'ಹೆಮ್ಮೆಯ ಯುಎಇ ಕನ್ನಡಿಗರು' ಆಯೋಜಿತ 'ದುಬೈ ದಸರಾ ಕ್ರೀಡೋತ್ಸವ' ಇಂದು ಸಮಾರೋಪ
ಅಬುಧಾಬಿ, ಅ.30: ದುಬೈ ಫಿಟ್ನೆಸ್ ಚಾಲೆಂಜ್ ಮತ್ತು ಮೈಸೂರು ದಸರಾ ಪ್ರಯುಕ್ತ ದುಬೈಯ 'ಹೆಮ್ಮೆಯ ಯುಎಇ ಕನ್ನಡಿಗರು' ತಂಡ ಯುಎಇಯಲ್ಲಿ ನೆಲಸಿರುವ ಕನ್ನಡಿಗರಿಗಾಗಿ ಆಯೋಜಿಸಿರುವ ಪ್ರಸಕ್ತ ಸಾಲಿನ 'ದುಬೈ ದಸರಾ ಕ್ರೀಡಾಕೂಟ'ದ ಸಮಾರೋಪ ಸಮಾರಂಭ ಅ.30ರಂದು ಸಂಜೆ 4ಕ್ಕೆ ಆನ್ ಲೈನ್ ಮೂಲಕ ನಡೆಯಲಿದೆ.
ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಅಂತಾರಾಷ್ಟ್ರೀಯ ಕ್ರೀಡಾತಾರೆ ಡಾ. ಮಾಲತಿ ಕೃಷ್ಣಮೂರ್ತಿ ಹೊಳ್ಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ` ಸಂಸ್ಥೆಯ ವತಿಯಿಂದ ಅವರಿಗೆ 'ದುಬೈ ಕ್ರೀಡಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಅದೇರೀತಿ ಭಾರತೀಯ ತಂಡದ ಮಾಜಿ ವಾಲಿಬಾಲ್ ಆಟಗಾರ ಇಮ್ತಿಯಾಝ್ ಅಹ್ಮದ್ ಮತ್ತು ಮಾಜಿ ಭಾರತೀಯ ಈಜುಗಾರ ಶ್ರೀಹರಿ ನಟರಾಜ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಗುವುದು.
ಅತಿಥಿಗಳಾಗಿ ಎಮ್ ಸ್ಕ್ವೇರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲಕ ಮುಹಮ್ಮದ್ ಮುಸ್ತಫ ಭಾಗವಹಿಸುವರು. ನಿರೂಪಕಿ, ಹಿನ್ನೆಲೆ ಕಂಠದಾನ ಕಲಾವಿದೆ ಶೃತಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಡಾ .ಗುರುಮಾಧವ ರಾವ್, ಡಾ.ರಶ್ಮಿ ನಂದಕಿಶೋರ್ ಬೆಂಗಳೂರು, ಶೇಖರ್ ರೆಡ್ಡಿ, ಮೋಹನ್ ಉಪ್ಪಿನ್, ಪ್ರವೀಣ್ ಶೆಟ್ಟಿ, ಉಮಾ ವಿಧ್ಯಾದರ್, ಸರ್ವೋತ್ತಮ ಶೆಟ್ಟಿ, ಆನಂದ್ ಬೈಲೂರು, ಡಾ.ಅಶೋಕ್ ಕುಮಾರ್ ಮತ್ತು ಸತ್ಯ, ವಿಮಲ್ ಕುಮಾರ್, ಸತೀಶ್ ಹಿಂದರ್, ಶಶಿಧರ್ ನಾಗರಾಜಪ್ಪ, ಕರುಣಾಕರ್ ರಾವ್, ನಾಗೇಶ್ ರಾವ್, ಪ್ರದೀಪ್ ಶೆಟ್ಟಿ, ರಾಜೇಶ್ ವಿಠ್ಠಲ್, ಮಾನ್ಯ : ಮನಫ್ ಮೀರು, ನಯ್ಯರ್ ಭಟ್ಕಳ, ಡಾ.ಯೂಸುಫ್, ಇಸ್ಮಾಯೀಲ್ ಮೂಳೂರು, ಹಿದಾಯತ್ ಅಡ್ಡೂರು ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಳೆದ ಹಲವು ದಿನಗಳಿಂದ ಆನ್ಲೈನ್ ಮುಖಾಂತರ ಹಲವು ಆಟ ಮತ್ತು ಕಾರ್ಯಕ್ರಮ ನಡೆಯುತ್ತಿದ್ದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರ ನೀಡಲಾಗುವುದು. ಯುಎಇಯಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡಿಗ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ, ದಸರಾ ಕುರಿತು ಕನ್ನಡ ಮಕ್ಕಳ ಭಾಷಣ ಸ್ಪರ್ಧೆ ಮತ್ತು ಅವರಿಗೆ ಬಹುಮಾನ ವಿತರಣೆ, ಕವಿಗೋಷ್ಠಿ, ಕನ್ನಡ ರಸಪ್ರಶ್ನೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ, ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಅಂತ್ಯಾಕ್ಷರಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಕೋವಿಡ್ ಸಮಯದಲ್ಲಿ ಮುಖ್ಯ ವಾಹಿನಿಯಲ್ಲಿ ಸೇವೆ ನೀಡಿದ ಅರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೋವಿಡ್ ಯೋಧರಿಗೆ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ ಎಂದು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷ ಸುದೀಪ್ ದಾವಣಗೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.