ಮೂಲತ್ವ ವಿಶ್ವ ಪ್ರಶಸ್ತಿಗೆ ರವಿ ಕಟಪಾಡಿ ಆಯ್ಕೆ
ಮಂಗಳೂರು, ನ. 27: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನೀಡುವ ಮೂಲತ್ವ ವಿಶ್ವ ಪ್ರಶಸ್ತಿಗೆ ಮಾನವೀಯ ಸೇವೆ ಸಲ್ಲಿಸುತ್ತಿರುವ ಉಡುಪಿಯ ರವಿ ಕಟಪಾಡಿಯವರನ್ನು ಆಯ್ಕೆ ಮಾಡಲಾಗಿದೆ. 50,001 ರೂ. ನಗದು ಸಹಿತ ಪ್ರಶಸ್ತಿ ಪ್ರದಾನ ನ.29ರಂದು ಬೆಳಗ್ಗೆ 10:45ಕ್ಕೆ ಶಾರದಾ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ಫೌಂಡೇಶನ್ನ ಅಧ್ಯಕ್ಷ ಪ್ರಕಾಶ್ ಮೂಲತ್ವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರವಿ ಕಟಪಾಡಿ ಬಡವರಾಗಿದ್ದು, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿರುವ ಮಾನವೀಯ ಮನಸ್ಸು ಆದರ್ಶವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ವಿತರಿಸುತ್ತಿದ್ದಾರೆ. 6 ವರ್ಷಗಳಿಂದ ಒಟ್ಟು 54.5 ಲಕ್ಷ ರೂ. ಸಂಗ್ರಹಿಸಿ 28 ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ಮೂಲತ್ವ ಫೌಂಡೇಶನ್ನ ಧ್ಯೇಯ ವಾಕ್ಯದಂತೆ ಕಾರ್ಯ ನಿರ್ವಹಿಸುತ್ತಿರುವ ರವಿ ಕಟಪಾಡಿಯವರನ್ನು ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದವರು ವಿವರಿಸಿದರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಡಿಸೋಜ, ಲಕ್ಷ್ಮೀಶ ಕೋಟ್ಯಾನ್, ಸಂಚಾಲಕ ಹರೀಶ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.