ನೇತ್ರಾವತಿ ನದಿ ವೀರೇಂದ್ರ ಹೆಗ್ಗಡೆ, ಪೇಜಾವರರ ಆಸ್ತಿಯಲ್ಲ: ಕೆ.ಬಿ. ಸಿದ್ದಯ್ಯ
ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎತ್ತಿನಹೊಳೆ ಯೋಜನೆ ಪರ ಕೂಗು
ತುಮಕೂರು/ಪಾವಗಡ, ಮಾ.3: ಸತತ ಬರದಿಂದ ತತ್ತರಿಸಿರುವ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನವಾಗಲೇಬೇಕು. ನೇತ್ರಾವತಿ ನದಿ ಪೇಜಾವರ ಮಠದ ಆಸ್ತಿಯಲ್ಲ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಮನೆಯಲ್ಲಿ ಹುಟ್ಟುವುದಿಲ್ಲ ಎಂದು ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಕೆ.ಬಿ. ಸಿದ್ದಯ್ಯ ಗುಡುಗಿದರು.
ಪಾವಗಡದ ಎಸ್.ಎಸ್.ಕೆ. ರಂಗಮಂದಿರದ ಕೋಟೆ ಬಂಡೆ ವೆಂಕಟರಾಮಪ್ಪ ಪ್ರಧಾನ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಬಯಲುಸೀಮೆ ಮರುಭೂಮಿಯಾಗುವ ಸಾಧ್ಯತೆಯಿದೆ. ಜನ ಮತ್ತು ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಮರುಭೂಮಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಬಹುದು ಎಂಬ ಆಶಯ ವ್ಯಕ್ತಪಡಿಸಿದರು. ಸರಕಾರ ಯಾವುದೇ ಕಾರಣಕ್ಕೂ ಎತ್ತಿನಹೊಳೆ ಯೋಜನೆಯಿಂದ ಹಿಂದೆ ಸರಿಯದಂತೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಪೇಜಾವರ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಜನಾರ್ದನ ಪೂಜಾರಿ ಎತ್ತಿನಹೊಳೆ ಯೋಜನೆ ವಿರೋಧಿಸುವುದೇಕೆ, ನೇತ್ರಾವತಿ ಹುಟ್ಟುವುದು ಪೇಜಾವರ ಮಠದಲ್ಲೋ, ಹೆಗಡೆ ಅವರ ಮನೆಯಲ್ಲೋ ಅಥವಾ ಪೂಜಾರಿಯ ಸ್ವಂತ ಆಸ್ತಿಯಲ್ಲೋ ಎಂದು ಪ್ರಶ್ನಿಸಿದ ಅವರು, ಎತ್ತಿನಹೊಳೆ ಯೋಜನೆ ವಿರೋಧಿಸುವುದು ಸರಿಯಲ್ಲ. ಯೋಜನೆಯ ಸ್ಥಿತಿಗತಿಯನ್ನು ಆರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪರಿಸರ ಇಲಾಖೆ ನಡೆಸಿದ ಸಮೀಕ್ಷೆಯಿಂದ ಕರ್ನಾಟಕ ಕೆಲವೇ ವರ್ಷಗಳಲ್ಲಿ ದೇಶದ ಎರಡನೆ ಮರುಭೂಮಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದು, ಅದರ ಮೊದಲ ಪರಿಣಾಮ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮೇಲಾಗಲಿದ್ದು, ಇದಕ್ಕೆ ನಾವು ಅವಕಾಶ ನೀಡಬಾರದು ಎಂದರು. ತುಮಕೂರು ಜಿಲ್ಲಾ 12ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಬಿ.ಸಿದ್ದಯ್ಯ ಎಚ್ಚರಿಸಿದ್ದಾರೆ.
ಪಾವಗಡದಲ್ಲಿ ಕುಡಿಯಲು ನೀರಿಲ್ಲ. ಇದರ ಪರಿಣಾಮ ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಅಂಗವೈಕಲ್ಯತೆ ತಾಂಡವವಾಡುತ್ತಿದೆ. ನಮ್ಮ ಮಕ್ಕಳು ಸೇನೆಗೆ ಸೇರಲು ಆರ್ಹತೆ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಶ ಭಕ್ತಿಯ ಬಗ್ಗೆ ಮಾತನಾಡುವ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ದೇಶ ಭಕ್ತಿಯನ್ನು ಪಾವಗಡಕ್ಕೂ ತೋರಿ ಈ ಭಾಗದ ಯುವಕರು ಸೇನೆಗೆ ಸೇರುವಂತೆ ಮಾಡಿ ಎಂದು ಆಗ್ರಹಪಡಿಸಿದರು.