ಪ್ರತಿಭಟನಾಕಾರರು ರೈತರಂತೆ ಕಾಣುತ್ತಿಲ್ಲ ಎಂಬ ಕೇಂದ್ರ ಸಚಿವರ ಹೇಳಿಕೆಗೆ ಆಪ್ ತಿರುಗೇಟು
ಹೊಸದಿಲ್ಲಿ: ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಸಾವಿರಾರು ಪುರುಷರು ಹಾಗೂ ಮಹಿಳೆಯರು ರೈತರಂತೆ ಕಾಣುತ್ತಿಲ್ಲ ಎಂದು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ಸಿಂಗ್ ಹೇಳಿಕೆಗೆ ತಕ್ಕ ಉತ್ತರ ನೀಡಿರುವ ಆಮ್ ಅದ್ಮಿ ಪಕ್ಷ, ಪ್ರತಿಭಟನಾಕಾರರು ರೈತರಂತೆ ಕಾಣಿಸಿಕೊಳ್ಳಲು ಅವರು ನೇಗಿಲು ಹಾಗೂ ಎತ್ತಿನೊಂದಿಗೆ ಬರಬೇಕಾದ ಅಗತ್ಯವಿತ್ತೇ? ಎಂದು ಪ್ರಶ್ನಿಸಿದೆ.
ಚಿತ್ರದಲ್ಲಿರುವ ಹೆಚ್ಚಿನವರು ರೈತರಂತೆ ಕಾಣುತ್ತಿಲ್ಲ ಎಂದು ಮಂಗಳವಾರ ಸಂಜೆ ಸುದ್ದಿಸಂಸ್ಥೆ ಎಎನ್ ಐಗೆ ಸಿಂಗ್ ತಿಳಿಸಿದರು. ರೈತ ಒಂದು ನಿರ್ದಿಷ್ಠ ನೋಟವನ್ನು ಹೊಂದಿರಬೇಕೆಂಬ ಅರ್ಥದಲ್ಲಿ ಸಿಂಗ್ ಹೇಳಿಕೆ ನೀಡಿದ್ದರು.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯವರು ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ಖಲಿಸ್ತಾನ ಸಂಘಟನೆಯ ನಂಟಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿ ಟೀಕೆಗೆ ಗುರಿಯಾಗಿದ್ದರು. ಪ್ರತಿಭಟನೆಯು ರಾಜಕೀಯ ಪ್ರೇರಿತ, ವಾಸ್ತವವಾಗಿ ಇದು ರೈತರನ್ನು ಒಳಗೊಂಡಿಲ್ಲ ಎಂದಿದ್ದರು.