ತೀರ್ಪುಗಳ ಕುರಿತು ಮಾನಹಾನಿಕರ ಟೀಕೆ: ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ ಆದೇಶ
ಹೈದರಾಬಾದ್: ಆಂದ್ರ ಪ್ರದೇಶದ ಹೈಕೋರ್ಟ್ ತೀರ್ಪುಗಳ ಕುರಿತು ಮಾನಹಾನಿಕರ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಕುರಿತು ಸಿಬಿಐ ತನಿಖೆ ನಡೆಸಲಿದೆ ಎಂದು ಆಂಧ್ರ ಹೈಕೋರ್ಟ್ ಇಂದು ತಿಳಿಸಿದೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ವೈಎಸ್ ಆರ್ ಕಾಂಗ್ರೆಸ್ಸಿನ 49 ಮುಖಂಡರು ಹಾಗೂ ಕಾರ್ಯಕರ್ತರಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
ಆಂಧ್ರ ಪ್ರದೇಶದ ಹೈಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿ ಹಾಗೂ ಇತರ ನಾಲ್ವರು ನ್ಯಾಯಾಧೀಶರು ತಮ್ಮ ಚುನಾಯಿತ ಸರಕಾರದ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾರತದ ಮುಖ್ಯ ನ್ಯಾಯ ಮೂರ್ತಿಗೆ ದೂರು ನೀಡಿದ ಕೆಲವೇ ದಿನಗಳಲ್ಲಿ ಈ ಆದೇಶ ಬಂದಿದೆ.
ಹೈಕೋರ್ಟ್ ನ ತೀರ್ಪನ್ನು ದೂಷಿಸಿದ ಎಲ್ಲರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಬೇಕು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಇಂದು ಆದೇಶಿಸಿದೆ.
ಹೈಕೋರ್ಟ್ ನ ತೀರ್ಪು ಗಳನ್ನು ಸೋಷಿಯಲ್ ಮೀಡಿಯಾ ಗಳಲ್ಲಿ ತಪ್ಪು ತಪ್ಪಾಗಿ ನಿರೂಪಿಸಲಾಗಿದೆ ಎಂದು ವಾದಿಸಿದ ನ್ಯಾಯಾಧೀಶರು ಸಿಬಿಐಗೆ ಸಹಕರಿಸುವಂತೆ ಸರಕಾರವನ್ನು ಕೇಳಿದರು.
ತನ್ನ ತೀರ್ಪು ಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ ಇದು ನ್ಯಾಯಾಂಗದ ಪ್ರತಿಷ್ಠೆಗೆ ಕಳಂಕ ತರುತ್ತಿದೆ ಎಂದು ಹೇಳಿದೆ.