ಕರ್ನಾಟಕ ಪ್ರವಾಹ: ರಕ್ಷಣಾ ಕಾರ್ಯಕ್ಕೆ ತೆರಳಿದ ಬೋಟ್ ನೀರುಪಾಲು!
ಮೂವರು ಸಿಬ್ಬಂದಿಯ ರಕ್ಷಣೆ, ಇಬ್ಬರಿಗಾಗಿ ಶೋಧ
ಸಾಂದರ್ಭಿಕ ಚಿತ್ರ
ಕೊಪ್ಪಳ, ಆ.11: ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರವಾಹಪೀಡಿತ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಇದ್ದರೆನ್ನಲಾದ ಬೋಟ್ ನೀರುಪಾಲಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ನೀರುಪಾಲಾಗಿದ್ದ ಐವರ ಪೈಕಿ ಮೂವರನ್ನು ರಕ್ಷಿಸಲಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ್ದ 25 ವಿದೇಶೀಯರ ಸಹಿತ 70ಕ್ಕೂ ಅಧಿಕ ಜನರನ್ನು ಐವರು ರಕ್ಷಣಾ ಸಿಬ್ಬಂದಿ ಬೋಟ್ನಲ್ಲಿ ತೆರಳಿ ರಕ್ಷಿಸಿತ್ತು. ಐವರು ಸಿಬ್ಬಂದಿ ಮತ್ತೆ ಸಂತ್ರಸ್ತರನ್ನು ಕರೆ ತರಲು ನಡುಗಡ್ಡೆಯತ್ತ ಹೋಗುತ್ತಿದ್ದಾಗ ರಭಸವಾಗಿ ಬಂದ ನೀರಿನಿಂದಾಗಿ ಬೋಟ್ ಗಿಡಕ್ಕೆ ಬಡಿದು ಮಗುಚಿ ಬಿದ್ದಿದೆ. ಆಗ ಬೋಟ್ನಲ್ಲಿದ್ದ ಸಿಬ್ಬಂದಿ ನೀರು ಪಾಲಾಗಿದ್ದಾರೆ.
ನೀರಿಗೆ ಬಿದ್ದ ಸಿಬ್ಬಂದಿ ರಕ್ಷಣೆಗೆ ಮತ್ತೆರಡು ತಂಡ ರಚಿಸಲಾಗಿತ್ತು. ಎರಡು ಹೆಲಿಕಾಪ್ಟರ್ರನ್ನು ಕರೆತಂದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಸೂಚನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.