ಗುಜರಾತ್ ಹತ್ಯಾಕಾಂಡವನ್ನು ಯಾಕೆ ಮರೆಯಲು ಸಾಧ್ಯವಾಗುತ್ತಿಲ್ಲ?
ಗುಜರಾತ್ ಹಿಂಸಾಚಾರದಲ್ಲಿ ನರೇಂದ್ರ ಮೋದಿಯವರಿಗೆ ಕ್ಲೀನ್ಚಿಟ್ ದೊರೆತ ಆನಂತರ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಬಗ್ಗೆ ಭಾರತದ ಹಾಗೂ ಜಗತ್ತಿನಾದ್ಯಂತದ ಹಲವು ಮಂದಿಗೆ ಮನವರಿಕೆಯಾಯಿತು. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶದ ಸಂಸತ್ ಚುನಾವಣೆಯಲ್ಲಿ ಮೋದಿಯವರ ಪ್ರಚಂಡ ಗೆಲುವಿನೊಂದಿಗೆ 2002ರ ಹತ್ಯಾಕಾಂಡದ ಪೆಡಂಭೂತಗಳು ಚಿರನಿದ್ದೆಗೆ ಸರಿಯುವಂತೆ ಮಾಡಲಾಯಿತು. ಆದರೆ ನಿಜಕ್ಕೂ ಅವು ಚಿರನಿದ್ದೆಗೆ ಸರಿದಿವೆಯೇ ಎಂಬುದನ್ನು ಕಾಲವಷ್ಟೇ ನಿರ್ಧರಿಸಬೇಕಾಗಿದೆ.
ಭಾಗ-1
2002ನೇ ಇಸವಿಯಿಂದೀಚೆಗೆ 20 ಧೂಳುಭರಿತ ಬೇಸಿಗೆಗಳು ಗುಜರಾತ್ ರಾಜ್ಯವನ್ನು ಕಾದಕಾವಲಿಯಂತೆ ಮಾಡಿವೆ. 2002ನೇ ಇಸವಿಯು ಗುಜರಾತ್ ರಾಜ್ಯದ ವಿಶಾಲವಾದ ಭಾಗಗಳು ಭಾರತಕ್ಕೆ ಸ್ವಾತಂತ್ರ ದೊರೆತ ಆನಂತರದ ಅತ್ಯಂತ ಘೋರವಾದ ಕೋಮು ಹತ್ಯಾಕಾಂಡದಿಂದ ಜರ್ಜರಿತವಾಗಿದ್ದವು. ಆ ಸಮಯದಲ್ಲಿ ಹಲವು ವಾರಗಳ ಕಾಲ ಗುಜರಾತ್ನ 25 ಜಿಲ್ಲೆಗಳ ಪೈಕಿ 20 ಜಿಲ್ಲೆಗಳು ದ್ವೇಷಹಿಂಸಾಚಾರದ ರುದ್ರತಾಂಡವದಿಂದ ತತ್ತರಿಸಿಹೋಗಿದ್ದವು. ಕೆಲವು ಜಿಲ್ಲೆಗಳಲ್ಲಿ ಕೋಮು ಗಲಭೆಗಳು ಹಲವು ವಾರಗಳವರೆಗೆ ಮುಂದುವರಿದವು. ಹಿಂಸಾಚಾರವನ್ನು ಕಿತ್ತೊಗೆಯಲು ಅಥವಾ ನಿಯಂತ್ರಿಸಲು ರಾಜ್ಯ ಸರಕಾರದ ಅಧಿಕಾರಿಗಳು ಕನಿಷ್ಠಕ್ರಮಗಳನ್ನು ಮಾತ್ರವೇ ಕೈಗೊಂಡಿದ್ದರು. ಬಹುತೇಕವಾಗಿ ಮುಸ್ಲಿಮರು ಸೇರಿದಂತೆ ಸುಮಾರು 1 ಸಾವಿರ ಮಂದಿಯ ನರಮೇಧ ನಡೆಯಿತು. ಕೆಲವು ಅನಧಿಕೃತ ಅಂದಾಜುಗಳ ಪ್ರಕಾರ ಗುಜರಾತ್ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ 2 ಸಾವಿರವನ್ನೂ ದಾಟಿದೆ.
ಈ ಹತ್ಯೆಗಳು ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ ಅತ್ಯಂತ ಬೀಭತ್ಸ ಕ್ರೌರ್ಯದಿಂದ ಕೂಡಿದ್ದವು. ಮಹಿಳೆಯರನ್ನು ಮತ್ತು ಮಕ್ಕಳನ್ನು ನಿಷ್ಕರುಣೆಯಿಂದ ಗುರಿಯಿರಿಸಿ ಹತ್ಯೆಗೈಯಲಾಗಿತ್ತು. ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಮಹಿಳೆಯರ ಲೈಂಗಿಕ ಅಪಮಾನ ನಡೆದುಹೋಗಿತ್ತು. ಹುಡುಗಿಯರು, ಹುಡುಗರು, ಮಹಿಳೆಯರು ಹಾಗೂ ಪುರುಷರ ಜೀವಂತದಹನದಿಂದಾಗಿಯೂ ಅತ್ಯಂತ ಭಯಾನಕವಾಗಿತ್ತು. ಸಾವಿರಾರು ಮನೆಗಳು ಹಾಗೂ ಅಂಗಡಿಗಳು, ಸಣ್ಣಪುಟ್ಟ ಗೂಡಂಗಡಿಗಳು, ಮರದ ಕೈಗಾಡಿಗಳು, ಆಟೊ-ರಿಕ್ಷಾಗಳು, ಟ್ಯಾಕ್ಸಿ ಜೀಪ್ಗಳು, ಹೊಟೇಲ್ಗಳು ಹಾಗೂ ಗ್ಯಾರೇಜ್ಗಳನ್ನು ಸುಟ್ಟು ಹಾಕಲಾಗಿತ್ತು, ಜಾನುವಾರುಗಳನ್ನು ಹಾಗೂ ಜೀವಮಾನದಲ್ಲಿ ಕೂಡಿಹಾಕಿದ್ದ ಉಳಿತಾಯದ ಹಣವನ್ನು ಗಲಭೆಕೋರರು ದೋಚಿದ್ದರು. ನೂರಾರು ಧಾರ್ಮಿಕ ಮಂದಿರಗಳು ಈ ಹಿಂಸಾಚಾರದಲ್ಲಿ ಮಲಿನಗೊಂಡವು ಇಲ್ಲವೇ ನಾಶವಾದವು. ಆಗ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಣ್ಗಾವಲಿನಲ್ಲೇ ಈ ಘೋರ ನರಮೇಧ ನಡೆದುಹೋಗಿತ್ತು. 12 ವರ್ಷಗಳ ಬಳಿಕ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಭರ್ಜರಿ ಬಹುಮತದೊಂದಿಗೆ ಈ ದೇಶವನ್ನು ಮುನ್ನಡೆಸಲು ಆಯ್ಕೆಯಾದರು. 2019ರಲ್ಲಿ ಅವರು ಇನ್ನಷ್ಟು ಅಧಿಕ ಬಹುಮತದೊಂದಿಗೆ ಗೆದ್ದುಬಂದರು. ಇತ್ತೀಚಿನ ದಶಕಗಳಲ್ಲಿಯೇ ಭಾರತದ ಸಂಸದೀಯ ಇತಿಹಾಸದಲ್ಲಿ ಸತತ ಎರಡು ಚುನಾವಣೆಗಳಲ್ಲಿ ನಿಚ್ಚಳ ಬಹುಮತವನ್ನು ಒಂದೇ ಪಕ್ಷವು ಪಡೆದ ದಾಖಲೆಯನ್ನು ಬಿಜೆಪಿ ತನ್ನದಾಗಿಸಿಕೊಂಡಿತು.
ಗಲಭೆಯ ಸಂದರ್ಭ ಪೊಲೀಸ್ ಅಧಿಕಾರಿಗಳು ತಟಸ್ಥರಾಗಿರುವಂತೆ ಪೊಲೀಸರಿಗೆ ನಿರ್ದೇಶನ ನೀಡುವ ಮೂಲಕ ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿದ ಮತ್ತು ಮುಸ್ಲಿಮರ ದ್ವೇಷಭಾಷಣ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಹರಡುವ ಮೂಲಕ ಕೋಮುಹಿಂಸಾಚಾರವನ್ನು ಪ್ರಚೋದಿಸಿದ ಆರೋಪದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಆರೋಪಿಯಾಗಿಸಲು ಪ್ರಯತ್ನಗಳು ನಡೆದಿದ್ದವು. ಆದರೆ ಮೋದಿ ವಿರುದ್ಧ ಯಾವುದೇ ವಿಚಾರಣಾತ್ಮಕ ಪುರಾವೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯಗಳು ತಿರಸ್ಕರಿಸಿದ್ದವು. 2002ರ ಹತ್ಯಾಕಾಂಡದಲ್ಲಿ ಪಾತ್ರವಹಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮೋದಿಯವರಿಗೆ ಜಗತ್ತಿನ ಹಲವಾರು ದೇಶಗಳಿಗೆ ಪ್ರವೇಶವನ್ನು ಒಂದು ದಶಕಕ್ಕೂ ಅಧಿಕ ಸಮಯದವರೆಗೆ ನಿರಾಕರಿಸಲಾಗಿತ್ತು. 2014ರ ಲೋಕಸಭಾ ಚುನಾವಣೆಯ ಬಳಿಕ ಜಗತ್ತಿನಾದ್ಯಂತದ ರಾಷ್ಟ್ರಗಳ ಮತ್ತು ಸರಕಾರಗಳ ವರಿಷ್ಠರು ಮೋದಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸತೊಡಗಿದರು. ತನ್ನ ಅಧಿಕಾರಾವಧಿಯ ಮೊದಲ ಎರಡು ವರ್ಷಗಳಲ್ಲಿಯೇ ಅತ್ಯಧಿಕವಾಗಿ ವಿದೇಶ ಪ್ರಯಾಣ ನಡೆಸಿದ ಭಾರತೀಯ ಪ್ರಧಾನಿಯೆನಿಸಿಕೊಂಡರು.
ಗುಜರಾತ್ ಹಿಂಸಾಚಾರದಲ್ಲಿ ನರೇಂದ್ರ ಮೋದಿಯವರಿಗೆ ಕ್ಲೀನ್ಚಿಟ್ ದೊರೆತ ಆನಂತರ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಬಗ್ಗೆ ಭಾರತದ ಹಾಗೂ ಜಗತ್ತಿನಾದ್ಯಂತದ ಹಲವು ಮಂದಿಗೆ ಮನವರಿಕೆಯಾಯಿತು. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶದ ಸಂಸತ್ ಚುನಾವಣೆಯಲ್ಲಿ ಮೋದಿಯವರ ಪ್ರಚಂಡ ಗೆಲುವಿನೊಂದಿಗೆ 2002ರ ಹತ್ಯಾಕಾಂಡದ ಪೆಡಂಭೂತಗಳು ಚಿರನಿದ್ದೆಗೆ ಸರಿಯುವಂತೆ ಮಾಡಲಾಯಿತು. ಆದರೆ ನಿಜಕ್ಕೂ ಅವು ಚಿರನಿದ್ದೆಗೆ ಸರಿದಿವೆಯೇ ಎಂಬುದನ್ನು ಕಾಲವಷ್ಟೇ ನಿರ್ಧರಿಸಬೇಕಾಗಿದೆ.
ಭಾರತದಲ್ಲಿ ಸರಾಸರಿ ಪ್ರತಿ ಇಬ್ಬರು ಭಾರತೀಯರ ಪೈಕಿ ಒಬ್ಬಾತ 25 ವರ್ಷಕ್ಕಿಂತ ಕೆಳಗಿನ ವಯಸ್ಸಿನವನಾಗಿದ್ದಾನೆ, ಹೀಗಾಗಿ ಆತ 1992ರಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯ ಆನಂತರವೇ ಜನಿಸಿದವನಾಗಿರುತ್ತಾನೆ. ಬಾಬರಿ ಮಸೀದಿ ಧ್ವಂಸ ಘಟನೆಯು ಭಾರತದಲ್ಲಿ ಬಹುಸಂಖ್ಯಾತವಾದಿ ರಾಜಕಾರಣದ ಪ್ರಭಾವ ಹಾಗೂ ಹೆಚ್ಚುತ್ತಿರುವ ಶಕ್ತಿಯ ಕುರಿತ ಕರೆಗಂಟೆಯಾಗಿದೆ, ಮಾತ್ರವಲ್ಲದೆ ಗಣರಾಜ್ಯವಾಗುವತ್ತ ಭಾರತದ ಪ್ರಯಾಸಕರ ಪಯಣದಲ್ಲಿ ಹಿಂದೂ ಶ್ರೇಷ್ಠತಾವಾದಿಗಳ ಚೊಚ್ಚಲ ಗೆಲುವು ಕೂಡಾ ಆಗಿದೆ. ದೇಶದ ಪ್ರತಿಯೊಬ್ಬ ಎರಡನೇ ಭಾರತೀಯನು ಈ ಆಕ್ರಮಣಕಾರಿ ಬಹುಸಂಖ್ಯಾತವಾದದ ಸಮಯದಲ್ಲಿ ಹುಟ್ಟಿ, ಬೆಳೆದವನಾಗಿದ್ದಾನೆ. ಭಾರತದ ಯುವಜನರಲ್ಲಿ ಅರ್ಧಾಂಶದಷ್ಟು ಮಂದಿ 2002ನೇ ಇಸವಿಯಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಗುಜರಾತ್ನ ರಕ್ತಸಿಕ್ತ ಹತ್ಯಾಕಾಂಡದ ಬಗ್ಗೆ ಅಲ್ಪಸ್ವಲ್ಪ ಅರಿವಷ್ಟೇ ಇರಬಹುದು ಅಥವಾ ಇಲ್ಲದೆಯೂ ಇರಬಹುದು.
100 ವರ್ಷಗಳ ಹಿಂದೆ ಹಿಂದೂ ಮಹಾಸಭಾ ಸ್ಥಾಪನೆಯಾದಾಗಲೇ ನೂತನ ಭಾರತದ ಆತ್ಮಕ್ಕಾಗಿನ ಸುಸ್ಥಿರವಾದ ಸಂಘರ್ಷವು ಆರಂಭಗೊಂಡಿತ್ತು. ಮೂಲತಃ ಸರ್ವಾದೇಶಕ್(ಅಖಿಲ ಭಾರತ) ಹಿಂದೂ ಮಹಾಸಭಾ ಎಂದು ಕರೆಯಲ್ಪಡುತ್ತಿದ್ದ ಈ ಸಂಘಟನೆಯನ್ನು 1915ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆದ ಸಂದರ್ಭ ಸ್ಥಾಪಿಸಲಾಗಿತ್ತು. 1921ರಲ್ಲಿ ಅದು ಅಖಿಲ ಭಾರತ ಹಿಂದೂ ಮಹಾಸಭಾವೆಂದು ಮರುನಾಮಕರಣಗೊಂಡಿತು ಮತ್ತು ಅದು ವಿನಾಯಕ ದಾಮೋದರ್ ಸಾವರ್ಕರ್ರಂತಹವರ ಪ್ರಭಾವಕ್ಕೆ ಒಳಗಾಯಿತು. ಎರಡು ದಶಕಗಳ ಬಳಿಕ ಆತ ಮಹಾತ್ಮಾಗಾಂಧೀಜಿಯವರ ಹತ್ಯೆ ಸಂಚಿನ ರೂವಾರಿಯೆಂದು ಶಂಕಿಸಲ್ಪಟ್ಟಿದ್ದರು. ಹಿಂದೂ ಶ್ರೇಷ್ಠತಾವಾದಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು 1925ರಲ್ಲಿ ಸ್ಥಾಪನೆಗೊಂಡಿತು. ಮಹಾತ್ಮಾಗಾಂಧೀಜಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾರತದ ಸ್ವಾತಂತ್ರಕ್ಕಾಗಿ ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದರೆ, ಹಿಂದೂ ಮಹಾಸಭಾ ಹಾಗೂ ಆರೆಸ್ಸೆಸ್, ತಮ್ಮದೇ ಆದ ಪರಿಕಲ್ಪನೆಯ ಭಾರತದ ಅಂದರೆ ಮೇಲ್ಜಾತಿಯ ಹಿಂದೂಗಳಿಗಾಗಿರುವ, ಅದರಲ್ಲಿ ಮುಸ್ಲಿಮರು, ಕ್ರೈಸ್ತರು ಹಾಗೂ ದಲಿತರು ಮತ್ತು ಆದಿವಾಸಿಗಳು ಎರಡನೇ ದರ್ಜೆಯ ನಾಗರಿಕರಾಗಿ ಮಾತ್ರ ಬದುಕಲು ಅವಕಾಶವಿರುವಂತಹ ರಾಷ್ಟ್ರದ ಸ್ಥಾಪನೆಗಾಗಿ ಹೋರಾಡಿದವು. ಆದರೆ ಬಹುತೇಕ ಹಿಂದೂಗಳು ಹಾಗೂ ಮುಸ್ಲಿಮರು ಮತ್ತು ಇತರ ಧರ್ಮೀಯರು ಈ ದೇಶವು ಪ್ರತಿಯೊಂದು ಧರ್ಮ, ಜಾತಿ ಹಾಗೂ ಭಾಷೆಯ ಜನರಿಗೆ ಸಮಾನವಾಗಿ ಸೇರಿದ್ದಾಗಿದೆಯೆಂಬ ಚಿಂತನೆಯನ್ನು ಅನುಮೋದಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ ದೊರೆತ ಕೆಲವೇ ತಿಂಗಳುಗಳ ಆನಂತರ, ಅಂದರೆ 1948ರಲ್ಲಿ ಮಹಾತ್ಮಾಗಾಂಧೀಜಿಯವರ ಹತ್ಯೆಯಾಯಿತು. ಹಿಂದೂಮಹಾಸಭಾ ಹಾಗೂ ಆರೆಸ್ಸೆಸ್ನ ಸಿದ್ಧಾಂತದಿಂದ ಪೋಷಿಸಲ್ಪಟ್ಟ ವ್ಯಕ್ತಿಯೊಬ್ಬ ಈ ಕೃತ್ಯವನ್ನು ಎಸಗಿದ್ದ. ಗಾಂಧೀಜಿಯ ಹತ್ಯೆಯ ಹಿನ್ನೆಲೆಯಲ್ಲಿ ಆರೆಸ್ಸೆಸನ್ನು ಭಾರತಕ್ಕೆ ಸ್ವಾತಂತ್ರ ದೊರೆತ ಆರಂಭದ ವರ್ಷಗಳಲ್ಲಿ ನಿಷೇಧಿಸಲಾಯಿತು ಮತ್ತು ಸಾರ್ವಜನಿಕ ಬದುಕಿನಿಂದ ಅದು ಹಿಂದಕ್ಕೆ ಸರಿಯಿತು. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ನ ನಿರಂಕುಶಾಧಿಕಾರ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಾನು ಸಂಘಟಿಸಿದ ಮಹಾಮೈತ್ರಿ ಕೂಟದಲ್ಲಿ ಕೈಜೋಡಿಸುವಂತೆ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಆರೆಸ್ಸೆಸನ್ನು ಆಹ್ವಾನಿಸಿದರು ಹಾಗೂ ಆನಂತರದ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿಯೂ ಆರೆಸ್ಸೆಸ್ ಕೈಜೋಡಿಸಿತು. ಪರ್ಯಾಯ ಭಾರತದ ಕುರಿತಾದ ತನ್ನ ಚಿಂತನೆಗೆ, ಚೊಚ್ಚಲ ನಿರ್ಣಾಯಕ ಗೆಲುವನ್ನು ಅದು 1992ರಲ್ಲಿ ಬಾಬರಿ ಮಸೀದಿಯ ಧ್ವಂಸದೊಂದಿಗೆ ಕಂಡಿತು.
ಈಗ ಇರುವ ಪ್ರತಿ ಎರಡನೇ ಭಾರತೀಯನು ಕೇವಲ ಹಿಂದುತ್ವ ರಾಷ್ಟ್ರವಾದದ ಉದಯದ ಸಮಯದಲ್ಲಿ ಜನಿಸಿದ್ದರು. ಗಾಂಧೀಜಿ, ಅಂಬೇಡ್ಕರ್, ನೆಹರೂ ಹಾಗೂ ವೌಲಾನಾ ಆಝಾದ್ ಬಗ್ಗೆ ಅವರಿಗೆ ಯಾವುದೇ ನೆನಪು ಇರಲಾರದು.
2002ರ ಗುಜರಾತ್ ಹಿಂಸಾಚಾರದ ಗಾಯಗಳು ಶಮನಗೊಂಡಿವೆಯೆಂದು ಹಲವಾರು ಮಂದಿ ಭಾವಿಸಿದ್ದಾರೆ. ಆ ತಿಂಗಳುಗಳ ಕಠೋರ ಹಾಗೂ ಕ್ರೂರವಾದ ಸಾಮೂಹಿಕ ದ್ವೇಷ ಅಪರಾಧಗಳು ಈಗ ಶಮನಗೊಂಡಿವೆ. ಮರೆಯಲು ಉತ್ತಮವಾದಂತಹ ಈ ಕರಾಳ ನೆನಪುಗಳನ್ನು 20 ವರ್ಷಗಳ ಬಳಿಕವೂ ಕೆದಕುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ನೆನಪುಗಳನ್ನು ಶಾಶ್ವತವಾಗಿ ತೊರೆಯಬೇಕೆಂಬುದು ನನಗೆ ಮನವರಿಕೆಯಾಗಿದೆ. ಆದರೆ 2002ರ ಕೋಮು ಸಂಘರ್ಷದ ಹಾಗೂ 1984ರಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಚಾರದ ಸಂತ್ರಸ್ತರ ನೋವು ಮಾಸಿದಲ್ಲಿ ಮತ್ತು ಅವರು ಅದನ್ನೆಲ್ಲಾ ಮರೆತು ಮುಂದೆ ಸಾಗುವುದನ್ನು ಆಯ್ಕೆ ಮಾಡಿಕೊಳ್ಳದೆ ಇರುವ ತನಕ ಈ ದೇಶಕ್ಕಾಗಲಿ ಅಥವಾ ಜಗತ್ತಿಗಾಗಲಿ ಅವುಗಳನ್ನು ಮರೆಯಲು ಹಕ್ಕಿಲ್ಲ.
ಗುಜರಾತ್ ಗಲಭೆಯ ಸಂದರ್ಭದಲ್ಲಿ ಖೇಡಾ ಜಿಲ್ಲೆಯ ಚಕ್ಲಾಸಿ ಗ್ರಾಮದಲ್ಲಿ ವಯೋವೃದ್ಧ ವಿಧವೆಯೊಬ್ಬಳು ತನ್ನ ಮನೆಯನ್ನು ಲೂಟಿ ಮಾಡಿದ ಹಾಗೂ ಸುಟ್ಟುಹಾಕಿದ ನೆರೆಹೊರೆಯವರ ವಿರುದ್ಧ ಸಾಕ್ಷ ನೀಡುವಾಗ ಯಾವುದೇ ಬೆದರಿಕೆಗೆ ಜಗ್ಗಲಿಲ್ಲ ಮತ್ತು ದೂರು ಹಿಂದೆಗೆಯುವಂತೆ ಆಸೆ ಆಮಿಷಗಳನ್ನು ಒಡ್ಡಿದರೂ ಮರುಳಾಗಲಿಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ತನ್ನ ಆಪ್ತ ಸ್ನೇಹಿತೆಯ ಪುತ್ರನಿಗೆ ಶಿಕ್ಷೆಯಾಗಬೇಕೆಂದು ಆಕೆ ಬಯಸುತ್ತಿದ್ದಾಳೆ. ''ಆತನ ತಾಯಿ ನನ್ನ ನೆರೆಹೊರೆಯವಳು. ನಾವಿಬ್ಬರೂ ಉತ್ತಮ ಸ್ನೇಹಿತೆಯರು. ಆ ಬಾಲಕನು ವಾಸ್ತವಿಕವಾಗಿ ನನ್ನ ಮನೆಯಲ್ಲಿಯೇ ಬೆಳೆದವನಾಗಿದ್ದಾನೆ. ಅಲ್ಲದೆ ನನ್ನ ಪುತ್ರನ ನಿಕಟ ಗೆಳೆಯನೂ ಹೌದು. ನನ್ನ ಮನೆಯಲ್ಲಿಯೇ ಆತ ಉಣ್ಣುತ್ತಿದ್ದ ಹಾಗೂ ದಿನವಿಡೀ ಆಡುತ್ತಿದ್ದ. ಬಾಲ್ಯದಿಂದ ಯುವಕನಾಗುವವರೆಗೂ ಆತನನ್ನು ನೋಡುತ್ತಾ ಬಂದಿದ್ದೇನೆ. ನಾನು ಆತನನ್ನು ನನ್ನ ಮಗನಂತೆ ಬೆಳೆಸಿದ್ದೇನೆ. ನನ್ನ ಮಗ ಹಾಗೂ ಆತನ ನಡುವೆ ಯಾವುದೇ ವ್ಯತ್ಯಾಸವನ್ನು ಕೂಡಾ ನಾನು ಕಂಡಿರಲಿಲ್ಲ. ಆದಾಗ್ಯೂ ಆತ ನನ್ನ ಮನೆಯನ್ನು ಲೂಟಿ ಮಾಡಿದ ಮತ್ತು ಮನೆಗೆ ಬೆಂಕಿ ಹಚ್ಚಿದ ಗುಂಪಿನ ನೇತೃತ್ವ ವಹಿಸಿದ್ದ.'' ಎಂದು ಆಕೆ ಹೇಳುತ್ತಾರೆ.
ಆ ವೃದ್ಧೆ ಈ ಪ್ರಕರಣವನ್ನು ಏಕಚಿತ್ತ ಹಾಗೂ ದೃಢತೆಯೊಂದಿಗೆ ಕೈಗೊಂಡಿದ್ದರು. ಆಕೆ ನ್ಯಾಯಾಲಯದಲ್ಲಿ ತನ್ನ ಸಾಕ್ಷವನ್ನು ಪೂರ್ಣಗೊಳಿಸಿದ ದಿನದಂದು ನ್ಯಾಯಾಧೀಶರು, ಆರೋಪಿಯನ್ನು ಗುರುತಿಸುವಿರಾ ಎಂದು ಪ್ರಶ್ನಿಸಿದರು. ಜನರಿಂದ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತಲೆ ತಗ್ಗಿಸಿ ಕುಳಿತಿದ್ದ ಯುವಕನನ್ನು 'ಬೇಟಾ ಲಲ್ಲಾ , ಉಟ್' (ಬೇಟಾ ಲಲ್ಲಾ, ಎದ್ದೇಳು) ಎಂದು ಕರೆದಳು. ಆಕೆಯ ಧ್ವನಿ ಗದ್ಗದಿತವಾಗಿತ್ತು. ನಾನು ಆಕೆಯನ್ನು ಆನಂತರ ಭೇಟಿಯಾದಾಗ ಆಕೆ, ''ನನಗೆ ಆತನ ನಿಜಹೆಸರು ಗೊತ್ತಿತ್ತು. ಆದರೂ ಲಲ್ಲಾ ಈಗ ಕೂಡಾ ನನ್ನ ಮಗನೇ ಆಗಿದ್ದಾನೆ. ಆದಾಗ್ಯೂ, ಆತನಿಗೆ ಶಿಕ್ಷೆಯಾಗುವುದನ್ನು ಎದುರು ನೋಡುತ್ತಿದ್ದೇನೆ'' ಎಂದರು. ಈ ಮಾತುಗಳನ್ನು ಆ ವೃದ್ಧೆ ಹೇಳಿದಾಗ ನ್ಯಾಯಾಲಯದಲ್ಲಿ ನೀರವ ವೌನ ನೆಲೆಸಿತ್ತು. ಎಲ್ಲರ ಕಣ್ಣುಗಳಲ್ಲಿ ತೇವ ತುಂಬಿತ್ತು. ನ್ಯಾಯಾಧೀಶರು ಕೂಡಾ ಭಾವುಕರಾದರು ಎಂದು ವಿಚಾರಣೆ ನಡೆದ ಸಮಯದಲ್ಲಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ನನ್ನ ಸಹದ್ಯೋಗಿ ಅಲ್ತಾಫ್ ಹೇಳಿದ್ದರು.
2002ರ ಗುಜರಾತ್ ಗಲಭೆಯ ಬಳಿಕ ಹಾಗೂ ತರುವಾಯ 2007 ಹಾಗೂ 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಬಳಿಕ ಗುಜರಾತ್ ರಾಜ್ಯದಲ್ಲಿ ಸಹಜತೆ, ಆರ್ಥಿಕ ಸಮೃದ್ಧಿ ಹಾಗೂ ಶಾಂತಿ ಮರುಸ್ಥಾಪನೆಯಾಯಿತು. ಆದರೆ ನಾನು 2002ರ ಬಳಿಕ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕೆ ಯತ್ನಿಸಲು, ಸುಮಾರು ಒಂದು ದಶಕಗಳ ಕಾಲ ಹೆಚ್ಚು ಕಮ್ಮಿ ತಿಂಗಳಿಗೊಮ್ಮೆ ಗುಜರಾತ್ಗೆ ಭೇಟಿ ನೀಡುತ್ತಿದ್ದೆ ಹಾಗೂ ಸುಮಾರು ಒಂದು ವರ್ಷ ನಾನು ಗುಜರಾತ್ನಲ್ಲಿ ನೆಲೆಸಿದ್ದೆ. ಆದರೆ ಈ ಹಲವಾರು ವರ್ಷಗಳಲ್ಲಿ ನಾನು ಭಯಗ್ರಸ್ತ ಮುಖಗಳನ್ನಷ್ಟೇ ಅಲ್ಲಿ ಕಂಡಿದ್ದೆ. ಹೀಗಾಗಿ ಅಲ್ಲಿರುವುದು ನಕಲಿ ಶಾಂತಿ ಎಂದೇ ನಾನು ಹೇಳುತ್ತಿದ್ದೆ.
2002ರಲ್ಲಿ ಅತ್ಯಂತ ಭೀಕರವಾದ ಹಿಂಸಾಚಾರಕ್ಕೆ ಸಾಕ್ಷಿಯಾದಂತಹ ರಾಜಧಾನಿ ಅಹ್ಮದಾಬಾದ್ನ ಸಬರಮತಿ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಗುಜರಾತ್ ರಾಜ್ಯದಂತೆ ಈ ನಗರವು ಕೂಡಾ ಕಹಿಯಾದ ರೀತಿಯಲ್ಲಿ ಮತ್ತು ಶಾಶ್ವತವಾಗಿ ವಿಭಜನೆಗೊಂಡಿಯೆಂದು ನನಗನಿಸುತ್ತದೆ. ಮುಸ್ಲಿಮರನ್ನು ಪ್ರತ್ಯೇಕವಾದ ಕೇರಿಗಳಲ್ಲಿ ವಾಸಿಸುವಂತೆ ಮಾಡಲಾಗುತ್ತಿದೆ. ಅಲ್ಲಿ ಸಾರ್ವಜನಿಕ ಸೇವೆಗಳು ಹಾಗೂ ಮೂಲಭೂತ ಸೌಕರ್ಯಗಳು ಅತ್ಯಂತ ಕಳಪೆಯಾಗಿವೆ. ಮಾಂಸದ ಖಾದ್ಯಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯ ಸಾಗಿಸುವುದಕ್ಕೂ ಅವರಿಗೆ ಅಡ್ಡಿಪಡಿಸಲಾಗುತ್ತಿದೆ. ಇದೀಗ ಅಹ್ಮದಾಬಾದ್ನ ಹೆಸರನ್ನು ಬದಲಾಯಿಸುವ ಮಾತನ್ನೂ ಆಡಲಾಗುತ್ತಿದೆ. ಶತಮಾನಗಳಿಂದ ದೌರ್ಜನ್ಯಗಳಿಗೆ ಒಳಗಾಗಿದ್ದ ದಲಿತರ ಹಾಗೆ ಸಹಜ ಸ್ಥಿತಿಗೆ ಮರಳಿದ ಗುಜರಾತ್ನಲ್ಲಿ ಮುಸ್ಲಿಮರು ಕೂಡಾ ದ್ವಿತೀಯ ದರ್ಜೆಯ ಪ್ರಜೆಗಳ ಹಾಗೆ ಪ್ರತ್ಯೇಕವಾಗಿ, ಭೀತಿಯೊಂದಿಗೆ ಬದುಕಲು ಕಲಿತಿದ್ದಾರೆ.