ಬಿಜೆಪಿ ಶ್ರೀಮಂತರಿಗೆ ಮಾತ್ರ ಮಣೆ ಹಾಕುತ್ತಿದೆ: ವೀರಪ್ಪ ಮೊಯ್ಲಿ
ಬೈಂದೂರು, ಎ.22: ಕೇಂದ್ರ ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳ ಬೇಕಿದ್ದ ವಿಷಯಗಳು ನನೆಗುದಿಗೆ ಬಿದ್ದಿವೆ. ಇಲ್ಲಿ ಮೀನುಗಾರಿಕೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಮೀನುಗಾರರ ಸಮಸ್ಯೆ ಪರಿಹಾರ ಆಗಲಿಲ್ಲ. ಈ ಸಮಸ್ಯೆ ಕುರಿತ ಕ್ಯಾಬಿನೆಟ್ ನಲ್ಲಿ ಒಂದು ಬಾರಿಯೂ ಕೂಡ ಚರ್ಚಿಸಿಲ್ಲ ಎಂದು ಎಐಸಿಸಿ ಸಿಡಬ್ಲ್ಯುಸಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಉಪ್ಪುಂದ ಅಂಬಾಬಾಗಿಲು ಸಂತೆ ಮಾರ್ಕೆಟ್ ವಠಾರದಲ್ಲಿ ಸೋಮವಾರ ಆಯೋಜಿಸಲಾದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ ಪರ ಮತಯಾಚನೆ ಸಭೆಯಲ್ಲಿ ಅವರು ಮಾತನಾಡುತಿದ್ದರು.
ದೇಶದಲ್ಲಿ ಕಾಂಗ್ರೆಸ್ ಬಡವರ ಪರವಾದ ಕಾನೂನು ಮಾಡಲು ಹೊರಟಿದೆ. ಆದರೆ ಬಿಜೆಪಿಯವರು ಶ್ರೀಮಂತರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ದೇಶದ ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಪ್ಪಿಸುವ ಹುನ್ನಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇಲ್ಲಿ ಬದುಕುವ ಹಕ್ಕು ಬಡವರು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ದೇಶದ ಈ ಚುನಾವಣೆ ಯಲ್ಲಿ ಬಿಜೆಪಿಯನ್ನು ತೊಲಗಿಸಬೇಕಿದೆ ಎಂದರು.
ದೇಶದಲ್ಲಿ ಶೇ 86 ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ. ಮಹಿಳೆಯರ ವಿರುದ್ಧ ಶೋಷಣೆ ಹೆಚ್ಚಾಗಿದೆ. ಇದೆಲ್ಲವನ್ನೂ ಪ್ರಧಾನಿ ಮೋದಿ ಅವರು ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಮಹಿಳೆಯರು ಎಚ್ಚರಗೊಳ್ಳ ಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ ಮಾತನಾಡಿ, ಜನಪರ ಆಡಳಿತ ನೀಡಲು ಕ್ಷೇತ್ರದ ಜನರು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲಿನ ಸಮಸ್ಯೆಗಳಿಗೆ ಧ್ವನಿ ಆಗಿರುತ್ತೇನೆ ಎಂದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಬೈಂದೂರು ಬ್ಲಾಕ್ ಅಧ್ಯಕ್ಷ ಅರಿವಿಂದ ಪೂಜಾರಿ, ರಾಜು ಪೂಜಾರಿ, ರಘುರಾಂ ಶೆಟ್ಟಿ, ಶಂಕರ್ ಪೂಜಾರಿ, ಗೌರಿ ದೇವಾಡಿಗ, ಜಗದೀಶ್ ದೇವಾಡಿಗ, ಮಂಜು ಪೂಜಾರಿ, ಭರತ್ ದೇವಾಡಿಗ, ಸುಭ್ರಮಣ್ಯ ಭಟ್, ಡಿ.ಆರ್.ರಾಜು ಮೊದ ಲಾದವರು ಉಪಸ್ಥಿತರಿದ್ದರು.