ಕಾಂಗ್ರೆಸ್ ಜಿಪಂ ಸದಸ್ಯರ ಖರೀದಿಗೆ ಬಿಜೆಪಿಯಿಂದ ಹಣ, ಅಧಿಕಾರದ ಆಮಿಷ: ಶಾಸಕ ರಾಜೇಗೌಡ ಆರೋಪ
ಚಿಕ್ಕಮಗಳೂರು, ಡಿ.1: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೃಷ್ಣಪ್ಪ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿಯಲ್ಲಿ ಸದಸ್ಯರ ಸಂಖ್ಯಾಬಲ ಕಡಿಮೆ ಇರುವುದರಿಂದ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಮುಖಂಡರು ಹಣ, ಅಧಿಕಾರದ ಆಮಿಷ ಒಡ್ಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ವ್ಯಾಪಾರೀಕರಣವನ್ನಾಗಿ ಮಾಡಿದ್ದಾರೆ. ಬಿಜೆಪಿಯವರು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಮುಖಂಡರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲಿದ್ದಾರೆ. ರಾಜ್ಯದಲ್ಲೂ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೇ ಚಾಳಿಯನ್ನು ಬಿಜೆಪಿ ಮುಖಂಡರು ಜಿಲ್ಲೆಯಲ್ಲೂ ಮುಂದುವರಿಸಿದ್ದು, ರಾಜೀನಾಮೆ ವಿಚಾರದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಮ್ಮ ಮಾತು ಕೇಳದ್ದಕ್ಕೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸದಸ್ಯರಲ್ಲಿ ಸಂಖ್ಯಾ ಬಲ ಕಡಿಮೆ ಇದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರನ್ನು ಖರೀದಿಸಲು ಮುಂದಾಗಿದ್ದಾರೆ. ಸದಸ್ಯರಿಗೆ ಹಣ ಹಾಗೂ ಅಧಿಕಾರದ ಆಮಿಷವೊಡ್ಡಲಾಗುತ್ತಿದೆ ಎಂದು ಶಾಸಕರ ರಾಜೇಗೌಡ ಆರೋಪಿಸಿದರು.
ಬಿಜೆಪಿಯವರ ಆಡಳಿತದಿಂದಾಗಿ ಚಿಕ್ಕಮಗಳೂರು ಜಿಪಂ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ದಲಿತ ಸಮುದಾಯಕ್ಕೆ ಸೇರಿದ ಜಿಪಂ ಅಧ್ಯಕ್ಷೆ ಓರ್ವ ಮಹಿಳೆ ಎಂಬುದನ್ನೂ ಮರೆತಿರುವ ಬಿಜೆಪಿ ಮುಖಂಡರು ಅಧಿಕಾರದಿಂದ ಕೆಳಗಿಳಿಸಲು ಮಾಡಿದ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದೆ. ಬಿಜೆಪಿ ಪಕ್ಷದ ಜಿಪಂ ಅಧ್ಯಕ್ಷೆಯನ್ನು ಅವರದೇ ಪಕ್ಷದ ಪರಿಶಿಷ್ಟ ಸಮುದಾಯದ ಜಿಪಂ ಸದಸ್ಯರನ್ನೇ ಎತ್ತಿಕಟ್ಟಿ ಜಿಪಂ ಸಾಮಾನ್ಯ ಸಭೆಯಲ್ಲಿ ಧಿಕ್ಕಾರದ ಘೋಷಣೆ ಕೂಗಿ ಅವಮಾನಿಸಿದ್ದಾರೆ. ಎರಡು ಸಭೆಗೆ ಸದಸ್ಯರು ಗೈರಾಗುವ ಮೂಲಕ ಜಿಲ್ಲೆಯ ಜನರ ಸಮಸ್ಯೆ, ಅಭಿವೃದ್ಧಿ ವಿಚಾರ ಚರ್ಚೆಯಾಗದಂತೆ ಮಾಡಿದ್ದಾರೆ. ಮೂರನೇ ಸಭೆಯಲ್ಲಿ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡುತ್ತಾರೆಂಬ ಭೀತಿಯಿಂದ ಹಾಜರಾಗಿದ್ದಾರಾದರೂ ಆ ಸಭೆಯಲ್ಲೂ ಚರ್ಚೆಗೆ ಅವಕಾಶ ನೀಡದೇ ಜಿಪಂ ಅಧ್ಯಕ್ಷೆಯ ರಾಜೀನಾಮೆಗೆ ಪಟ್ಟು ಹಿಡಿದು ಗೊಂದಲ ಸೃಷ್ಟಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಿಪಂ ಅಧ್ಯಕ್ಷರನ್ನು 5 ವರ್ಷಗಳ ಅವಧಿಗೂ ಮುನ್ನ ಕೆಳಗಿಳಿಸುವಂತಿಲ್ಲ ಎಂಬ ಕಾನೂನಿಗೂ ಬಿಜೆಪಿ ಪಕ್ಷದ ಜಿಪಂ ಸದಸ್ಯರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಟೀಕಿಸಿದರು.
ಜಿಪಂ ಅಧ್ಯಕ್ಷರ ರಾಜೀನಾಮೆ ವಿಚಾರ ಪಕ್ಷದ ಆಂತರಿಕ ವಿಚಾರವಾಗಿದೆ. ಈ ಗೊಂದಲವನ್ನು ಪಕ್ಷದ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬೇಕು. ಇದಕ್ಕಾಗಿ ಜಿಪಂ ಸಭೆಯನ್ನು ಬಲಿ ಕೊಡುವುದು ಲಜ್ಜೆಗೇಡಿತನವಾಗಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧಿಕಾರವನ್ನು ಕಳೆದ ಬಾರಿ ಬಿಜೆಪಿ ಹಿಡಿದಿದೆ. ಈ ವೇಳೆ ಜಿಪಂ ಅಧ್ಯಕ್ಷ ಸ್ಥಾನವನ್ನು 20/40 ತಿಂಗಳಂತೆ ಒಪ್ಪಂದ ಮಾಡಿ ಚೈತ್ರಶ್ರೀ ಹಾಗೂ ಸುಜಾತಾ ಕೃಷ್ಣಪ್ಪ ನಡುವೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಚೈತ್ರಶ್ರೀ ಅವರು ತಮ್ಮ ಅಧಿಕಾರವಧಿ ಮುಗಿದರೂ ರಾಜೀನಾಮೆ ನೀಡದಿದ್ದಾಗ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ನಂತರ ಅಧ್ಯಕ್ಷೆಯಾದ ಸುಜಾತಾ ಕೃಷ್ಣಪ್ಪ ಅವರೂ ರಾಜೀನಾಮೆ ನೀಡಲು ಒಪ್ಪದಿದ್ದಾಗ ಅವರನ್ನೂ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಮೂಲಕ ಜಿಲ್ಲಾ ಪಂಚಾಯತ್ ಆಡಳಿತ ನಗೆಪಾಟಲಿಗೀಡಾಗುವಂತೆ ಮಾಡಿದ ಕೀರ್ತಿ ಬಿಜೆಪಿ ಪಕ್ಷದ ಮುಖಂಡರಿಗೆ ಸಲ್ಲುತ್ತದೆ ಎಂದು ರಾಜೇಗೌಡ ದೂರಿದರು.
ಕೋವಿಡ್19, ಅತೀವೃಷ್ಟಿ, ಬರ, ಕುಡಿಯುವ ನೀರಿನ ಸಮಸ್ಯೆ, ಮಲೆನಾಡಿಗೆ ಮಾರಕವಾಗಿರುವ ಒತ್ತುವರಿ ಸಮಸ್ಯೆ, ಹುಲಿ ಯೋಜನೆ, ಬಫರ್ ಜೋನ್, ಪರಿಸರ ಸೂಕ್ಷ್ಮವಲಯ ಇಂತಹ ಯೋಜನೆಗಳ ಬಗ್ಗೆ ಜಿ.ಪಂ. ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಸರಕಾರದ ಗಮನ ಸೆಳೆಯಬೇಕಿತ್ತು. ಕ್ರೀಯಾ ಯೋಜನೆ ರೂಪಿಸಿ ಅಭಿವೃದ್ಧಿ ಕೆಲಸಗಳಿಗೆ ಚುರುಕು ಮುಟ್ಟಿಸಬೇಕಿತ್ತು. ಆದರೆ ಬಿಜೆಪಿ ಮುಖಂಡರು ಹಾಗೂ ಸದಸ್ಯರಿಗೆ ಉಳಿದ 3-4 ತಿಂಗಳ ಜಿಪಂ ಆಡಳಿತಾವಧಿಗೆ ಅಧಿಕಾರವೇ ಮುಖ್ಯವಾಗಿದೆ. ಜನರ ಸಮಸ್ಯೆ, ಅಭಿವೃದ್ಧಿ ಮರೆತು ಕೀಳುಮಟ್ಟದ ರಾಜಕಾರಣ ಮಾಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯ ಆಶಯಗಳನ್ನೇ ಹಾಳುಗೆಡವಿದ್ದಾರೆ ಎಂದು ಇದೇ ವೇಳೆ ಟಿ.ಡಿ.ರಾಜೇಗೌಡ ಆರೋಪಿಸಿದರು.
ಜಿ.ಪಂ.ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಪಕ್ಷದ ಆಂತರಿಕ ವಿಚಾರವನ್ನು ಜಿ.ಪಂ.ಸಭೆಗೆ ತರುವ ಮೂಲಕ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾದ ಸಭೆಯಲ್ಲಿ ಬಿಜೆಪಿಯವರು ಗೊಂದಲ ಮೂಡಿಸಿದ್ದಾರೆ. ಎರಡು ಸಭೆಗೆ ಗೈರಾದ ಬಿಜೆಪಿ ಸದಸ್ಯರು, ಸದಸ್ಯತ್ವ ಕಳೆದುಕೊಳ್ಳುವ ಭೀತಿಯಿಂದ ಮೂರನೇ ಸಭೆಗೆ ಹಾಜರಾಗಿ ಸಹಿ ಮಾಡಿ ಸಭೆಯಿಂದ ಎದ್ದು ಹೋಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಚರ್ಚೆಗೂ ಅವಕಾಶ ನೀಡಿಲ್ಲ. ರಾಜೀನಾಮೆ ಪ್ರಹಸನವನ್ನು ಮುಂದಿಟ್ಟು ಗೊಂದಲ ಸೃಷ್ಟಿಸಿದ್ದಾರೆ. ರಾಜ್ಯ ಸರಕಾರ ಹಾಗೂ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಹುಲಿ ಯೋಜನೆ, ಬಫರ್ ಜೋನ್, ಪರಿಸರ ಸೂಕ್ಷ್ಮ ವಲಯ, ಮೀಸಲು ಅರಣ್ಯ ಯೋಜನೆಗಳ ಬಗ್ಗೆ ಮಲೆನಾಡಿನ ಜನರಲ್ಲಿ ಗೊಂದಲಗಳಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವುದಾಗಿ ಜನರು ಘೋಷಿಸಿದ್ದಾರೆ. ಈ ಯೋಜನೆ ಜಾರಿ ಸಂಬಂಧ ಸರಕಾರ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದೆ. ಸರಕಾರದ ತನ್ನ ಭರವಸೆಯನ್ನು ಈಡೇರಿಸಬೇಕು ಎಂದ ಅವರು, ಗ್ರಾಪಂ ಚುನಾವಣೆಗೆ ಕಾಂಗ್ರೆಸ್ ಸರ್ವಸಿದ್ಧತೆ ಕೈಗೊಂಡಿದೆ. ಜಿಲ್ಲೆಯ ಎಲ್ಲ ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತಿದೆ ಎಂದು ರಾಜೇಗೌಡ ಇದೇ ವೇಳೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಎ.ಎನ್.ಮಹೇಶ್, ಜಿಪಂ ಸದಸ್ಯೆಯರಾದ ಪ್ರೇಮಾ ಮಂಜುನಾಥ್, ಸದಾಶಿವ, ವನಮಾಲಾ ದೇವರಾಜ್, ಲೋಲಾಕ್ಷಿಬಾಯಿ ಉಪಸ್ಥಿತರಿದ್ದರು.
ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಮಾಜಿ ಶಾಸಕ ಡಿ.ಎನ್.ಜೀವರಾಜ್ ತಡೆಯುತ್ತಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ರಸ್ತೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ನನ್ನ ಗಮನಕ್ಕೆ ತಾರದೆ ಗುದ್ದಲಿ ಪೂಜೆ ನೆರವೇರಿಸಿದ್ದು, ಗುದ್ದಲಿ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಿದ ಅಧಿಕಾರಿಗಳ ಮೇಲೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲಾಗುವುದು.
- ಟಿ.ಡಿ.ರಾಜೇಗೌಡ, ಶಾಸಕಬಿಜೆಪಿ ಪಕ್ಷಕ್ಕೆ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಜಿಪಂ ಅಧಿಕಾರವಧಿ ಇನ್ನು 3-4 ತಿಂಗಳು ಮಾತ್ರ ಇದೆ. ಈ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಲು ಜಿಪಂ ಅಧ್ಯಕ್ಷೆಗೆ ಅವಕಾಶ ನೀಡಬೇಕಿತ್ತು. ಮಲೆನಾಡಿನ ಅರಣ್ಯ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರಕ್ಕೆ ಸರಕಾರವನ್ನು ಆಗ್ರಹಿಸಬೇಕಿತ್ತು. ಆದರೆ ಬಿಜೆಪಿ ಮುಖಂಡರು ಅಧಿಕಾರದ ಆಸೆಗಾಗಿ ಗೊಂದಲ ಸೃಷ್ಟಿಸಿ ಜಿಪಂ ಆಡಳಿತ ವ್ಯವಸ್ಥೆಯನ್ನೇ ಹಾಳು ಗೆಡವಿದರು. ತಮ್ಮದೇ ಪಕ್ಷದ ಇಬ್ಬರು ಜಿಪಂ ಅಧ್ಯಕ್ಷರನ್ನೂ ರಾಜೀನಾಮೆ ವಿಚಾರಕ್ಕೆ ಪಕ್ಷದಿಂದ ಅಮಾನತು ಮಾಡಿ ಬಿಜೆಪಿ ಪಕ್ಷದ ಮುಖಂಡರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಾಜೀನಾಮೆ ಗೊಂದಲದಿಂದಾಗಿ ಎಪ್ರಿಲ್ನಲ್ಲಿ ಅನುಮೋದನೆಯಾಗಬೇಕಿದ್ದ ಕ್ರಿಯಾಯೋಜನೆಗಳಿಗೆ ನವೆಂಬರ್ ನಲ್ಲಿ ಅನುಮೋದನೆ ಪಡೆಯಲಾಗಿದೆ. ಇದರ ಪರಿಣಾಮ ಜಿಲ್ಲಾ ಪಂಚಾಯತ್ಗೆ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗದಂತಾಗಿದೆ.
- ಎ.ಎನ್.ಮಹೇಶ್, ಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ