ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ : ಬಳ್ಳಾರಿ ಟಸ್ಕರ್ಸ್ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಝಿ ಸಿಸಿಬಿ ಬಲೆಗೆ
ಬಳ್ಳಾರಿ ಟಸ್ಕರ್ಸ್ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಝಿ (ESPNcricinfo Ltd)
ಬೆಂಗಳೂರು, ನ.7: ಕಳೆದ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ 20 ಲೀಗ್ನ ವೇಳೆ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸೆಂಟ್ರೆಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ತಂಡದ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಮತ್ತು ಆಟಗಾರ ಅಬ್ರಾರ್ ಕಾಝಿ ಯನ್ನುಇ ಬಂಧಿಸಿದ್ದಾರೆ.
ಈ ವರ್ಷದ ಆಗಸ್ಟ್ 31 ರಂದು ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಲಿ ಟೈಗರ್ಸ್ ನಡುವೆ ಆಡಿದ ಕೆಪಿಎಲ್ ಫೈನಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ಫೈನಲ್ನಲ್ಲಿ ನಿಧಾನಗತಿಯ ಬ್ಯಾಟಿಂಗ್ಗಾಗಿ ಅವರಿಗೆ 20 ಲಕ್ಷ ರೂ.ಗಳನ್ನು ನೀಡಲಾಗಿದೆ ಮತ್ತು ಕೆಪಿಎಲ್ನಲ್ಲಿ ಬೆಂಗಳೂರು ತಂಡದ ವಿರುದ್ಧ ಆಡಿದ ಮತ್ತೊಂದು ಪಂದ್ಯದಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತ-ಎ ತಂಡದ ಆಟಗಾರ ಗೌತಮ್ ಅವರು ಕರ್ನಾಟಕ ಮತ್ತು ಗೋವಾ ತಂಡದ ಪರ ರಣಜಿಯಲ್ಲಿ ಆಡಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಹಲವಾರು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗೋವಾ ತಂಡ ಸೇರುವ ಮೊದಲು ಗೌತಮ್ ಕರ್ನಾಟಕ ರಾಜ್ಯ ತಂಡದ ಪರ ರಣಜಿಯಲ್ಲಿ ಆಡಿದ್ದರು.
ಈ ಹಿಂದೆ ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ನಿಶಾಂತ್ ಸಿಂಗ್ ಶೇಖಾವತ್ ಅವರನ್ನು ಕರ್ನಾಟಕ ಪೊಲೀಸರು ಮಂಗಳವಾರ ಬಂಧಿಸಿದ್ದರು.
"ಕ್ರಿಕೆಟ್ ಆಟಗಾರ ನಿಶಾಂತ್ ಸಿಂಗ್ ಶೆಕಾವತ್ ಅವರನ್ನು ಬಂಧಿಸಲಾಗಿದೆ. ಅವರು ಬುಕ್ಕಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಆಟಗಾರರೊಂದಿಗೆ ಫಿಕ್ಸಿಂಗ್ ನಡೆಸಲು ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ತರಬೇತುದಾರ ವಿನು ಪ್ರಸಾದ್ ಅವರನ್ನು ಸಂಪರ್ಕಿಸಿದ್ದರು" ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಮಂಗಳವಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಬೆಳಗಾವಿ ತಂಡದ ನಡುವೆ 2018 ರಲ್ಲಿ ಕೆಪಿಎಲ್ ಪಂದ್ಯವನ್ನು ಫಿಕ್ಸಿಂಗ್ ಮಾಡಿದ ಆರೋಪ ಶೆಕಾವತ್ ಮೇಲಿದೆ. ಇದರಲ್ಲಿ ಅವರು ನಿಧಾನವಾಗಿ ಆಡಿದ್ದಾರೆ ಮತ್ತು ಅದಕ್ಕಾಗಿ 5 ಲಕ್ಷ ರೂ ಪಡೆದಿದ್ದಾರೆ ಎನ್ನಲಾಗಿದೆ
ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ, ಬೆಂಗಳೂರು ಬ್ಲಾಸ್ಟರ್ಸ್ ಬೌಲಿಂಗ್ ಕೋಚ್ ವಿನು ಪ್ರಸಾದ್ ಮತ್ತು ಬ್ಯಾಟ್ಸ್ಮನ್ ವಿಶ್ವನಾಥನ್ ಅವರನ್ನು ಬಂಧಿಸಿದ್ದರು.
ಅಲಿ ದುಬೈ ಮೂಲದ ಬುಕ್ಕಿಯೊಂದಿಗೆ ಬೆಟ್ಟಿಂಗ್ ನಡೆಸಿದ್ದಾನೆ ಮತ್ತು ಲೀಗ್ ಸಮಯದಲ್ಲಿ ಇತರ ತಂಡಗಳ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.