ಭಾರತದ ‘ಆತ್ಮ’, ಸಂವಿಧಾನವನ್ನು ರಕ್ಷಿಸಬೇಕಾದ ಚುನಾವಣೆಯಿದು: ರಣದೀಪ್ಸಿಂಗ್ ಸುರ್ಜೇವಾಲಾ
ಉಡುಪಿ, ಎ.22: ಅಪಾಯದಲ್ಲಿರುವ ಭಾರತದ ‘ಆತ್ಮ’ ಹಾಗೂ ಸಂವಿಧಾನವನ್ನು ರಕ್ಷಿಸಬೇಕಾದ ಚುನಾವಣೆ ಇದಾಗಿದೆ. ಹೀಗಾಗಿ ಪ್ರತಿಯೊಬ್ಬ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ರಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಚುನಾವಣೆ ಸಂಬಂಧ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಕರ್ನಾಟಕ ರಾಜ್ಯ ಸರಕಾರ ತನ್ನ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ, ಅನುಷ್ಠಾನಗೊಳಿಸಿದಾಗ ಅದನ್ನು ಅಪಹಾಸ್ಯ ಮಾಡಿ ತೀವ್ರವಾಗಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಏಕೈಕ ಕರ್ನಾಟಕ ಗ್ಯಾರಂಟಿ ಮೋಡೆಲ್ನ್ನು ಇದೀಗ ಅಪಹರಿಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯ ಸರಕಾರದ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಿದ್ದ ಸೌಲಭ್ಯಗಳನ್ನು ಕೇಳಿದಾಗಲೆಲ್ಲಾ ‘ಚೋಂಬ’ನ್ನು ನೀಡಿದ್ದ ಬಿಜೆಪಿ ಸರಕಾರ, ಬರಪೀಡಿತ ಪ್ರದೇಶಗಳ ಜನರಿಗೆ ನೀಡಲೇಬೇಕಿದ್ದ ನ್ಯಾಯಬದ್ದ ಪರಿಹಾರವನ್ನು ಕೇಳಿದಾಗಲೂ ತೋರಿಸಿದ್ದು ಇದೇ ‘ಚೋಂಬ’ನ್ನು ಎಂದರು.
ರಾಜ್ಯ ಸರಕಾರ ಬರಪರಿಹಾರಕ್ಕಾಗಿ 18,172 ಕೋಟಿ ರೂ.ಗಳನ್ನು ಕೇಳಿದಾಗ ಕೇಂದ್ರ ಸರಕಾರ ನಯಾಪೈಸೆಯನ್ನು ಬಿಡುಗಡೆ ಮಾಡದೇ ಇದ್ದಾಗ ಸಿದ್ಧರಾಮಯ್ಯ ಸರಕಾರ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಬೇಕಾಯಿತು ಎಂದರು. ಕರ್ನಾಟಕದ ಜನತೆ ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದಾಗ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಜ್ಯದ ಜನತೆಗೆ ಕೊಡುಗೆಯಾಗಿ ನೀಡಿದ್ದು ‘ಚೋಂಬನ್ನು’ ಎಂದು ಸುರ್ಜೇವಾಲಾ ಲೇವಡಿ ಮಾಡಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಹೋರಾಡುತ್ತಿದೆ.ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ವಾಗಿರುವ ಕರ್ನಾಟಕ ನೀಡುವ 100ರೂ. ತೆರಿಗೆಯಲ್ಲಿ ಮರಳಿ ಬರುತ್ತಿರುವುದು ಕೇವಲ 13ರೂ. ಮಾತ್ರ ಎಂದರು.
ಈ ಚುನಾವಣೆ ದೇಶದ ಸಂವಿಧಾನವನ್ನು ಸಂರಕ್ಷಿಸುವ ಚುನಾವಣೆ ಯಾಗಿದೆ. ಪಕ್ಷ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುವುದಾಗಿ ಕರ್ನಾಟಕದ ಅನಂತಕುಮಾರ್ ಹೆಗಡೆ ಸೇರಿದಂತೆ ಸಾಕಷ್ಟು ಬಿಜೆಪಿ ನಾಯಕರು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ದೇಶದ ಆತ್ಮವನ್ನು ರಕ್ಷಿಸುವ ಯುದ್ಧ ಇದಾಗಿದೆ ಎಂದು ಸುರ್ಜೇವಾಲಾ ನುಡಿದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಘೋಷಿಸಿರುವ ಐದು ಗ್ಯಾರಂಟಿಗಳು ದೇಶಕ್ಕೆ ಅಪರೂಪದ್ದು, ಇದನ್ನು ಬಹಳಷ್ಟು ರಾಜ್ಯಗಳು ಈಗ ಜಾರಿಗೊಳಿಸುತ್ತಿವೆ. ಕೇಂದ್ರ ಸರಕಾರವೂ ಇದನ್ನು ನಕಲು ಮಾಡಿ ಮೋದಿ ಗ್ಯಾರಂಟಿ ಎಂದು ಕರೆದುಕೊಳ್ಳುತ್ತಿದೆ ಎಂದ ಅವರು, ರಾಜ್ಯ ಸರಕಾರ ಪ್ರತಿ ವರ್ಷ ಗ್ಯಾರಂಟಿಗಾಗಿ 58,000ಕೋಟಿ ರೂ.ಗಳನ್ನು ವ್ಯಯಿಸು ತ್ತಿದೆ. ಇದರಿಂದ ಬಡ ಕುಟುಂಬ, ಮಹಿಳೆಯರು ಸ್ವಾವಲಂಬಿ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.
ರಾಜ್ಯ ಸರಕಾರದ ಗ್ಯಾರಂಟಿ ಮಾದರಿಯಲ್ಲೇ ಕಾಂಗ್ರೆಸ್ ಪಕ್ಷ ಈ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗ್ಯಾರಂಟಿಯನ್ನು ಜಾರಿಗೊಳಿಸುವ ಘೋಷಣೆ ಮಾಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಸಲೀಂ ಅಹ್ಮದ್, ವಿನಯಕುಮಾರ್ ಸೊರಕೆ, ಎಂ.ಎ. ಗಫೂರ್, ಸೂರಜ್ ಹೆಗಡೆ, ವಿಜಯ ಮುಳುಗುಂದ್, ಅಶೋಕ್ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆ ಬೈಲ್, ಮುನಿಯಾಲು ಉದಯ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.