ಕೋವಿಡ್-19 ಲಸಿಕೆ ವಿತರಣೆಯಲ್ಲಿ ಏಕತೆ ಪ್ರದರ್ಶಿಸೋಣ: ವಿಶ್ವದ ರಾಷ್ಟ್ರಗಳಿಗೆ ಡಬ್ಲ್ಯುಎಚ್ಓ ಕರೆ
ಬರ್ಲಿನ್,ಅ.26: ಭವಿಷ್ಯದಲ್ಲಿ ಬಿಡುಗಡೆಯಾಗುವ ಕೊರೋನ ವೈರಸ್ ಲಸಿಕೆಯ ವಿತರಣೆಯಲ್ಲಿ ಎಲ್ಲಾ ದೇಶಗಳು ‘ಜಾಗತಿಕ ಏಕತೆ’ಯನ್ನು ಪ್ರದರ್ಶಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ವರಿಷ್ಠ ಟೆಡ್ರೊಸ್ ಅಧ್ನಾಮ್ ಗೆಬ್ರೆಯೆಸೂಸ್ ಕರೆ ನೀಡಿದ್ದಾರೆ.
ಬರ್ಲಿನ್ನಲ್ಲಿ ಮೂರು ದಿನಗಳ ವಿಶ್ವ ಆರೋಗ್ಯ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ವೀಡಿಯೋ ಭಾಷಣ ಮಾಡಿದ ಅವರು ಏಕತೆಯಿಂದ ಇದ್ದಲ್ಲಿ ಮತ್ತು ಬಡ ರಾಷ್ಟ್ರಗಳಿಗೂ ನ್ಯಾಯಯುತವಾಗಿ ಕೊರೋನ ವೈರಸ್ ನಿರೋಧಕ ಲಸಿಕೆ ಲಭ್ಯವಾಗುವಂತೆ ಮಾಡಿದಲ್ಲಿ ಮಾತ್ರವೇ ಕೋವಿಡ್-19 ಸಾಂಕ್ರಾಮಿಕದ ಬಾಧೆಯಿಂದ ಜಗತ್ತು ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಟೆಡ್ರೊಸ್ ಅಭಿಪ್ರಾಯಿಸಿದರು.
‘‘ ಮೊದಲಿಗೆ ತಮ್ಮ ಪ್ರಜೆಗಳನ್ನು ರಕ್ಷಿಸಲು ದೇಶಗಳು ಬಯಸುವುದು ಸಹಜವೇ ಆಗಿದೆ. ಆದರೆ ನಮಗೆ ಪರಿಣಾಮಕಾರಿ ಲಸಿಕೆ ಲಭ್ಯವಾದಲ್ಲಿ ನಾವು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೂ ಸಾಧ್ಯವಿದೆ. ಕೆಲವೇ ದೇಶಗಳ ಎಲ್ಲಾ ಮಂದಿಗೆ ಲಸಿಕೆ ನೀಡುವುದಕ್ಕಿಂತ ಎಲ್ಲಾ ದೇಶಗಳ ಕೆಲವು ವ್ಯಕ್ತಿಗಳಿಗೆ ಲಸಿಕೆ ಒದಗಿಸುವುದು ಸೋಂಕು ನಿಯಂತ್ರಣಕ್ಕೆ ಉತ್ತಮ ಮಾರ್ಗವಾಗಿದೆ. ಲಸಿಕೆಯಲ್ಲೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸಿದಲ್ಲಿ ಸಾಂಕ್ರಾಮಿಕದ ಹಾವಳಿ ಇನ್ನೂ ದೀರ್ಘಕಾಲದವರೆಗೆ ಉಳಿಯಲಿದೆಯೇ ಹೊರತು ಕಡಿಮೆಯಾಗಲಾರದು ಎಂದು ಟೆಡ್ರೊಸ್ ಎಚ್ಚರಿಕೆ ನೀಡಿದರು.
ಕೋವಿಡ್-19 ಲಸಿಕೆ ಎಲ್ಲಾ ದೇಶಗಳಿಗೆ ಸಮಾನವಾಗಿ ದೊರೆಯುವುದನ್ನು ಖಾತರಿಪಡಿಸಲು ವಿಶ್ವ ಆರೋಗ್ಯಸಂಸ್ಥೆಯು ಕೊವ್ಯಾಕ್ಸ್ ಎಂಬ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿದೆ. ಆದರೆ ಅದನ್ನು ಕಾರ್ಯಗತಗೊಳಿಸಲು ಬೇಕಾದ ಆರ್ಥಿಕ ನಿಧಿಯನ್ನು ಕ್ರೋಢೀಕರಿಸಲು ಅದು ಹರಸಾಹಸ ಪಡುತ್ತಿದೆ.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಕಾರ್ಯದರ್ಶಿ ಆ್ಯಂಟೊನಿಯೋ ಗುಟರೆಸ್ ಅವರು ‘ಕೊರೋನ ವೈರಸ್ ಸಾಂಕ್ರಾಮಿಕವು ನಮ್ಮ ಕಾಲದ ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ’’ ಎಂದರು.