ಒಡೆದ ತಿವಾರೆ ಅಣೆಕಟ್ಟು: ಗ್ರಾಮಗಳು ಜಲಾವೃತ
ಮುಂಬೈ: ಭಾರೀ ಮಳೆ ಸುರಿದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತಿವಾರೆ ಅಣೆಕಟ್ಟು ಒಡೆದು ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. 15 ಮಂದಿ ನಾಪತ್ತೆಯಾಗಿದ್ದಾರೆ. ಅಣೆಕಟ್ಟಿನ ಕೆಳಭಾಗದಲ್ಲಿದ್ದ ಅಕ್ಲೆ, ರಿಕ್ಟೋಲಿ, ಒವಾಲಿ, ಕಲ್ಕವ್ನೆ ಹಾಗೂ ನಂದಿವಾಸೆ ಸಹಿತ 7 ಗ್ರಾಮಗಳು ಜಲಾವೃತವಾಗಿವೆ. ಅಣೆಕಟ್ಟು ಸಮೀಪ ಇದ್ದ ಕನಿಷ್ಠ 12 ಮನೆಗಳು ಹಾಗೂ ಸುಮಾರು 20 ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಶೋಧ ಕಾರ್ಯಾಚರಣೆ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸ್ಥಳಕ್ಕೆ ಧಾವಿಸಿದೆ. ಸರಕಾರಿ ಅಧಿಕಾರಿಗಳು, ಪೊಲೀಸರು ಹಾಗೂ ಸ್ವಯಂ ಸೇವಕರನ್ನು ಒಳಗೊಂಡ ಹೆಚ್ಚುವರಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
Next Story