೆಯಲಾಗದು. ಆದರೆ, 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿನ ಹೀನಾಯ ಸೋಲಿನಿಂದಾಗಿ ಮತ್ತು ಪಕ್ಷದಲ್ಲಿ ರಾಹುಲ್ ಮತ್ತು ಪ್ರಿಯಾಂಕಾರವರ ಪ್ರಭಾವ ಹೆಚ್ಚಾಗುತ್ತಿರುವ ಮತ್ತು ಆಂತರಿಕ ಪ್ರಜಾಪ್ರಭುತ್ವ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, 2021ರಲ್ಲಿ ಅಸ್ತಿತ್ವಕ್ಕೆ ಬಂದ ಜಿ-23 ಗುಂಪು ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಮತ್ತು ಪಕ್ಷದ ಅಧ್ಯಕ್ಷ ಹುದ್ದೆಗೆ ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂದು ಒತ್ತಡ ಹಾಕಲಾರಂಭಿಸಿತು. ಈ ಕಾರಣದಿಂದಾಗಿ ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಿ ಅದರ ಪ್ರಕ್ರಿಯೆ ಆರಂಭಗೊಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡುವುದು ಸೋನಿಯಾ ಗಾಂಧಿಯವರ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಅವರು ತಮ್ಮ ಹೊಗಳುಭಟರಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಪಕ್ಷದ ಬಲವರ್ಧನೆಗೆ ಮುಕ್ತ ಮನಸ್ಸಿನಿಂದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಯುವ ಮತ್ತು ಹಿರಿಯ ಸದಸ್ಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಕ್ಕೆ ಮುಂದಾಗಬೇಕು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚಾರಿತ್ರಿಕ ನಾಯಕತ್ವದ ಬಗ್ಗೆ ಗಮನ ಹರಿಸುವುದೂ ಕೂಡ ಪ್ರಸ್ತುತ. 1885ರಲ್ಲಿ ಅಸ್ತಿತ್ವಕ್ಕೆ ಬಂದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮ ದಾಸ್ ಟಂಡನ್, ಜವಾಹರಲಾಲ್ ನೆಹರೂ, (ಮೂರು ಬಾರಿ,) ಯು. ಎನ್. ದೇಬರ್ (ನಾಲ್ಕು ಬಾರಿ), ಇಂದಿರಾ ಗಾಂಧಿ (ಮೂರು ಬಾರಿ), ಸಂಜೀವ ರೆಡ್ಡಿ, ಕೆ. ಕಾಮರಾಜ್ (ಎರಡು ಬಾರಿ), ಎಸ್. ನಿಜಲಿಂಗಪ್ಪ (ಎರಡು ಬಾರಿ), ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್ (ಮೂರು ಬಾರಿ) ಹಾಗೂ ಸೀತಾರಾಮ್ ಕೇಸರಿ ಪಕ್ಷದ ಅಧ್ಯಕ್ಷರಾಗಿದ್ದು ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಇದರಿಂದಾಗಿ ಪಕ್ಷಕ್ಕೆ ಗಾಂಧಿ ಕುಟುಂಬದ ನಾಯಕತ್ವ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತದೆ. ಹಾಗಾಗಿ ಪಕ್ಷದ ಚಾರಿತ್ರಿಕ ಬೆಳವಣಿಗೆಯನ್ನು ಗಮನಿಸಿ ಹಾಗೂ ಭವಿಷ್ಯದಲ್ಲಿ ಪಕ್ಷವು ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಅವಲೋಕಿಸಿ, ಪಕ್ಷದ ಮೇಲೆ ಬರುತ್ತಿರುವ ತಮ್ಮ ಕುಟುಂಬದ ಹಿಡಿತದ ಬಗೆಗಿರುವ ಆರೋಪಗಳಿಂದ ಮುಕ್ತರಾಗಬೇಕಾದರೆ ಸೋನಿಯಾ ಗಾಂಧಿಯವರು ಹಲವು ಮಹತ್ತರ ಬದಲಾವಣೆಗಳಿಗೆ ಅನುವು ಮಾಡಿಕೊಡಲು ಇದು ಸಕಾಲ. ಪಕ್ಷದ ಅಧ್ಯಕ್ಷರಾಗಿ ಓರ್ವ ಗಾಂಧಿಯೇತರರನ್ನು ಆಯ್ಕೆ ಮಾಡಿಸುವ ಚಾರಿತ್ರಿಕ ನಿರ್ಧಾರಕ್ಕೆ ಮುಂದಾಗಬೇಕು. ಈ ರೀತಿಯ ನಿರ್ಧಾರದಿಂದ, ಸೋನಿಯಾ ಗಾಂಧಿಯವರು ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ನಿರಂತರವಾಗಿ ಮಾಡುತ್ತಲೇ ಬಂದಿರುವ ಕುಟುಂಬ ರಾಜಕಾರಣದ ಟೀಕೆಯಿಂದ ಮುಕ್ತರಾಗಬಹುದು. ಅಲ್ಲದೆ ಪಕ್ಷದ ಕಾರ್ಯಕಾರಿ ಸಮಿತಿಗೂ ಪಾರದರ್ಶಕವಾಗಿ ಚುನಾವಣೆ ನಡೆಯಬೇಕಿದೆ. ತನ್ಮೂಲಕ, ಪಕ್ಷವನ್ನು ಬಲಪಡಿಸಿ 2024ರ ಚುನಾವಣೆಗೆ ಸಜ್ಜುಗೊಳಿಸಲು ಶ್ರಮಿಸುವುದಕ್ಕೆ ಇದಕ್ಕಿಂತ ಮಿಗಿಲಾದ ಅವಕಾಶವಿಲ್ಲ. ರಾಹುಲ್ ಗಾಂಧಿ ಪಕ್ಷದ ಪ್ರಮುಖ ನಾಯಕನಾಗಿ, ಲೋಕ ಸಭೆಯ ಸದಸ್ಯನಾಗಿ, ನರೇಂದ್ರ ಮೋದಿ ಸರಕಾರದ ಅಗ್ರಗಣ್ಯ ಟೀಕಾಕಾರನಾಗಿ ಮುಂದುವರಿದು ಅವರ ಸರಕಾರವನ್ನು ಪ್ರಜಾ ಕಟಕಟೆಯಲ್ಲಿ ನಿಲ್ಲಿಸುವ ಕೆಲಸವನ್ನು ಮುಂದುವರಿಸುವುದು ಸೂಕ್ತ.
ಜೊತೆಯಲ್ಲಿಯೇ, ಪಕ್ಷವು ಸೈದ್ಧಾಂತಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣಾ ಸ್ಪರ್ಧೆಯಲ್ಲಿ ಉಳಿಯಲು ಪಕ್ಷವು ಹೇಗೆ ಬಲಪಂಥೀಯ ಮತ್ತು ಎಡಪಂಥೀಯ ನಿಲುವುಗಳ ವಾಸ್ತವಿಕ ಮಿಶ್ರಣವನ್ನು ತಂದು ದೇಶದ ಯುವ ಮತದಾರರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಎಷ್ಟರ ಮಟ್ಚಿಗೆ ಸಫಲವಾಗುತ್ತದೆ ನೊಡಬೇಕು. ಇದು ಕಾಂಗ್ರೆಸ್ ಪಕ್ಷದ ಮುಂದಿರುವ ಬಹು ದೊಡ್ಡ ಸವಾಲು.
(ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು.)