ಸುಪ್ರೀಂ ಕೋರ್ಟ್ ಟೀಕಿಸಿ ವ್ಯಂಗ್ಯಚಿತ್ರ : ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಟಾರ್ನಿ ಜನರಲ್ ಅನುಮತಿ
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಅನ್ನು ಟೀಕಿಸುವಂತಹ ವ್ಯಂಗ್ಯಚಿತ್ರ ರಚಿಸಿದ ಕಾರ್ಟೂನಿಸ್ಟ್ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅನುಮತಿಸಿದ್ದಾರೆ.
ರಚಿತಾ ಟ್ವೀಟ್ ಮಾಡಿದ್ದ ಸರಣಿ ವ್ಯಂಗ್ಯಚಿತ್ರಗಳು ದೇಶದ ಅತ್ಯುನ್ನತ ನ್ಯಾಯಾಲಯದ ನಿಂದನೆಯಲ್ಲದೆ ಈ ಸಂಸ್ಥೆಯ ಮೇಲಿನ ದಾಳಿ ಹಾಗೂ ಅವಮಾನವಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಕುರಿತಾದ ವ್ಯಂಗ್ಯಚಿತ್ರಗಳನ್ನು ರಚಿತಾ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಸ್ಯಾನಿಟರಿ ಪ್ಯಾನೆಲ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ಅಪೀಲಿಗೆ ಪ್ರತಿಕ್ರಿಯಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಒಪ್ಪಿಗೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಅನ್ನು ಟೀಕಿಸಿ ಟ್ವೀಟ್ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಕೂಡ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಟಾರ್ನಿ ಜನರಲ್ ಇತ್ತೀಚೆಗೆ ಅನುಮತಿಸಿದ್ದರು.