ರಾಮದೇವ್ ವಿರುದ್ಧದ ಪ್ರಕರಣಗಳ ಸ್ಥಿತಿಗತಿ ವರದಿ ಸಲ್ಲಿಸಲು ಬಿಹಾರ ಮತ್ತು ಛತ್ತೀಸ್ಗಡಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಅಲೋಪತಿಯಿಂದ ಕೋವಿಡ್ ಗುಣಪಡಿಸಲು ಸಾಧ್ಯವಿಲ್ಲ ಎಂದಿದ್ದ ಯೋಗಗುರು
ರಾಮದೇವ್ | PC : PTI
ಹೊಸದಿಲ್ಲಿ: ಅಲೋಪತಿಯಿಂದ ಕೋವಿಡ್ ಗುಣಪಡಿಸಲು ಸಾಧ್ಯವಿಲ್ಲ ಎಂಬ ಟೀಕೆಗಾಗಿ ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸಂಯೋಜಿಸುವಂತೆ ಮತ್ತು ದಿಲ್ಲಿಗೆ ವರ್ಗಾಯಿಸುವಂತೆ ಕೋರಿ ಯೋಗಗುರು ರಾಮದೇವ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಡೆಸಿತು.
ಅರ್ಜಿಯನ್ನು 2021ರಲ್ಲಿ ಸಲ್ಲಿಸಲಾಗಿದೆ ಮತ್ತು ದೋಷಾರೋಪ ಪಟ್ಟಿಗಳು ಸಲ್ಲಿಕೆಯಾಗಿರಬೇಕು ಎನ್ನುವುದನ್ನು ಗಮನಿಸಿದ ನ್ಯಾಯಾಲಯವು ಎಫ್ಐಆರ್ಗಳ ಸ್ಥಿತಿಗತಿ ಮತ್ತು ಸಲ್ಲಿಕೆಯಾದ ದೋಷಾರೋಪ ಪಟ್ಟಿಗಳಿಗೆ ಸಂಬಂಧಿಸಿದಂತೆ ವರದಿಯನ್ನು ತನಗೆ ಎರಡು ವಾರಗಳಲ್ಲಿ ಸಲ್ಲಿಸುವಂತೆ ಬಿಹಾರ ಮತ್ತು ಛತ್ತೀಸ್ಗಡ ಸರಕಾರಗಳಿಗೆ ಸೂಚಿಸಿತು.
ಪ್ರಕರಣದಲ್ಲಿ ದೂರುದಾರರನ್ನು ಸೇರಿಸುವಂತೆ ರಾಮದೇವ್ ಪರ ಹಿರಿಯ ನ್ಯಾಯವಾದಿ ಸಿದ್ಧಾರ್ಥ ದವೆಯವರಿಗೆ ಸೂಚಿಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು ವಿಚಾರಣೆಯನ್ನು ರಜೆಯ ಬಳಿಕ ಮುಂದೂಡಿತು.
ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ದೂರುಗಳ ಆಧಾರದಲ್ಲಿ ಬಿಹಾರ ಮತ್ತು ಛತ್ತೀಸ್ಗಡಗಳಲ್ಲಿ ರಾಮದೇವ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇವಲ್ಲದೆ ಐಎಂಎದ ಪಾಟ್ನಾ ಮತ್ತು ರಾಯಪುರ ಘಟಕಗಳೂ ರಾಮದೇವ ವಿರುದ್ಧ ದೂರುಗಳನ್ನು ದಾಖಲಿಸಿವೆ.
ಪತಂಜಲಿ ಆಯುರ್ವೇದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ರಾಮದೇವ್ ಸುಪ್ರೀಂ ಕೋರ್ಟ್ನಿಂದ ನ್ಯಾಯಾಂಗ ನಿಂದನೆ ಕ್ರಮಗಳನ್ನೂ ಎದುರಿಸುತ್ತಿದ್ದಾರೆ.