ಕನ್ನಡ ರಾಜ್ಯೋತ್ಸವ: ಕಸಾಪ ಪ್ರಕಟನೆಯ ಪುಸ್ತಕಗಳು ರಿಯಾಯಿತಿ ದರದಲ್ಲಿ ಮಾರಾಟ
ಮನು ಬಳಿಗಾರ್
ಬೆಂಗಳೂರು, ಅ.27: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ ಪ್ರಕಟನೆಯ ಪುಸ್ತಕಗಳಿಗೆ ಶೇ.10ರಿಂದ 75ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಪರಿಷತ್ ಅದ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಚಾಮರಾಜಪೇಟೆಯಲ್ಲಿರುವ ಕಸಾಪ ಕೇಂದ್ರ ಕಚೇರಿಯಲ್ಲಿ ನ.1ರಿಂದ 30ರವರೆಗೆ ಬೆಳಗ್ಗೆ 10ರಿಂದ 5ರವರಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರಿಯಾಯಿತಿ ದರಗಳು: ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟಿಗೆ ಶೇ.10ರಷ್ಟು ರಿಯಾಯಿತಿ. ಬೃಹತ್ ಕನ್ನಡ-ಕನ್ನಡ ನಿಘಂಟು (1ರಿಂದ 8ಸಂಪುಟ) ಶೇ.50ರಷ್ಟು ರಿಯಾಯಿತಿ. ಗದ್ಯಾನುವಾದ ಪುಸ್ತಕಗಳು, ಶತಮಾನೋತ್ಸವ ಮಾಲಿಕೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಪರೀಕ್ಷೆ ಪುಸ್ತಕಗಳು ಹಾಗೂ ಇತರೆ ಹೊಸ ಪುಸ್ತಕಗಳಿಗೆ ಶೇ.35ರಷ್ಟು ರಿಯಾಯಿತಿ ಇರುತ್ತದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪುಸ್ತಕಗಳು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಪುಸ್ತಕಗಳು, ಪಿಎಚ್ಡಿ ಮತ್ತು ಜೀವನ ಚರಿತ್ರೆ ಪುಸ್ತಕಗಳಿಗೆ ಶೇ.50ರಷ್ಟು ಹಾಗೂ ಸ್ಮರಣ ಸಂಚಿಕೆಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು ಹಾಗೂ ಬೀದರ್ ಸಮ್ಮೇಳನ ಪುಸ್ತಕಗಳಿಗೆ ಶೇ.75ರಷ್ಟು ರಿಯಾಯಿತಿ ಸಿಗಲಿದೆ ಏಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.