ಮಾಣಿಕ್ಯ ದೀಪ್ತಿಯಾಗುವುದೇ?
‘‘ಮೂರು ಕಡೆ ಅಂತಾರಾಷ್ಟ್ರೀಯ ಗಡಿಹೊಂದಿರುವ ರಾಜ್ಯವಾದ ತ್ರಿಪುರಾ, ಕೇಂದ್ರದ ಅನುದಾನವನ್ನು ಹೆಚ್ಚು ಅವಲಂಬಿಸಿದೆ. ರಾಜಕೀಯ ದ್ವೇಷದಿಂದ ಕೇಂದ್ರವು ತ್ರಿಪುರಾ ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ. ನಮ್ಮನ್ನು ಅನುದಾನಗಳ ರಾಜಕಾರಣದಲ್ಲಿ ಅಸಹಾಯಕಗೊಳಿಸುವುದು ಅದರ ಉದ್ದೇಶವಾಗಿದೆ. ಎರಡೇ ಸಂಸದರನ್ನು ಹೊಂದಿರುವ ತ್ರಿಪುರಾಕ್ಕೆ ಪಾರ್ಲಿಮೆಂಟಿನಲ್ಲಿ ಶಕ್ತಿಯೂ ಕಡಿಮೆ. ಹೆಚ್ಚಿನ ಸಂಸದರುಗಳುಳ್ಳ ರಾಜ್ಯಗಳಿಗೆ ನಮ್ಮ ಕಷ್ಟ ಗೊತ್ತಾಗುವುದಿಲ್ಲ’’
-ಮಾಣಿಕ್ ಸರ್ಕಾರ್
ಮಾರ್ಚ್ 3, ತ್ರಿಪುರಾ ವಿಧಾನ ಸಭೆಯ ಚುನಾವಣಾ ಫಲಿತಾಂಶ ಬರಲಿದೆ. ಈ ಹೊತ್ತಲ್ಲಿ ಕಳೆದ ನವೆಂಬರ್ನಲ್ಲಿ ನಾವು ಆ ಪುಟ್ಟ ರಾಜ್ಯದಲ್ಲಿ ಮಾಡಿದ ತಿರುಗಾಟ ನೆನಪಾಗುತ್ತಿದೆ. ಈ ಪ್ರವಾಸ ರೂಪುಗೊಂಡಿದ್ದು ಆಕಸ್ಮಿಕವಾಗಿ. ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಚಿತ್ರದುರ್ಗಕ್ಕೆ ಬಸವ ಪ್ರಶಸ್ತಿ ಸ್ವೀಕಾರಕ್ಕೆಂದು ಬಂದಿದ್ದರು. ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬಂದು ತ್ರಿಪುರಾ ಅಭಿವೃದ್ಧಿ ಮಾದರಿ ಕುರಿತು ಉಪನ್ಯಾಸ ನೀಡಲು ಸಾಧ್ಯವೇ ಎಂದು ಕೇಳಿದೆವು. ಒಪ್ಪಿಕೊಂಡು ಬಂದು ಮಾತಾಡಿದರು. ಅದು ಕೇವಲ ಭಾಷಣವಾಗಿರಲಿಲ್ಲ; ಅನುಭವ ಹಂಚಿಕೊಳ್ಳುವಿಕೆಯಾಗಿತ್ತು. ಪರ್ಯಾಯ ರಾಜಕೀಯ ಮತ್ತು ಆರ್ಥಿಕ ಚಿಂತನಾಕ್ರಮವೂ ಆಗಿತ್ತು. ಅಭಿವೃದ್ಧಿಯ ವಿಷಯದಲ್ಲಿ ಗುಜರಾತ್-ಕೇರಳ ಮಾದರಿಗಳ ಪ್ರಸ್ತಾಪವಾಗುತ್ತಿರುತ್ತವೆ. ಮಾಣಿಕ್ಯರ ಉಪನ್ಯಾಸ ಆಲಿಸಿದ ಬಳಿಕ ತ್ರಿಪುರಾ ಕೂಡ ತನ್ನದೇ ಅಭಿವೃದ್ಧಿ ಮಾದರಿ ರೂಪಿಸಿಕೆೆೊಂಡಿರಬಹುದು ಅನಿಸಿತು. ‘‘ಯಾಕೆ ತ್ರಿಪುರಾ ನೋಡಿಬರಬಾರದು?’’ ಎಂದು ಗೆಳೆಯರ ಮುಂದೆ ಪ್ರಸ್ತಾಪವಿಟ್ಟೆ. ಸಹೋದ್ಯೋಗಿಗಳಾದ ಚಂದ್ರಪೂಜಾರಿ, ಪ್ರಭಾಕರ್, ಅರುಣ್ ಕೂಡಲೇ ಒಪ್ಪಿದರು; ಬೆಂಗಳೂರಿನಿಂದ ಗುರುಶಾಂತ್; ಶಿವಮೊಗ್ಗದಿಂದ ಕಿರಣ್ ಗಾಜನೂರು, ಕಲಬುರಗಿಯಿಂದ ನೀಲಾ, ಮೀನಾಕ್ಷಿ ಬಾಳಿ, ಖಾನಾಪುರೆ-ಜತೆಗೂಡಿದರು. ಎಂಟು ದಿನ ತ್ರಿಪುರಾದ ಸಣ್ಣಪುಟ್ಟ ಊರುಗಳಲ್ಲಿ ಬುಡಕಟ್ಟು ಹಾಡಿಗಳಲ್ಲಿ ಅಡ್ಡಾಡಿದೆವು; ಜನರ ಬದುಕನ್ನು ಕಂಡೆವು; ಅವರ ಹಾಡು ಕುಣಿತಕ್ಕೆ ಸಾಕ್ಷಿಯಾದೆವು. ಅನೇಕ ರಾಜಕೀಯ ನಾಯಕರನ್ನು ಭೇಟಿಯಾದೆವು. ಅದೊಂದು ಅಪೂರ್ವ ಅನುಭವ. ಪ್ರಸ್ತುತ ಲೇಖನದಲ್ಲಿ ರಾಜಕೀಯ ನಾಯಕರ ಭೇಟಿಯನ್ನಷ್ಟೆ ಚರ್ಚಿಸುವೆ.
ನಾವು ಭೇಟಿ ಮಾಡಿದವರಲ್ಲಿ ಸಂಸದ ಜಿತೇನ್ ಚೌಧರಿ, ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಬಿಜನ್ಧರ್ ಹಾಗೂ ಮಾಣಿಕ್ ಸರ್ಕಾರ್ ಮುಖ್ಯರು. ಕಮ್ಯುನಿಸ್ಟ್ ರಾಜಕಾರಣಿ ಗಳೊಡನೆ ಮಾಡುವ ಚರ್ಚೆ ಸಹಜವಾಗಿಯೆ ಸೈದ್ಧಾಂತಿಕ ಪ್ರಖರತೆಯಿಂದ ಕೂಡಿರುತ್ತದೆ. ನಮಗೆ ಅವರ ತಿಳುವಳಿಕೆ ಹಾಗೂ ರಾಜಕೀಯ ಪ್ರಜ್ಞೆ ಅನಿರೀಕ್ಷಿತವಾಗಿರಲಿಲ್ಲ. ಆದರೆ ಕರ್ನಾಟಕದ ರಾಜಕಾರಣಿಗಳಲ್ಲಿ ವಿರಳವಾಗಿರುವ ಸರಳತೆ ಸೆಳೆಯಿತು. ಮಾಣಿಕ್ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬಂದಾಗಲೂ ಮುಖ್ಯಮಂತ್ರಿಯ ಜರ್ಬು ಇರಲಿಲ್ಲ. ಸರಳತೆಯನ್ನು ತೋರಿಕೆಯನ್ನಾಗಿ ಮಾಡಿಕೊಳ್ಳದೆ ಆಚರಿಸುವುದು ಕಷ್ಟದ ಸಂಗತಿ.
ಮೊದಲ ಭೇಟಿ ಜಿತೇನ್ ಚೌಧರಿಯವರ ಜತೆಗಿನದು. ಅವರು ಮಾತುಕತೆ ಜತೆಗೆ ರಾತ್ರಿಯೂಟವನ್ನೂ ಏರ್ಪಡಿಸಿದ್ದರು. ಆದಿನ ನಾವು ತ್ರಿಪುರಾದ ಒಳನಾಡಿನ ಬುಡಕಟ್ಟು ಪ್ರದೇಶಗಳಿಗೆ ಹೋಗಿದ್ದೆವು. ಅಗರ್ತಲ ಪ್ರವೇಶಿಸುವಾಗಲೇ ಸಂಜೆಯಾಗಿತ್ತು. ದೀರ್ಘ ಪಯಣದಿಂದ ಮೈಧೂಳಾಗಿ ದೇಹ ದಣಿದಿತ್ತು. ಅತಿಥಿಗೃಹಕ್ಕೆ ಹೋಗಿ ಸ್ನಾನಮಾಡಿ ಬಟ್ಟೆಬದಲಾಯಿಸಿಕೊಂಡು ಬರುವುದಕ್ಕೆ ಒಂದು ಗಂಟೆ ಹಿಡಿಯುತ್ತಿತ್ತು. ಚೌಧರಿಯವರನ್ನು ಕಾಯಿಸುವುದು ತರವಲ್ಲವೆಂದು, ಧೂಳೀದೇಹದಲ್ಲೇ ಭೇಟಿಯಾಗಲು ನಿರ್ಧರಿಸಿದೆವು. ನಮ್ಮ ತಂಡದಲ್ಲಿದ್ದ ಬಹುತೇಕರು ಸಿಕ್ಕಿದ್ದನ್ನುಂಡು ಬೀದಿಬದಿ ಮಲಗಿ ಅಭ್ಯಾಸವಿದ್ದವರು. ನಮಗೆ ಔತಣ ಏರ್ಪಡಿಸಿದ್ದ ಹೊಟೇಲ್ನ ಫಾಶುತನ ತುಸು ಅನಿರೀಕ್ಷಿತವಾಗಿತ್ತು. ಚೌಧರಿಯವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ನೋಡಲು ಚಿತ್ರನಟ ದೇವಾನಂದ್ ತರಹ ಇದ್ದ ಚೌಧರಿ ತಿಪ್ಪೆರಿ ಬುಡಕಟ್ಟಿನಿಂದ ಬಂದವರು; ಪೂರ್ವ ತ್ರಿಪುರಾದ ಸಂಸದರು; ಎದುರಾಳಿಯಿಂದ 5 ಲಕ್ಷ ಮತಗಳ ಅಂತರದಿಂದ ಗೆದ್ದವರು. ಹಿಂದೆ ಈ ಕ್ಷೇತ್ರವನ್ನು ಆಧುನಿಕ ತ್ರಿಪುರಾದ ನಿರ್ಮಾತೃ ದಶರಥ್ ದೇಬ್ ಪ್ರತಿನಿಧಿಸುತ್ತಿದ್ದರು. ಚೌಧರಿಯವರು ನಮ್ಮ ತಂಡದ ಮಹಿಳೆಯರಿಗೆ ‘‘ಮನೆಗಳಲ್ಲಂತೂ ಕೊನೆಗೆ ಉಣ್ಣುತ್ತೀರಿ; ಇಲ್ಲಿಯಾದರೂ ಮೊದಲು ಆರಂಭಿಸಿ’’ ಎಂದು ಕೋರಿದರು. ಗಮನಿಸಿದೆ. ಅವರೊಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದರು. ನಮ್ಮ ಪ್ರಶ್ನೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು; ಆಲೋಚನೆ ಮಾಡಿ ಉತ್ತರಿಸುತ್ತಿದ್ದರು. ಅವರಿಗೆ ಸೈದ್ಧಾಂತಿಕ ಪ್ರಶ್ನೆಗಳನ್ನು ಗ್ರಹಿಸುವ ಮತ್ತು ಉತ್ತರಿಸುವ ಒಳ್ಳೆಯ ತರಬೇತಿಯಿತ್ತು. ಮಾತುಕತೆ ತ್ರಿಪುರಾದ ಅಭಿವೃದ್ಧಿ ಮಾದರಿ ಕುರಿತು ಶುರುವಾಯಿತು. ಈ ವಿಷಯ ಬಂದಾಗೆಲ್ಲ ಎಲ್ಲರೂ ಭಾರತ ಭೂಪಟದಲ್ಲಿ ತ್ರಿಪುರಾವಿರುವ ಜಾಗವೇ ಅದರ ಅಭಿವೃದ್ಧಿಗೆ ಹೇಗೆ ತೊಡಕಾಗಿದೆ ಎಂಬಲ್ಲಿಂದ ಮಾತುಕತೆ ಆರಂಭಿಸುತ್ತಿದ್ದರು. ಬಾಂಗ್ಲಾವಿಭಜನೆಯ ದೊಡ್ಡ ಬಲಿಪಶು ಈಶಾನ್ಯ ಭಾರತ ಅನಿಸಿತು. ಕಾರಣ, ಕೋಲ್ಕತಾದಿಂದ 300 ಕಿ.ಮೀ. ದೂರದ ತ್ರಿಪುರಾಕ್ಕೆ ಅಸ್ಸಾಂ ಮೇಘಾಲಯಗಳ ಮೂಲಕ 1,700 ಕಿ.ಮೀ. ಬಳಸಿಕೊಂಡು ಹೋಗಬೇಕು. ಚೌಧರಿ ಹೇಳಿದರು: ‘‘ನೋಡಿ. ರೈಲ್ವೆ ಮತ್ತು ರಸ್ತೆಯ ಸಂಪರ್ಕವು ಪ್ರಧಾನ ಸಮಸ್ಯೆ. ಮೈನ್ಲ್ಯಾಂಡಿನ ಸಂಪರ್ಕ ಕಡಿದುಹೋದರೆ ನಮಗೆ ಉಸಿರುಗಟ್ಟುತ್ತದೆ. ನಾವು ಹೇರಳವಾಗಿ ರಬ್ಬರ್ ಬೆಳೆಯುತ್ತೇವೆ. ಆದರೆ ಟಯರ್ ಉದ್ಯಮವಿಲ್ಲ. ಟಯರ್ ಉತ್ಪಾದನೆಗೆ ಶೇ. 60ರಷ್ಟು ಕಚ್ಚಾವಸ್ತು ಹೊರಗಿಂದ ಬರಬೇಕು. ಉತ್ಪಾದನೆಯಾದ ಟೈರುಗಳನ್ನು ಮಾರುಕಟ್ಟೆಗೆ ಸಾಗಿಸಲು ಅಸ್ಸಾಂ ಸುತ್ತುಹಾಕಿ ಹೋಗಬೇಕು. ಸಾಗಣೆವೆಚ್ಚದಿಂದ ಬೆಲೆ ದುಬಾರಿಯಾಗುತ್ತದೆ. ನಮ್ಮ ಭೌಗೋಳಿಕ ಪರಿಸ್ಥಿತಿಯೇ ನಮ್ಮ ಕೈಕಟ್ಟಿದೆ.’’ ಚೌಧರಿಯವರ ಮಾತು ನಿಜ. ತ್ರಿಪುರಾದಲ್ಲಿ ಕಲ್ಲು ಸಿಗುವುದಿಲ್ಲ. ಎಲ್ಲೆಡೆ ಉಸುಕಿನಂತಹ ನೆಲ. ಹೀಗಾಗಿ ಅಲ್ಲಿ ಸುಟ್ಟ ಇಟ್ಟಿಗೆಯ ಚೂರುಗಳನ್ನೇ ಕಾಂಕ್ರಿಟ್ ಕಟ್ಟಡಗಳಿಗೂ ಟಾರ್ರಸ್ತೆಗೂ ಬಳಸುವರು. ಇಲ್ಲಿ ಆಗಸ ತೀಡುವ ಕಟ್ಟಡಗಳು ಯಾಕಿಲ್ಲ ಎಂದು ಕಾರಣ ಹೊಳೆಯಿತು. ನಾವು ಚೌಧರಿಯವರಿಗೆ ಬರಲಿರುವ ಚುನಾವಣೆಯ ಬಗ್ಗೆ ಕೇಳಿದೆವು. ಅವರು ‘‘ಬಿಜೆಪಿ ಖಾತೆ ತೆಗೆಯಬಹುದು. ಅಧಿಕಾರಕ್ಕೆ ಬರುವುದಿಲ್ಲ’’ ಎಂದು ಆತ್ಮವಿಶ್ವಾಸದಿಂದ ಹೇಳಿದರು. ‘‘ಮುನ್ನೂರು ಜನ ನುರಿತ ಕಾರ್ಯಕರ್ತರನ್ನು ಬೂತ್ಮಟ್ಟದಲ್ಲಿ ಕೆಲಸ ಮಾಡಲು ಸಂಘಪರಿವಾರ ಕಳಿಸಿದೆ. ತನ್ನ ಕೇಡರುಗಳಿಗೆ ವಾಹನಗಳನ್ನು ಒದಗಿಸಿದೆ. ಬುಡಕಟ್ಟು- ಬುಡಕಟ್ಟೇತರ ಎಂಬ ಬಿರುಕನ್ನು ಹಿಗ್ಗಿಸಿ ಜನರನ್ನು ವಿಭಜಿಸುತ್ತಾರೆ’’ ಎಂದರು ಚೌಧರಿ. ಬಿಜೆಪಿಯ ಚುನಾವಣಾ ಸಿದ್ಧತೆ, ತಂತ್ರಗಾರಿಕೆಯಲ್ಲಿ ನಿಸ್ಸೀಮರಾಗಿರುವ ಅಮಿತ್ಶಾರ ಯೋಜನೆಗಳು ಅವರಲ್ಲಿ ಆತಂಕ ಹುಟ್ಟಿಸಿದಂತಿತ್ತು.
ಎರಡನೇ ಭೇಟಿ ಪಕ್ಷದ ಕಾರ್ಯದರ್ಶಿ ಬಿಜನ್ಧರ್ ಅವರೊಂದಿಗೆ ಏರ್ಪಾಟಾಗಿತ್ತು. ಕಮ್ಯುನಿಸ್ಟ್ ಪಕ್ಷಗಳಲ್ಲಿ ಸಾಮಾನ್ಯವಾಗಿ ಅಧ್ಯಕ್ಷರು ಇರುವುದಿಲ್ಲ. ಕಾರ್ಯದರ್ಶಿ ಇರುತ್ತಾರೆ. ಅವರಿಗೆ ಪಕ್ಷದಲ್ಲಿ ಬಹಳ ಮನ್ನಣೆ. ನಾವು ಅಗರ್ತಲದಲ್ಲಿರುವ ಪಕ್ಷದ ಕಚೇರಿಗೆ ನಿಗದಿತವಾದ ಸಂಜೆ ಹೋದೆವು. ಸಣ್ಣಗಲ್ಲಿಯಲ್ಲಿರುವ ಎರಡಂತಸ್ತಿನ ಸಾಮಾನ್ಯ ಕಟ್ಟಡ. ಎದುರುಗಡೆ ಕೊಳದಲ್ಲಿರುವವರು ಸ್ನಾನ ಮಾಡಿದರೆ ಸಿಡಿಯುವಷ್ಟು ಹತ್ತಿರದಲ್ಲಿರುವ ವಿಶಾಲ ಕೊಳ. ಕೊಳ ಮತ್ತು ಸಾರ್ವಜನಿಕ ಮೀಯುವಿಕೆ ಬಂಗಾಳಿ ಸಂಸ್ಕೃತಿಯ ಭಾಗ. (ಕೋಲ್ಕತಾದಲ್ಲಿ ಮುಖ್ಯಮಂತ್ರಿ ಕಚೇರಿ ಇರುವ ರೈಟರ್ಸ್ ಬಿಲ್ಡಿಂಗ್ನ ಎದುರು ಕೂಡ ಇಂತಹುದೇ ಸಾರ್ವಜನಿಕರು ಸ್ನಾನ ಮಾಡುವ ಕೊಳವಿದೆ.) ಕಚೇರಿಯಲ್ಲಿ ಬಂದವರು ಕುಳಿತುಕೊಳ್ಳಲು ಹತ್ತಾರು ಕುರ್ಚಿಗಳು; ಮೇಜಿನ ಮೇಲೆ ಬಂಗಾಳಿ ಪತ್ರಿಕೆಗಳು; ಬ್ಲಾಕ್ಟೀ ತಂದುಕೊಡುವ ಕಚೇರಿ ಸಹಾಯಕರು. ಇಲ್ಲಿ ಪಕ್ಷದ ಸದಸ್ಯರೂ, ನಾಯಕರೂ ದಿನಂಪ್ರತಿ ಸೇರುವರು. ಸಂಸತ್ ಸದಸ್ಯರು, ಶಾಸಕರು, ಮಂತ್ರಿಗಳು, ಪಕ್ಷದ ಪದಾಧಿಕಾರಿಗಳ ನಡುವೆ ಬಹಳ ಶ್ರೇಣೀಕರಣವಿಲ್ಲ. ನಾವು ಹೋದಾಗ ತ್ರಿಪುರಾದ ಇಬ್ಬರೂ ಸಂಸದರು ಚಿಕ್ಕ ಕೋಣೆಯಲ್ಲಿ ಕುಳಿತು ಪಕ್ಷದ ಕಾರ್ಯಕರ್ತರೊಂದಿಗೆ ಮಾತಾಡುತ್ತಿದ್ದರು.
ಬಿಜನ್ಧರ್ ಕೋಣೆಯ ಬಾಗಿಲಿಗೆ ಬಂದು ಬರಮಾಡಿಕೊಂಡರು. ಚೀನೀಮುಖದ ಕುಳ್ಳಗಿನ ಬುಡಕಟ್ಟು ವ್ಯಕ್ತಿ. ಚೌಧರಿಯವರ ಲವಲವಿಕೆಗೆ ಹೋಲಿಸಿದರೆ ತುಸು ಜಡವೆನಿಸುವ ನಿಧಾನ ವರ್ತನೆ ಕಂಡಿತು. ಅದೊಂದು 20 ಜನ ಕೂರುವ ಕೋಣೆ; ಸಾಧಾರಣ ಮೇಜು ಕುರ್ಚಿಗಳು; ಗೋಡೆಯ ಮೇಲೆ ಮಾರ್ಕ್ಸ್, ಏಂಗೆಲ್ಸ್, ಲೆನಿನ್, ಸ್ಟಾಲಿನ್ರ ಚಿತ್ರಪಟಗಳು. (ಎಲ್ಲೂ ಮಾವೋ ಪಟ ಕಾಣಲಿಲ್ಲ.) ನಾವು ಬಿಜನ್ ಜತೆಗೆ ಮಾತುಕತೆ ಆಡಿದೆವು ಎನ್ನುವುದಕ್ಕಿಂತ ಅವರ ಉಪನ್ಯಾಸ ಆಲಿಸಿದೆವು ಎನ್ನುವುದೇ ಉಚಿತ. ಏರಿಳಿತವಿಲ್ಲದ ತಣ್ಣನೆಯ ದನಿಯಲ್ಲಿ ಪಕ್ಷವು ತ್ರಿಪುರಾದಲ್ಲಿ ಮಾಡಿದ ಹೋರಾಟದ ಕಥನವನ್ನು ನಿರೂಪಿಸುತ್ತ ಹೋದರು. ಕೇಳುಗರು ಕೊಂಚ ಏಕಾಗ್ರತೆ ಕಳೆದುಕೊಂಡರೆ ಮಾತು ಕೇಳಿಸುವುದಿಲ್ಲ ಎಂಬಷ್ಟು ನಿರ್ಭಾವುಕ ಧಾಟಿ; ತುಂಬ ಸಲ ಮಾತಾಡಿ ಖಚಿತವಾಗಿರುವ ವಿವರಗಳು. ಸಾಮಾನ್ಯವಾಗಿ ಎಡಪಕ್ಷಗಳಲ್ಲಿ ಬಹುತೇಕ ನಾಯಕರು ಅಧ್ಯಯನಕಾರರು; ಚಿಂತನಶೀಲರು; ವಾಗ್ಮಿಗಳು. ಸ್ಟಡಿಕ್ಲಾಸುಗಳಲ್ಲಿ ಸುದೀರ್ಘ ಮಾತಾಡಿ ಅಭ್ಯಾಸವುಳ್ಳವರು. ತ್ರಿಪುರಾದಲ್ಲಿದ್ದಾಗ ನಾವು ಅನೇಕ ಕಡೆ ಉದ್ದನೆಯ ಭಾಷಣ ಕೇಳಬೇಕಾಯಿತು. ಕೇಳುಗರ ಪ್ರಶ್ನೆ ಪ್ರತಿಕ್ರಿಯೆಗಳ ಮಧ್ಯಪ್ರವೇಶವಿಲ್ಲದ ಮಾತು ದಣಿವೆನಿಸುತ್ತದೆ. ಈಗ ಮತದಾರರಾಗಿರುವ ಹೊಸತಲೆಮಾರು ಈ ಬಗೆಯ ಏಕಮುಖಿ ಕಥನ ಕೇಳಿಸಿಕೊಳ್ಳುತ್ತದೆಯೇ? ಅದರ ತಲ್ಲಣ ಗೊಂದಲಗಳನ್ನು ಈ ಸಿದ್ಧಾಂತ ಖಚಿತ ಹಿರಿತಲೆಗಳು ಆಲಿಸುವವರೇ? ತರುಣರಲ್ಲಿ ಹುಸಿರೋಚಕತೆಯನ್ನೋ ಮತೀಯ ಉನ್ಮಾದವನ್ನೋ ತುಂಬುವ ಬಲಪಂಥೀಯ ಭಾಷಣಕಾರರು ಅನೇಕ ಸಲ ತಮ್ಮ ಚಿಂತನೆಯಿಂದಲ್ಲ, ಮಾತಿನ ವರಸೆಯಿಂದಲೂ ಸೆಳೆಯುತ್ತಿರುವ ಕಾಲವಿದು. ಬಿಜನ್, ತ್ರಿಪುರಾದ ನಿರ್ಮಾಣದಲ್ಲಿ ಬುಡಕಟ್ಟು ಬಂಡುಕೋರರನ್ನು ಎದುರಿಸುತ್ತ ಪಕ್ಷದ ಕಾರ್ಯ ಕರ್ತರು ಹುತಾತ್ಮರಾಗಿರುವುದನ್ನು ನೆನೆದರು; ಒಬ್ಬ ನಾಯಕರನ್ನು ಕಾಡಿಗೆ ಚರ್ಚೆಗೆಂದು ಕರೆಸಿಕೊಂಡು ನಿರ್ದಯವಾಗಿ ಕೊಂದದ್ದನ್ನು ಹೇಳಿದರು. ಪಕ್ಷಬಿಟ್ಟು ಬಿಜೆಪಿಗೆ ಹೋಗಿರುವ ಕೆಲವು ಕೇಡರುಗಳ ಬಗ್ಗೆ ಕೇಳಿದೆವು. ‘‘ಒಬ್ಬಿಬ್ಬರು ಅವಕಾಶವಾದಿಗಳು ಹೋಗಿರುವುದು ನಿಜ. ಆದರೆ ಪಕ್ಷ ನಿಯಂತ್ರಣದಲ್ಲಿದೆ’’ ಎಂದರು. ಆದರೂ ಹೊರಗಿನ ಎದುರಾಳಿಗಿಂತ ಒಳಗಿನವರು ಮಾಡುವ ಹಾನಿ ಹೆಚ್ಚಿದು ಎಂಬ ಭಾವ ಅವರಲ್ಲಿ ಕಾಣಿಸಿತು.
ತಂಡದಲ್ಲಿದ್ದ ಬಾಳಿ ಹಾಗೂ ನೀಲಾ, ಒಂದು ದಿನ ಮೊದಲೇ ಸಮಾವೇಶಕ್ಕೆಂದು ಬೆಂಗಳೂರಿಗೆ ತೆರಳಬೇಕಾಗಿತ್ತು. ಹೀಗಾಗಿ ಮಾಣಿಕ್ ಅವರೊಟ್ಟಿಗೆ ಅವರಿಬ್ಬರ ಭೇಟಿ ನಿಗದಿಯಾಗಿತ್ತು. ಸಾಮಾನ್ಯವಾಗಿ ಮುಖ್ಯಮಂತ್ರಿ, ವಿಧಾನಸಭೆಯಿಂದ ಮನೆಗೆ ತೆರಳುವ ಮುನ್ನ ಪಕ್ಷದ ಕಚೇರಿಗೆ ಬಂದು ಹೋಗುವ ಪದ್ಧತಿಯಿದೆ. ನಮ್ಮ ಮಾತುಕತೆ ನಡೆಯುತ್ತಿರುವಾಗಲೇ ಮಾಣಿಕ್ ಬಂದರೆಂದೂ ಅವರನ್ನು ಭೇಟಿಮಾಡಬಹುದೆಂದೂ ಕರೆಬಂದಿತು. ಇಬ್ಬರೂ ಸಂಗಾತಿಗಳು ಹೋಗಿ ಅವರನ್ನು ಕಂಡು ಮಾತಾಡಿ ಬಂದರು. ನಾವೆಲ್ಲರೂ ಕಾರ್ಯದರ್ಶಿಯವರ ಜತೆಗಿನ ಮಾತುಕತೆ ಮುಗಿಸಿ ಹೊರಡುವಾಗ, ಕಾರಿಡಾರಿನಲ್ಲಿ ತೆರೆದ ಬಾಗಿಲಿನ ಒಂದು ಕೋಣೆ ಕಂಡಿತು. ಅಲ್ಲಿ ಕೆಲವು ಸಚಿವರು ಕುರ್ಚಿಯಲ್ಲಿ ವಿರಾಮಶೈಲಿಯಲ್ಲಿ ಕುಳಿತಿದ್ದರು. ಮಾಣಿಕ್ ಅವರು ಕೋಣೆಯ ನಡುವೆ ನಿಂತುಕೊಂಡು ನಾಟಕೀುವಾಗಿ ಏನನ್ನೋ ವಿವರಿಸುತ್ತಿದ್ದರು.
ಪ್ರವಾಸದ ಕೊನೆಯ ದಿನ. ಹಿಂದಿನ ದಿನ ಶಿಕ್ಷಣ, ಸಮಾಜ ಕಲ್ಯಾಣ ಮಂತ್ರಿಗಳನ್ನು ಕಾಣಲು ಸೆಕ್ರೆಟೆರಿಯೇಟ್ಗೆ ಹೋದಾಗ, ಬುಡಕಟ್ಟು ಖಾತೆಯ ಮಂತ್ರಿಯವರು ಸಿಕ್ಕಿರಲಿಲ್ಲ. ಅವರು ನಾವಿದ್ದ ಅತಿಥಿಗೃಹಕ್ಕೆ ಬೆಳಗ್ಗೆಯೇ ಧಾವಿಸಿ ಬಂದರು. ಹಿಂದಿನ ದಿನ ಭೇಟಿಯಾಗದೆ ಇದ್ದುದಕ್ಕೆ ಕ್ಷಮೆಕೋರಿ ನಮ್ಮ ಜತೆ ತಿಂಡಿ ಸ್ವೀಕರಿಸಿದರು. ಅವರೊಡನೆ ನಮಗೆ ಬಿಡುವಾದ ಚರ್ಚೆ ಸಾಧ್ಯವಾಗಲಿಲ್ಲ. ಬೆಳಗಿನ 11:30ಕ್ಕೆ ಮುಖ್ಯಮಂತ್ರಿಯವರನ್ನು ಕಾಣುವ ಕಾರ್ಯಕ್ರಮ ಏರ್ಪಾಟಾಗಿತ್ತು. ಊಟ ಮುಗಿಸಿ ಮಧ್ಯಾಹ್ನ 3 ಗಂಟೆಗೆ ವಿಮಾನ ಹಿಡಿಯಬೇಕಿತ್ತು. ನಾವು ಬುಡಕಟ್ಟು ಮಂತ್ರಿಯವರನ್ನು ಬೀಳ್ಕೊಟ್ಟು ಮುಖ್ಯಮಂತ್ರಿಯವರ ಭೇಟಿಗೆಂದು ಹೋದೆವು. ಅದು ಅತಿಥಿಗಳು ಪತ್ರಕರ್ತರು ಹಾಗೂ ನಿಯೋಗಗಳೊಂದಿಗೆ ಸಭೆ ನಡೆಸುವ ಕೋಣೆ ಇರಬೇಕು. ಮಾಣಿಕ್ ಸರ್ಕಾರ್ ಬಂದರು. ಎಂದಿನ ಬಿಳಿಜುಬ್ಬ, ಕಚ್ಚೆಪಂಚೆ. ಬಿಳಿಯ ಬಾಚಿದ ಕೂದಲು. ಕನ್ನಡಕದೊಳಗಿಂದ ಬಂದವರನ್ನು ಅಳೆಯುವ ತೀಕ್ಷ್ಣ ಕಣ್ಣು. ನಮಗೆ ತಿಂಡಿ ಸರಬರಾಜಾಯಿತು. ಅವರಿಗೆ ಗಾಜಿನ ಲೋಟದಲ್ಲಿ ಕುದಿಯುವ ಬಿಸಿನೀರಿಗೆ ಟೀಪುಡಿ ಸುರಿದ ಉದ್ದನೆಯ ಚಮಚವಿಟ್ಟು ಕೊಡಲಾಯಿತು. ಕಸದಂತೆ ಕಾಣುತ್ತಿದ್ದ ಚಹಪುಡಿಯನ್ನು ಆಗಾಗ್ಗೆ ಕಲಕುತ್ತ, ಅದು ತಳಕ್ಕೆ ಕೂತಮೇಲೆ ಮೇಲಿನ ಹೊಂಬಣ್ಣದ ತಿಳಿಯನ್ನು ಕುಡಿಯುತ್ತಿದ್ದರು. ‘‘ಬಹಳ ದೂರದಿಂದ ಬಂದಿದ್ದೀರಿ. ಸಂತೋಷವಾಗಿದೆ. ತ್ರಿಪುರಾದ ಬಗ್ಗೆ ನಿಮ್ಮ ಅನುಭವ ವಿಚಾರ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ’’ ಎಂದರು.
ಒಬ್ಬೊಬ್ಬರಾಗಿ ನಮ್ಮ ಅನುಭವ ಮತ್ತು ಅಭಿಪ್ರಾಯ ಹೇಳಿ ಕೊಂಡೆವು. ಎಲ್ಲವನ್ನು ಕೇಳಿಸಿಕೊಂಡರು. ನಾವು ಎತ್ತಿದ್ದ ಪ್ರಶ್ನೆಗಳನ್ನು ಮನಸ್ಸಿನಲ್ಲಿಯೇ ಗುರುತು ಹಾಕಿಕೊಂಡವರಂತೆ, ಉತ್ತರಿಸುತ್ತ ಹೋದರು. ನಡುನಡುವೆ ನಮ್ಮ ಪ್ರಶ್ನೆ ಬಿಟ್ಟರೆ ಉಳಿದಂತೆ ದೀರ್ಘ ಸ್ವಗತದ ಹಾಗೆ ಅವರ ಮಾತಿತ್ತು. ಅದರಲ್ಲಿ ಅವರ ವೈಯಕ್ತಿಕ ಬದುಕಿನ ಭಾಗಗಳಿದ್ದವು. ಪಕ್ಷದ ಹೋರಾಟದ ಕಥನವಿತ್ತು. ಬುಡಕಟ್ಟು ಸಂಘರ್ಷಗಳಿರುವ ಈಶಾನ್ಯ ಭಾರತದಲ್ಲಿ ಆಡಳಿತ ನಡೆಸುವ ಸವಾಲಿನ ವಿವರಗಳಿದ್ದವು. ಮುಖ್ಯವಾಗಿ ರಾಜಕೀಯ ಎದುರಾಳಿ ಪಕ್ಷಕ್ಕೆ ಸೇರಿದ ರಾಜ್ಯಸರಕಾರಗಳಿಗೆ ಅಸಹಕಾರ ಕೊಡುವ ಕೇಂದ್ರದ ಜತೆ ಆಡಳಿತಗಾರನಾಗಿ ಸೆಣಸಾಡಿದ ಅನುಭವವಿತ್ತು. ‘‘ಕರ್ನಾಟಕದಂತಹ ಸಂಪನ್ಮೂಲ ಇರುವ ದೊಡ್ಡರಾಜ್ಯಗಳಿಗೆ ನಮ್ಮ ಕಷ್ಟ ಗೊತ್ತಾಗಲ್ಲ. ಕೃಷಿ ತ್ರಿಪುರಾದ ಬೆನ್ನೆಲುಬು. ಅದನ್ನು ಆಧುನೀಕರಣ ಮಾಡಲಾಗದೆ ಹಳೇ ಪದ್ಧತಿಯಲ್ಲಿಯೇ ಮಾಡಲಾಗುತ್ತಿದೆ. ಅದು ಸಾಲದು. ಆದರೂ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ನಮ್ಮ ಅಭಿವೃದ್ಧಿಯ ಆದರ್ಶ ಗಗನಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ಜನರಿಗೆ ಮೂಲಭೂತವಾದ ಅಹಾರ, ವಸತಿ, ಉದ್ಯೋಗ, ಆರೋಗ್ಯ ಕೊಡುವುದು. ತ್ರಿಪುರಾಕ್ಕೆ ಉದ್ದಿಮೆಗಳ ತುರ್ತು ಅಗತ್ಯವಿದೆ. ಆದರೆ ಅಸ್ಸಾಂ ಸುತ್ತಿಕೊಂಡು ಬರುವ ಚಿಕನ್ನೆಕ್ ಅವಸ್ಥೆ ನಮಗೆ ಅಡ್ಡಿಯಾಗಿದೆ. ಮೂಲಭೂತ ಸೌಕರ್ಯಗಳು ಇದ್ದರೆ ಉದ್ದಿಮೆಗಳು ಬರುತ್ತವೆ. ಆರ್ಥಿಕತೆಗೆ ಚೇತರಿಕೆ ಸಾಧ್ಯವಾಗುತ್ತದೆ. ಇಲ್ಲಿ ಸಮಸ್ಯೆ ಹೆಚ್ಚು; ಸಂಪನ್ಮೂಲ ಕಡಿಮೆ. ನಮಗೆ ವಿಮಾನ ನಿಲ್ದಾಣಗಳ ಅಗತ್ಯವಿದೆ. ಅವನ್ನು ಸ್ಥಾಪಿಸುವುದು ನಮ್ಮ ಕೈಯಲ್ಲಿಲ್ಲ. ಬಾಂಗ್ಲಾದಲ್ಲಿರುವ ಚಿತ್ತಗಾಂಗ್ ಬಂದರು ನಮಗೆ ಸಮೀಪವಿದೆ. ನಾವು ಬಾಂಗ್ಲಾ ಜತೆ ಮಾತುಕತೆ ಮಾಡುತ್ತಿದ್ದೇವೆ. ಆ ಬಂದರು ಸಿಕ್ಕರೆ ನಮ್ಮ ಆರ್ಥಿಕತೆಯ ಚೆಹರೆಯೇ ಬದಲಾಗುತ್ತದೆ. ತ್ರಿಪುರಾ ಈಶಾನ್ಯ ಭಾರತದ ಹೆಬ್ಬಾಗಿಲಾಗುತ್ತದೆ. ಬುಡಕಟ್ಟು ಪ್ರದೇಶಗಳಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಆ ಬೆಳೆಗೆ ತಕ್ಕನಾದ ಉದ್ಯಮವಿಲ್ಲ. ಸಂಪರ್ಕ ಸಾರಿಗೆ ತ್ರಿಪುರಾದ ಪ್ರಗತಿಗೆ ಅನಿವಾರ್ಯ. ಉದ್ದಿಮೆಗಳಿಗೆ ಕೊಡಲು ನಮ್ಮ ದೊಡ್ಡ ಜಾಗಗಳಿಲ್ಲ. ನಮ್ಮ ಜನ ಬಡವರು. ಅವರಿಂದ ಹೆಚ್ಚಿನ ತೆರಿಗೆ ಕೊಡುವುದು ಸಾಧ್ಯವಿಲ್ಲ. ಅವರಲ್ಲಿ ಕೊಳ್ಳುವ ಶಕ್ತಿಯಿಲ್ಲ. ಅವರ ಮನೋಭಾವ ಸರಕಾರದ ಮೇಲೆ ಬಹಳ ಅವಲಂಬಿತ. ಅವರ ನಿರೀಕ್ಷೆಗಳನ್ನು ಪೂರೈಸುವುದು ಸವಾಲಾಗಿದೆ ಎಂದರು. ಕಮ್ಯುನಿಸ್ಟ್ ಪ್ರಭುತ್ವ ಇರುವಲ್ಲಿ ಕಾರ್ಮಿಕ ಚಳುವಳಿ ಬಲಿಷ್ಠವಾಗಿರುತ್ತದೆ ಎಂಬ ಆತಂಕ ಉದ್ದಿಮೆದಾರರಿಗೆ ಅಧೈರ್ಯ ತಂದಿರಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರಕಾರ ರೈತರಿಂದ ಟಾಟಾದವರಿಗೆ ಭೂಮಿ ಕಿತ್ತುಕೊಟ್ಟ ಪ್ರಕರಣ ದುಬಾರಿಯಾದ ಘಟನೆಯೂ ನಡೆದಿದೆ. ಹಾಗೆಂದು ಉದ್ದಿಮೆಗಳನ್ನು ನಿರಾಳವಾಗಿ ಸ್ವಾಗತಿಸುವ ಮನೋಭಾವವೂ ತ್ರಿಪುರಾ ಸರಕಾರಕ್ಕಿಲ್ಲ. ಇದೊಂದು ಬಗೆಯ ಬಿಕ್ಕಟ್ಟು. ‘‘ನಾವು ನಮ್ಮಲ್ಲಿ ಬರುವ ಉದ್ಯಮಿಗಳಿಗೆ ಮೂರು ಕರಾರು ವಿಧಿಸುತ್ತೇವೆ: ಸ್ಥಳೀಯ ಕಚ್ಚಾವಸ್ತುಗಳನ್ನು ಬಳಸಬೇಕು; ಜನರ ಆದಾಯ ಹೆಚ್ಚಿಸಬೇಕು; ಜನರಿಗೆ ನೌಕರಿ ಕೊಡಬೇಕು ಎಂದು. ಅಂತಹ ಉದ್ಯಮಗಳಿನ್ನೂ ಬಂದಿಲ್ಲ’’ ಎಂದು ಮಾಣಿಕ್ ಹೇಳಿದರು. ಈ ಸನ್ನಿವೇಶ ಕೂಡ ಬಿಜೆಪಿ ಬಂದರೆ ಉದ್ದಿಮೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ, ತರುಣರಿಗೆ ಕೆಲಸಗಳು ಸಿಗುತ್ತವೆ, ತ್ರಿಪುರಾ ಬದಲಾಗುತ್ತದೆ ಎಂಬ ಮನೋಭಾವ ಅನೇಕರಲ್ಲಿ ಬಂದಿದೆ.
ಮುಂಬರುವ ಚುನಾವಣೆಯ ಬಗ್ಗೆ ಕೇಳಿದೆವು. ‘‘ಅದು ನಮ್ಮ ಮುಂದಿರುವ ದೊಡ್ಡ ಯುದ್ಧ. ಈ ಯುದ್ಧದಲ್ಲಿ ಬಿಜೆಪಿಗೆ ತೃಣಮೂಲ ಮತ್ತು ಕಾಂಗ್ರೆಸ್ ನೆರವಾಗುತ್ತಿವೆ. ತ್ರಿಪುರಾ ಎಲ್ಲ ರಾಜ್ಯಗಳಂತಲ್ಲ. ಇಲ್ಲಿ ಸಾಮಾಜಿಕ ಸೌಹಾರ್ದವಿಲ್ಲದೆ ಆಳ್ವಿಕೆ ಮಾಡುವುದು ಕಷ್ಟ. ಇಲ್ಲಿನ ಬುಡಕಟ್ಟು ನಾಯಕರು ಪ್ರತ್ಯೇಕ ದೇಶವನ್ನು ಕೇಳುತ್ತಿದ್ದರು. ಈಗ ಸ್ವಾಯತ್ತ ಅಧಿಕಾರ ಜಿಲ್ಲೆಗಳು ಅವರಿಗೆ ಸಿಕ್ಕಿವೆ. ಆದರೆ ಈಗಲೂ ಪ್ರತ್ಯೇಕವಾದ ಕೈಬಿಟ್ಟಿಲ್ಲ. ಅವರ ಶಿಬಿರಗಳು ಬಾಂಗ್ಲಾದೇಶದಲ್ಲಿವೆ. ವಲಸೆ ಬಂದ ನಿರಾಶ್ರಿತರನ್ನು ನೆಲೆಗೊಳಿಸುವುದು ನಮಗೆ ದೊಡ್ಡ ಸಮಸ್ಯೆಯಾಗಿತ್ತು. ಹತ್ತು ವರ್ಷ ನಾವು ಕಷ್ಟಪಟ್ಟು ಮಾಡಿದೆವು. ಇದನ್ನು ನಡುವೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಶಮಾಡಿತು. ಕಾಂಗ್ರೆಸಿಗರ ಆಡಳಿತ ಕಾಲದಲ್ಲಿ ನಮ್ಮ 350 ಕಾರ್ಯಕರ್ತರ ಕೊಲೆಯಾಯಿತು. ಅವರು ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಿಲ್ಲಿಸಿದರು. ಅವರು ತ್ರಿಪುರಾದ ರಾಜನ ವಿರುದ್ಧ ಚಳವಳಿ ಮಾಡಲಿಲ್ಲ. ಕೇಂದ್ರ ಸರಕಾರದ ಪಕ್ಷಪಾತದ ವಿರುದ್ಧ ಮಾತಾಡಲಿಲ್ಲ. ಆದರೆ ನಮಗೆ ಮಾತ್ರ ಆಡಳಿತ ಮಾಡಲು ಬಿಡದೆ ಸತಾಯಿಸುತ್ತಿದ್ದಾರೆ’’ ಎಂದರು. ಅವರ ಮುಖದಲ್ಲಿ ವ್ಯಥೆಯಿತ್ತು. ಬಹುತೇಕ ಕಮ್ಯುನಿಸ್ಟ್ ನಾಯಕರು, ಕಾಂಗ್ರೆಸ್ ಮಾಡಿದ ದ್ರೋಹದ ಕಥನವನ್ನು ಹೇಳುತ್ತಿದ್ದರು. ಅವರಿಗೆ ಈ ಬಗ್ಗೆ ಕಹಿಯಾದ ನೆನಪುಗಳಿದ್ದವು. ಇಲ್ಲಿನ ಕಾಂಗ್ರೆಸಿಗರು, ತೃಣಮೂಲ ಮತ್ತು ಬಿಜೆಪಿ ಒಳಗೊಂಡಂತೆ ಕಮ್ಯುನಿಸ್ಟರನ್ನು ವಿರೋಧಿಸುವ ಯಾವುದೇ ರಾಜಕೀಯ ಶಕ್ತಿಯೊಂದಿಗೆ ಕೈಜೋಡಿಸಲು ತ್ರಿಪುರಾದ್ದೇ ಆದ ಚಾರಿತ್ರಿಕ ಕಾರಣಗಳಿವೆ ಅನಿಸಿತು.
ನಮ್ಮ ತಿರುಗಾಟದಲ್ಲಿ ತಿಳಿದ ಸಂಗತಿಯೆಂದರೆ, ಆಧುನಿಕ ತ್ರಿಪುರಾವನ್ನು ತನ್ನ ಬದ್ಧತೆ ಮತ್ತು ವೀರೋಚಿತ ಹೋರಾಟಗಳಿಂದ ಕಟ್ಟಿದ, ಮುಖ್ಯಮಂತ್ರಿಯೂ ಆಗಿದ್ದ ದಶರತ್ ದೇಬಬರ್ಮ ಇಲ್ಲಿನ ನಿಜವಾದ ಹೀರೊ ಎಂದು. ಅವರ ಹೋರಾಟದ ಬಗ್ಗೆ ದಂತಕತೆಗಳೇ ಇವೆ. ಜನರಲ್ಲಿ ಅವರ ಬಗ್ಗೆ ಬಹಳ ಗೌರವವಿದೆ. ಆದರೆ ಆಧುನಿಕ ಭಾರ�