ಕುಸಿದ ಸಿಎಸ್ಟಿ ಮೇಲ್ಸೇತುವೆ
ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ರೈಲು ನಿಲ್ದಾಣದಲ್ಲಿ ಗುರುವಾರ ಪಾದಚಾರಿ ಮೇಲ್ಸೇತುವೆ ಕುಸಿದ ಪರಿಣಾಮ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಹಾಗೂ 36 ಮಂದಿ ಗಾಯಗೊಂಡಿದ್ದಾರೆ. ಮೇಲ್ಸೇತುವೆ ದುರಸ್ತಿ ನಡೆಯುತ್ತಿತ್ತು. ಆದರೂ ಈ ಸೇತುವೆಯನ್ನು ಬಳಸಲಾಗುತ್ತಿತ್ತು. ಸಂಜೆ 7:30ಕ್ಕೆ ಸೇತುವೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಸೇತುವೆ ಮುಂಬೈ ಸ್ಥಳೀಯಾಡಳಿತದ ಅಡಿಯಲ್ಲಿ ಬರುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಆದರೆ, ಶಿವಸೇನೆ ಶಾಸಕ ಅನಿಲ್ ದೇಸಾಯಿ ಈ ಆರೋಪವನ್ನು ತಿರಸ್ಕರಿಸಿದ್ದಾರೆ. ರೈಲ್ವೆ ಹಾಗೂ ಸ್ಥಳೀಯಾಡಳಿತ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕುಸಿದ ಸೇತುವೆಯ ಅವಶೇಷಗಳ ಅಡಿಯಲ್ಲಿ 10-12 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಎನ್ಡಿಆರ್ಎಫ್ ಆರಂಭದಲ್ಲಿ ಹೇಳಿತ್ತು. ಆದರೆ, ಆನಂತರ ಪೊಲೀಸರು ಅದನ್ನು ನಿರಾಕರಿಸಿದ್ದರು.