ಎಟಿಎಂಗೆ ತುಂಬಬೇಕಿದ್ದ 18 ಲಕ್ಷ ರೂ. ಕಸಿದು ಪರಾರಿಯಾದ ದುಷ್ಕರ್ಮಿಗಳು
ಬೆಂಗಳೂರು, ಅ.30:ಎಟಿಎಂಗೆ ತುಂಬಬೇಕಿದ್ದ 18 ಲಕ್ಷ ರೂ. ನಗದನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಇಲ್ಲಿನ ಜಾಲಹಳ್ಳಿ ಕ್ರಾಸ್ನಲ್ಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ ಬೈಕ್ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ಕರ್ಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಪ್ರತಿರೋಧ ಒಡಿದ್ದಕ್ಕೆ ಸಿಬ್ಬಂದಿ ಮೋಹನ್ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 18 ಲಕ್ಷ ರೂ. ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮೋಹನ್ ರಿಗೆ ಗಂಭೀರ ಗಾಯವಾಗಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ನಗದು ಹಣವನ್ನು ಸಿಬ್ಬಂದಿಗಳಾದ ಮೋಹನ್, ಸಾಗರ್ ಹಾಗೂ ಪ್ರಸನ್ನ ಎಂಬವರು ತಂದಿದ್ದರು. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿ ಕೊಂಡಿರುವ ಬಾಗಲಗುಂಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.