ಪಂಪ್ವೆಲ್ ಸರ್ವಿಸ್ ರಸ್ತೆ ಸಮಸ್ಯೆಗಳ ಆಗರ
► ಪಾದಚಾರಿಗಳ ಜೀವ ಹಿಂಡುವ ಮಣ್ಣಿನ ರಾಶಿ ► ತಂಗುದಾಣವಿಲ್ಲದೆ ಬಿಸಿಲಲ್ಲೇ ಬಸ್ಗೆ ಕಾಯುವ ಪ್ರಯಾಣಿಕರು
ಮಂಗಳೂರು : ಸ್ಮಾರ್ಟ್ಸಿಟಿಯಾಗಿ ಮಾರ್ಪಡಲು ಮಂಗಳೂರು ತುದಿಗಾಲಲ್ಲಿ ನಿಂತಿದೆ. ಆದರೆ, ಕಡಲ ನಗರಿಯ ಪ್ರವೇಶದ್ವಾರದಂತಿರುವ ಪಂಪ್ವೆಲ್ ಸರ್ವಿಸ್ ರಸ್ತೆಯು ಸ್ಥಳೀಯರು, ಪ್ರಯಾಣಿಕರ ಪಾಲಿಗೆ ಸವಾಲಾಗಿದೆ.
ರಸ್ತೆ ಬದಿಯಲ್ಲೇ ಅಶುಚಿತ್ವ, ಅಸಮರ್ಪಕ ಪಾದಚಾರಿ ಮಾರ್ಗ, ರಾಶಿ ಬಿದ್ದಿರುವ ಲೋಡುಗಟ್ಟಲೇ ಮಣ್ಣು ಗುಡ್ಡೆಗಳು, ವಾಹನ ಸಂಚರಿಸಿದರೆ ಮುಖಕ್ಕೆ ರಾಚುವ ಧೂಳು ಹೀಗೆ ಹಲವು ತೊಡಕುಗಳಿಂದ ಕೂಡಿವೆ.
ಪಂಪ್ವೆಲ್ನಿಂದ ಇಂಡಿಯಾನ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಬೃಹತ್ ಮಣ್ಣಿನ ಗುಡ್ಡೆಗಳು ಪಾದಚಾರಿಗಳಿಗೆ ಅಕ್ಷರಶಃ ಜೀವ ಹಿಂಡುತ್ತಿವೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಇಲ್ಲಿ ಮಣ್ಣಿನ ರಾಶಿಗಳನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಬಸ್, ವಿವಿಧ ವಾಹನಗಳಿಂದ ಮೇಲೇಳುವ ಧೂಳು ಪಾದಚಾರಿಗಳೂ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತ್ರಾಸದಾಯಕವಾಗಿದೆ.
ಅಸಮರ್ಪಕ ಪಾದಚಾರಿ ಮಾರ್ಗ: ನಗರದ ಕಡೆಯಿಂದ ಇಂಡಿಯಾನ ಆಸ್ಪತ್ರೆ ದಾರಿಯ ಪಾದಚಾರಿ ಮಾರ್ಗ ಅಕ್ಷರಶಃ ಕಿತ್ತು ಹೋಗಿದೆ. ಪಾದಚಾರಿಗಳು ನಡೆದಾಡುವ ಸ್ಲಾಬ್ಗಳು ಹಲವೆಡೆ ಮುರಿದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇನ್ನು ಕೆಲವೆಡೆ ಸ್ಲಾಬ್ಗಳೇ ಇಲ್ಲದೆ ವಾಹನ ಸಂಚರಿಸುವ ಡಾಂಬರೀಕರಣ ರಸ್ತೆಯಲ್ಲೇ ನಡೆದುಕೊಂಡು ಹೋಗುವ ಸ್ಥಿತಿ ಇದೆ.
ಇದೇ ಮಾರ್ಗದ ಪೆಟ್ರೋಲ್ ಬಂಕ್ ಎದುರು ಕೂಡ ಅವೈಜ್ಞಾನಿಕವಾಗಿ ಮಣ್ಣಿನ ರಾಶಿ ಸುರಿಯಲಾಗಿದೆ. ಇಲ್ಲಿ ಪಾದಚಾರಿಗಳು ಬಂಕ್ನ ಆವರಣ ಪ್ರವೇಶಿಸಿಯೇ ನಡೆದು ಹೋಗುವ ದುಃಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವೆಡೆ ರಾಜಕಾಲುವೆ, ಚರಂಡಿಯ ಮೇಲೆ ಹೊದಿಸಲಾದ ಸ್ಲಾಬ್ಗಳು ಕೂಡ ಕಿತ್ತು ಹೋಗಿದ್ದು, ಬೈಕ್ ಸವಾರರಿಗೆ ಭಾರೀ ಅಪಾಯ ಒಡ್ಡುತ್ತಿವೆ. ಇನ್ನು ಕೆಲವೆಡೆ ಪಾದಚಾರಿ ಮಾರ್ಗವೇ ಕಾಣುವುದಿಲ್ಲ. ಎಲ್ಲವೂ ಧೂಳುಮಯ. ರಸ್ತೆಯ ಪಕ್ಕದ ಪಾದಚಾರಿ ಮಾರ್ಗದಲ್ಲೂ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಮಣ್ಣುಗುಡ್ಡೆ ತೆರವಿಗೆ ಆಗ್ರಹ: ‘ಪಂಪ್ವೆಲ್ ಸರ್ವಿಸ್ ರಸ್ತೆ ದುರಸ್ತಿಗೆ ಸುರಿಯಲಾಗಿರುವ ಮಣ್ಣಿನ ರಾಶಿಯನ್ನು ತೆರವು ಮಾಡಬೇಕು. ಅಲ್ಲದೆ ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಬೀದಿಬದಿ ವ್ಯಾಪಾರಸ್ಥ ಅನಿಲ್ ಎಂಬವರು ಒತ್ತಾಯಿಸಿದ್ದಾರೆ.
ಧೂಳಿನಿಂದ ವ್ಯಾಪಾರವೇ ಇಲ್ಲ: ‘ರಸ್ತೆ ಬದಿಯಲ್ಲಿ ರಾಶಿಗಟ್ಟಲೇ ಮಣ್ಣು ಹಾಕಿರುವುದರಿಂದ ವಾಹನಗಳು ಸಂಚರಿಸಿದಷ್ಟೇ ವೇಗವಾಗಿ ಧೂಳು ಮುಖಕ್ಕೆ ರಾಚುತ್ತಿದೆ. ರಸ್ತೆಯೆಲ್ಲ ಅಶುಚಿತ್ವದಿಂದ ಕೂಡಿದೆ. ವ್ಯಾಪಾರ ವಹಿವಾಟು ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಹೆಚ್ಚು ಧೂಳು ಏಳುವುದರಿಂದ ಗ್ರಾಹಕರು ಹಣ್ಣು-ಹಂಪಲು ಖರೀದಿಸಲು ಹಿಂದೇಟು ಹಾಕುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಸ್ಥ ಖಾದರ್.
ಕಳೆದ ಹಲವು ತಿಂಗಳಿಂದ ರಸ್ತೆಯಲ್ಲೇ ಮಣ್ಣಿನ ರಾಶಿ ಸುರಿಯಲಾಗಿದೆ. ರಸ್ತೆ ಕಾಮಗಾರಿಗೆಂದು ಹೇಳಲಾಗುತ್ತದೆ. ಆದರೆ ಇನ್ನುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ವಾಹನಗಳಿಂದ ಏಳುವ ಧೂಳು ಉಸಿರಾಟಕ್ಕೆ ತೊಂದರೆಯಾಗಿದೆ. ಧೂಳು ಎದ್ದರೆ ರಸ್ತೆಯೇ ಕಾಣಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಮಣ್ಣು ತೆರವು ಮಾಡಬೇಕು ಎನ್ನುತ್ತಾರೆ ಎಳೆನೀರು ಮಾರುವ ಸಾದಿಕ್.
ಬಿಸಿಲಲ್ಲೇ ಬಸ್ಗೆ ಕಾಯುವ ಪ್ರಯಾಣಿಕರು
ಪಂಪ್ವೆಲ್ನಿಂದ ತೊಕ್ಕೊಟ್ಟು, ಉಳ್ಳಾಲದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕೂಡ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಬಸ್ ನಿಲ್ದಾಣ ನಿರ್ಮಾಣವಾಗಲಿ ಎನ್ನುವ ಕೂಗು ಪ್ರಯಾಣಿಕರಿಂದ ಕೇಳಿಬರುತ್ತಿದೆ.
‘ಬಸ್ಗಾಗಿ ಪಂಪ್ವೆಲ್ ವೃತ್ತದ ಸಮೀಪವೇ ಬಿಸಿಲಲ್ಲಿ ನಿಲ್ಲುವ ಪ್ರಮೇಯ ಏರ್ಪಟ್ಟಿದೆ. ಸಮೀಪವೇ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದರೂ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಆದಷ್ಟು ವೇಗ ಪಡೆದುಕೊಂಡರೆ ಎಲ್ಲರಿಗೂ ಸಹಾಯವಾಗಲಿದೆ’ ಎನ್ನುವುದು ಉಳ್ಳಾಲಕ್ಕೆ ತೆರಳಲು ಬ್ಯಾಗ್ ಹೆಗಲಿಗೆ ಹಾಕಿ ಬಸ್ ಕಾಯುತ್ತ ನಿಂತಿದ್ದ ವೆಂಕಟೇಶ್ ಅವರ ಮಾತು.