ಸಿಗಂದೂರು ದೇವಳಕ್ಕೆ ನಿರ್ವಹಣಾ ಸಮಿತಿ ರಚಿಸಿ ಸರಕಾರ ಕಂಟಕ ಉಂಟು ಮಾಡಲು ಹೊರಟಿದೆ: ಧರ್ಮದರ್ಶಿ ರಾಮಪ್ಪ
ಈಡಿಗ ಸಮುದಾಯ ಪ್ರತಿಭಟಿಸಲು ಕರೆ
ಶಿವಮೊಗ್ಗ, ಅ.30: ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚಿಸಿರುವ ಸಮಿತಿಯ ವಿಚಾರವಾಗಿ ದೇವಸ್ಥಾನ ಟ್ರಸ್ಟ್ನ ಧರ್ಮದರ್ಶಿ ರಾಮಪ್ಪ ಕೊನೆಗೂ ಮೌನ ಮುರಿದ್ದಾರೆ. ಗುರುವಾರ ಸಂಜೆಯಷ್ಟೇ ನೂತನ ಸಮಿತಿ ಸಭೆ ನಡೆಸಿದ ಬೆನ್ನಲ್ಲೆ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇಂದು ಆರ್ಯ ಈಡಿಗ ಸಮುದಾಯ ಭವನದಲ್ಲಿ ನಡೆದ ದಿನಪತ್ರಿಕೆಯೊಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚಿಸಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡುತ್ತೇನೆ ಎಂದು ರಾಮಪ್ಪ ತಿಳಿಸಿದ್ದಾರೆ.
ಜಿಲ್ಲಾಡಳಿತ ರಚಿಸಿರುವ ಈ ಸಮಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಈಡಿಗ ಸಮುದಾಯ ಪ್ರತಿಭಟಿಸಬೇಕೆಂದು ಬಹಿರಂಗ ಕರೆ ನೀಡಿದ ರಾಮಪ್ಪ, ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಯಾವ ಭ್ರಷ್ಟಾಚಾರಗಳು ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ ರಚನೆ ಮಾಡುವ ಮೂಲಕ ಏನೋ ಕಂಟಕ ಮಾಡಲು ಸರಕಾರ ಹೊರಟಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಮಾಡಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಆರ್ಯ ಈಡಿಗ ಮಠದ ಶ್ರೀರೇಣುಕಾನಂದ ಶ್ರೀ ಮತ್ತು ಸಮುದಾಯ ಹೋರಾಟ ನಡೆಸಬೇಕು. ಅದಕ್ಕೆ ನಾನು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇನೆ ಎಂದು ಘೋಷಿಸಿದರು.