ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಬೆಂಗಳೂರು : ಸಾಗರೋತ್ತರ ಕನ್ನಡಿಗರ ಸಂವಾದ ಕಾರ್ಯಕ್ರಮವು ಜ.10ರಂದು ನಡೆಯಿತು.
ಅಂತರ್ ರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್ ನ ಸಂಚಾಲಕ ಹಿದಾಯತ್ ಅಡ್ಡೂರ್ ಈ ಸಂದರ್ಭ ಮಾತನಾಡಿ, ಕಳೆದ 3 ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನೇ ನೇಮಕ ಮಾಡಿಲ್ಲ, ಕರ್ನಾಟಕ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿರುವ ಕೆ.ಎನ್.ಆರ್.ಐ. ಉಪಾಧ್ಯಕ್ಷರನ್ನು ತಕ್ಷಣವೇ ನೇಮಿಸಬೇಕು, ಅದೇ ರೀತಿ ಕುವೈತ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಅನಿವಾಸಿ ಕನ್ನಡಿಗರ, ಶಿವಮೊಗ್ಗ ನಿವಾಸಿ ಹಾಶಮ್ ಫರೀದ್ ಅವರ ಮರಣದ ವಿವರಣೆ ನೀಡಲು ವಿಳಂಬವಾಗುತ್ತಿರುವ ಸರಕಾರದ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕರ್ನಾಟಕ ಅನಿವಾಸಿ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೊಂದಿಗೆ ಅನಿವಾಸಿ ಕನ್ನಡಿಗರ ಹಲವು ಸಮಸ್ಯೆಗಳ ಬಗ್ಗೆ ವಿವರಿಸಿ, ಸೂಕ್ತ ಪರಿಹಾರಕ್ಕೆ ವಿನಂತಿಸಿದ್ದರು.
ಸಿಎಂ ಅವರ ಗಮನಕ್ಕೆ ತರುವುದಾಗಿ ಗಣೇಶ್ ಕಾರ್ಣಿಕ್ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅನಿವಾಸಿ ಕನ್ನಡಿಗರ ಬೇಡಿಕೆಗಳ ಕುರಿತು, ಹಾಶಮ್ ಸಾವಿನ ತನಿಖೆ ಕುರಿತು ಮನವಿ ಸಲ್ಲಿಸಿ ಚರ್ಚಿಸಿದರು. ಅಲ್ಲದೇ ಹಾಶಮ್ ಅಸಹಜ ಸಾವಿನ ತನಿಖೆಯನ್ನು ಚುರುಕುಗೊಳಿಸಲು ಕುವೈತ್ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆಯಲು ವಿದೇಶಾಂಗ ಇಲಾಖೆಯೊಂದಿಗೆ ಚರ್ಚಿಸುವುದಾಗಿಯೂ ಅವರು ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.