ಫ್ಯಾಕ್ಟ್ ಚೆಕ್: ಬಿಜೆಪಿ ಸಂಸದ ಶೇರ್ ಮಾಡಿದ್ದ ವಿಡಿಯೋದಲ್ಲಿರುವ ಕೋಮು ಗಲಭೆಯ ಗಾಯಾಳು ಹಿಂದೂ ಅಲ್ಲ, ಮುಸ್ಲಿಂ
‘ಹಿಂದೂಗಳ ಮೇಲೆ ದಾಳಿ’ ಎಂದಿದ್ದ ಅರ್ಜುನ್ ಸಿಂಗ್
ಕೊಲ್ಕತ್ತಾ: ಹೂಗ್ಲಿ ಜಿಲ್ಲೆಯ ತೆಲಿನ್ಪುರ ಮತ್ತು ಭದ್ರೇಸ್ವರ್ ಪ್ರದೇಶಗಳಲ್ಲಿ ಮೇ 11ರಂದು ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ರಾಜ್ಯದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ತೆಲಿನ್ಪಾರ ಘಟನೆಯಲ್ಲಿ ಹಿಂದುಗಳ ಮೇಲೆ ಹೇಗೆ ದೌರ್ಜನ್ಯ ನಡೆಸಲಾಗಿದೆಯೆಂದು ತೋರಿಸಲು ದೇಹವೆಲ್ಲಾ ರಕ್ತಸಿಕ್ತವಾಗಿದ್ದ ವ್ಯಕ್ತಿಯೊಬ್ಬನ ವೀಡಿಯೋ ಪೋಸ್ಟ್ ಮಾಡಿದ್ದರಲ್ಲದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದರು. ಇದೇ ವೀಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದರು.
ಆದರೆ altnews.in ಈ ಕುರಿತು ಪರಿಶೀಲಿಸಿದಾಗ ವೀಡಿಯೋದಲ್ಲಿ ಕಾಣಿಸಿರುವ ಗಾಯಾಳು ವ್ಯಕ್ತಿ ಹಿಂದೂ ಆಗಿರದೆ ಮುಸ್ಲಿಂ ವ್ಯಕ್ತಿಯಾಗಿದ್ದ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯ ಹೆಸರು ಮನ್ಸೂರ್ ಖಾನ್ ಎಂದೂ, 38 ವರ್ಷದ ಅವರು ಭದ್ರೇಶ್ವರ್ ಸಮೀಪದ ಸೆಣಬು ಕಾರ್ಖಾನೆಯ ಕಾರ್ಮಿಕನೆಂದೂ ತಿಳಿದು ಬಂತು. ಬಿಹಾರ ಮೂಲದವನಾದ ಈತ ಜೂಟ್ ಮಿಲ್ ಕ್ವಾರ್ಟರ್ಸ್ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದರು.
ಸಂಜೆ ಇಫ್ತಾರ್ ವೇಳೆಗೆ ಹೊತ್ತಿಗೆ ಮನೆಯಲ್ಲಿ ಕುಟುಂಬ ಸದಸ್ಯರ ಜತೆ ಕುಳಿತಿದ್ದಾಗ ಗುಂಪೊಂದು ಅಲ್ಲಿಗೆ ಬಂದು ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ನಂತರ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ತಲೆಗೆ ಹಾಗೂ ಕೈಗಳಿಗೆ ಹಲವು ಹೊಲಿಗೆಗಳನ್ನು ಹಾಕಲಾಗಿದೆ ಎಂದು altnews.in ಜೊತೆ ಮಾತನಾಡಿದ ಅವರು ವಿವರಿಸಿದ್ದಾರೆ.
ಈ ಬಗ್ಗೆ ಸ್ವತಃ ಮನ್ಸೂರ್ ಖಾನ್ ಪುತ್ರ ಮಾತನಾಡಿರುವ ವಿಡಿಯೋ ಈ ಕೆಳಗಿದೆ.