ಸಂವಿಧಾನ ಉಳಿಸಲು ಪದ್ಮರಾಜ್ಗೆ ಬೆಂಬಲ: ದಸಂಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂವಿಧಾನ ಪ್ರಜಾಪ್ರಭುತ್ವ ಉಳಿಸಲು, ಬಿಜೆಪಿಯನ್ನು ಸೋಲಿಸಲು ಇಂಡಿಯಾ ಕೂಟದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಬೆಂಬಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ) ದ.ಕ. ಜಿಲ್ಲಾ ಸಮಿತಿ ತಿಳಿಸಿದೆ.
ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಜಾರಿಯಾಗಿ ಏಳು ದಶಕ ಕಳೆದರೂ ಇನ್ನೂ ಸಾಮಾಜಿಕ, ಆರ್ಥಿಕ ಅಸಮಾನತೆ ನಿವಾರಣೆಯಾಗಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಬಿಜೆಪಿ ಸರಕಾರ ಅಭಿವೃದ್ಧಿ ಕಡೆ ಗಮನ ನೀಡದೆ ಜನರ ಮನಸ್ಸಿನಲ್ಲಿ ದೇವರು, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತಿ ಕೋಮುವಾದ ಸೃಷ್ಟಿಸಿ ಸಂವಿಧಾನದ ಮುಲತತ್ವ ವನ್ನು ಬುಡಮೇಲು ಮಾಡಲು ಮುಂದಾಗಿದೆ. ಪ್ರಧಾನಿಯವರು ಹತ್ತು ವರ್ಷಗಳಿಂದ ಸುಳ್ಳು ಭರವಸೆ ನೀಡಿ, ರೈತ, ಕಾರ್ಮಿಕ, ಮಹಿಳೆ, ಅಭಿವೃದ್ಧಿ ಕಡೆಗೆ ಗಮನ ಹರಿಸದೆ ಕಾರ್ಪೋರೇಟ್ ಕಂಪೆನಿಗಳಿಗೆ ಸಾಕಷ್ಟು ಸಾಲ ನೀಡಿ, ಅವರನ್ನು ಉದ್ಧಾರ ಮಾಡಲು ಹೊರಟಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಮಟ್ಟದಲ್ಲಿ ತೀರ್ಮಾನಿಸಿದಂತೆ ಪದ್ಮರಾಜ್ ಅವರಿಗೆ ಮತ ನೀಡಲು ನಿರ್ಧರಿಸಿದ್ದೇವೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಜೊತೆ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ವಿನಂತಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಘು ಕೆ. ಎಕ್ಕಾರು, ಸರೋಜಿನಿ ಬಂಟ್ವಾಳ, ಪುರಂದರ ಕೆರೆಕಾಡ್, ರಾಜಯ್ಯ ಮಂಗಳೂರು, ನಾಗೇಶ್ ಬಲ್ಮಠ, ಮಂಜಪ್ಪ ಪುತ್ರನ್ ಇದ್ದರು.