ದ.ಕ. ಜಿಲ್ಲೆಯ ಕೋಮು ಸಾಮರಸ್ಯಕ್ಕಾಗಿ ಮತ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್
ಮಂಗಳೂರು: ಕಳೆದ 33 ವರ್ಷಗಳಿಂದ ದ.ಕ. ಜಿಲ್ಲೆ, ಸಾಮರಸ್ಯದ ತುಳುನಾಡು ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯೊಂದಿಗೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮತ್ತೆ ಜಿಲ್ಲೆಯನ್ನು ಸಾಮರಸ್ಯದ ನಾಡಾಗಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತನ್ನನ್ನು ಗೆಲ್ಲಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತದಾರರಿಗೆ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಪರಸ್ಪರ ಪ್ರೀತಿ ಹಂಚುವ ಮೂಲಕ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಮತ ಯಾಚಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕಾರ್ಯ ನಡೆಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕಾಂಗ್ರೆಸ್ ಈ ದೇಶವನ್ನು ಕಟ್ಟುವಲ್ಲಿ ಆರಂಭದಿಂದ ಮಾಡಿದ ತ್ಯಾಗ, ಸಾಧನೆಗಳ ಜತೆಗೆ ಕರ್ನಾಟಕ ರಾಜ್ಯ ಸರಕಾರ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವುದನ್ನು ಮುಂದಿಟ್ಟು ಮತ ಯಾಚನೆ ಮಾಡಲಾಗಿದೆ. ಬಿಜೆಪಿಯ ದ್ವೇಷ ರಾಜಕಾರಣ, ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಮಾಯಕ ರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ, ಪೋಷಕರನ್ನು ಅನಾಥವಾಗಿಸಿರುವ, ಯುವಕರು ಜೈಲು ಪಾಲಾಗುವಂತೆ ಮಾಡಿದ ವಿಷಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. ಜನ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಜಿಲ್ಲೆಯಲ್ಲಿ ಸತತ ಸೋಲಿನ ಸರಪಳಿಯಿಂದ ಹೊರಬಂದು ಜಯಗಳಿಸಲಿದೆ ಎಂದು ಪದ್ಮರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಸೂಚನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಅಪಪ್ರಚಾರ ನಡೆಸಿದೆ. ಆದರೆ ಅದ್ಯಾವುದಕ್ಕೂ ಕಿವಿಗೊಡದೆ, ದ್ವೇಷಸಾಧಿಸದೆ ಪ್ರೀತಿಯಿಂದ ಚುನಾವಣೆ ಎದುರಿಸಬೇಕೆಂಬುದು ನನ್ನ ಕಳಕಳಿಯ ಮನವಿ. ಈ ಬಾರಿ ಕಾಂಗ್ರೆಸ್ ಪರ ಮತಯಾಚನೆಗಾಗಿ ಹಿಂದೆಂಗಿಂತಲೂ ಪರಿಶ್ರಮದಿಂದ ದುಡಿದಿರುವ ಕಾರ್ಯಕರ್ತರು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಪಕ್ಷದಿಂದ ಮುಂದೆಯೂ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಆಗಲಿದೆ ಎಂದವರು ಹೇಳಿದರು.
ಬಡ ವರ್ಗದ ಮಹಿಳೆಯರಿಗೆ ತಲಾ 1 ಲಕ್ಷರೂ. ವಾರ್ಷಿಕ ಗ್ಯಾರಂಟಿ, ರೈತರ ಸಾಲಮನ್ನಾ, ಶಿಕ್ಷಣ ಸಾಲ ಮನ್ನಾ ಸೇರಿ ದಂತೆ ಕೇಂದ್ರದಲ್ಲಿ ಕಾಂಗ್ರೆಸ್ ಘೋಷಿಸಿರುವ ಹೊಸ ಗ್ಯಾರಂಟಿಗಳ ಬಗ್ಗೆಯೂ ಪ್ರಚಾರ ವೇಳೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. 33 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಗಿರುವ ಅಭಿವೃದ್ಧಿ , ಸಾಧನೆ ಶೂನ್ಯ ಎಂದು ಹೇಳಿದ ಪದ್ಮರಾಜ್, ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರನ್ನು ಕಾನೂನುಬಾಹಿರ ಕೆಲಸ ಮಾಡುವಂತೆ ಮಾಡಿ ಅವರು ಜೈಲು ಸೇರುವಂತೆ ಮಾಡಿ ಅವರ ಪೋಷಕರನ್ನು ಅನಾಥವಾಗಿಸಿರುವುದೇ ಬಿಜೆಪಿಯ ಸಾಧನೆ. ಇದು ಬಿಜೆಪಿಯ ದೇಶಪ್ರೇಮವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಿಂದ ರಾಜ್ಯದಲ್ಲಿ ಅನುಷ್ಟಾನಗೊಂಡಿರುವ ಗ್ಯಾರಂಟಿ ಯೋಜನೆಗಳು ಹಾಗೂ ಈಗಾಗಲೇ ಕೇಂದ್ರ ಮಟ್ಟ ದಲ್ಲಿಯೂ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿಯ ಮತದಾರರು ಕೂಡಾ ಮತಯಾ ಚನೆಯ ಸಂದರ್ಭ ನಗುಮುಖದಿಂದಲೇ ಮಾತನಾಡಿಸಿರುವ ರೀತಿ ಬದಲಾವಣೆಯನ್ನು ಬಯಸಿರುವುದು ಸ್ಫಷ್ಟವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು.
ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಮಹಾಬಲ ಮಾರ್ಲ, ನೀರಜ್ಪಾಲ್, ಶುಭೋದಯ ಆಳ್ವ, ವಿಕಾಸ್ ಶೆಟ್ಟಿ, ಶಾಹುಲ್ ಹಮೀದ್, ಜಿತೇಂದ್ರ, ಮುಹಮ್ಮದ್, ಸವಾದ್ ಸುಳ್ಯ ಮೊದಲಾವದರು ಉಪಸ್ಥಿತರಿದ್ದರು.
ತುಳುನಾಡಿನ ಸಂಸ್ಕೃತಿ, ದೈವದೇವರು, ಕಂಬಳ, ಯಕ್ಷಗಾನ, ಜನಪದ ಕ್ರೀಡೆಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇದೆ. ಮುಂಬೈನಂತೆ ಮಂಗಳೂರು ನಗರವೂ ರಾತ್ರಿ ಹೊತ್ತಿನಲ್ಲೂ ವಾಣಿಜ್ಯ ನಗರಿಯಾಗಿ ಆರ್ಥಿಕವಾಗಿ ಸದೃಢವಾಗುವ ಎಲ್ಲಾ ಅರ್ಹತೆಯನ್ನು ಪಡೆದಿದೆ. ಆದರೆ ಬಿಜೆಪಿಯ ಧರ್ಮಾಧಾರಿತ ದ್ವೇಷದಿಂದಾಗಿ ಇಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದಂತಹ ಬೃಹತ್ ಕೈಗಾರಿಕಾ ಘಟಕಗಳು, ಏರ್ಪೋರ್ಟ್, ಬಂದರು, ರೈಲ್ವೇ, ಹೆದ್ದಾರಿ ಹೊರತುಪಡಿಸಿ, ಬಿಜೆಪಿ ಅವಧಿಯಲ್ಲಿ ಅಂತಹ ಯಾವುದೇ ಕೊಡುಗೆ ಜಿಲ್ಲೆಗೆ ದೊರಕಿಲ್ಲ. ಇಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಪರದೇಶವನ್ನು ಅವಲಂಬಿಸಿದ ಕಾರಣ, ಅವರ ಪೋಷಕರು ಇಲ್ಲಿ ಮಕ್ಕಳಿಂದ ದೂರವಾಗುವಂತಾಗಿದೆ. ಅದಕ್ಕೆಲ್ಲಾ ಪರಿಹಾರವಾಗಿ ಜಿಲ್ಲೆಯಲ್ಲಿ ಸೂಕ್ತ ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗಿ ಅಲ್ಲಿ ಸಲಹಾಗಾರರಾಗಿರುವ, ಇಲ್ಲಿನ ವಿವಿಧ ವಿಭಾಗಗಳ ತಜ್ಞರನ್ನು ಒಗ್ಗೂಡಿಸಿ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ನೀಲನಕ್ಷೆಯೊಂದನ್ನು ತಯಾರಿಸಿ ಜಿಲ್ಲೆಯ ಅಭಿವೃದ್ಧಿ ಒತ್ತು ನನ್ನ ಗುರಿ ಎಂದು ಪದ್ಮರಾಜ್ ಆರ್. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.