ಶೇಡಬಾಳ, ವಾಡಿ ರೈಲು ಸಂಚರಿಸಲಿ
ಮಾನ್ಯರೇ,
ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ವಾಣಿಜ್ಯ ಮತ್ತು ವ್ಯವಹಾರಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ವಿಶಿಷ್ಟವಾದ ಸಾಧನೆ ಗೈಯುತ್ತಿರುವ ಪಟ್ಟಣವಾಗಿದೆ. ಇಲ್ಲಿನ ಜನರು ವ್ಯವಹಾರಿಕ ವಹಿವಾಟಿಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಬೇಕಾದ ಅನಿವಾರ್ಯ ಇದೆ. ಆದರೆ ಸಿಂದಗಿ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರಿಗೆ ಇತರ ರಾಜ್ಯ, ಜಿಲ್ಲೆಗಳ ಜೊತೆಗೆ ವ್ಯವಹರಿಸಲು ತೊಂದರೆ ಉಂಟಾಗುತ್ತಿದೆ.
ಇಂಡಿ, ಮುದ್ದೇಬಿಹಾಳ, ಬ.ಬಾಗೇವಾಡಿ ಸೇರಿದಂತೆ ಹೋಬಳಿಗಳಿಗೂ ಸಹ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪಟ್ಟಣವೆನಿಸಿರುವ ಸಿಂದಗಿ ನಗರಕ್ಕೆ ರೈಲು ಸಂಚಾರ ಇಲ್ಲದಿರುವುದು ವಿಷಾದನೀಯ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹಲವು ಜನ ಪ್ರತಿನಿಧಿಗಳು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾದರೂ ಯಾರೊಬ್ಬರೂ ಈ ವಿಷಯದ ಬಗ್ಗೆ ಗಂಭೀರತೆ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸಿದರಿಂದ ಸಿಂದಗಿ ಪಟ್ಟಣ ರೈಲು ಸಂಚಾರ ಪಡೆದುಕೊಂಡಿಲ್ಲ.
ಆದ್ದರಿಂದ ಇನ್ನಾದರೂ ಸ್ವಾತಂತ್ರ ಪೂರ್ವದಿಂದಲೇ (1935) ಬೇಡಿಕೆಯಾಗಿರುವ ಶೇಡಬಾಳ ಮತ್ತು ವಾಡಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಬೇಕು. ಈ ಮಾರ್ಗವಾಗಿ ರೈಲು ಸಂಚರಿಸಿದರೆ ಸಿಂದಗಿ ಪಟ್ಟಣ ಸೇರಿ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಬೇಕು. ಈ ಮೂಲಕ ಬಹು ವರ್ಷಗಳ ಬೇಡಿಕೆಯಾದ ಶೇಡಬಾಳ ಮತ್ತು ವಾಡಿ ರೈಲು ಸಂಚಾರ ಯೋಜನೆ ಈಡೇರಲಿ.