ಮೊದಲಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವುದರಿಂದ ಹಿಂದೆ ಸರಿದ ತೆಲಂಗಾಣದ ಆರೋಗ್ಯ ಸಚಿವ
ಹೈದರಾಬಾದ್: ರಾಜ್ಯದಲ್ಲಿ ತಾನೇ ಮೊದಲಿಗೆ ಕೊರೋನ ಪಿಡುಗಿನ ವಿರುದ್ಧ ಲಸಿಕೆ ತೆಗೆದುಕೊಳ್ಳುವುದಾಗಿ ಘೋಷಿಸಿಕೊಂಡಿದ್ದ ತೆಲಂಗಾಣದ ಆರೋಗ್ಯ ಸಚಿವ ಇ.ರಾಜೇಂದ್ರ, ಆರೋಗ್ಯ ಕಾರ್ಯಕರ್ತರು ಮೊದಲಿಗೆ ಲಸಿಕೆ ಪಡೆಯಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಖಡಕ್ ಎಚ್ಚರಿಕೆಯ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಲಸಿಕೆಗಳ ಸುರಕ್ಷತೆಯ ಬಗ್ಗೆ ಈಗಲೂ ಆತಂಕದಲ್ಲಿರುವ ಜನರಿಗೆ ವಿಶ್ವಾಸ ತುಂಬುವ ಉದ್ದೇಶದಿಂದ ನಾನು ಮೊದಲಿಗೆ ಕೊರೋನ ವಿರುದ್ಧ ಲಸಿಕೆಯನ್ನು ತೆಗೆದುಕೊಳ್ಳುತ್ತೇನೆ ಎಂದು ನಿನ್ನೆ ರಾಜೇಂದ್ರ ಹೇಳಿಕೆ ನೀಡಿದ್ದರು.
ನೈರ್ಮಲ್ಯ ಕಾರ್ಮಿಕರಾದ ಕೃಷ್ಣಮ್ಮ ರಾಜ್ಯದಲ್ಲಿ ಮೊದಲಿಗರಾಗಿ ಕೋವಿಡ್ ಲಸಿಕೆ ಸ್ವೀಕರಿಸಿದರು.
"ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕೆಂದು ವಿನಂತಿಸುವೆ. ಮೊದಲಿಗೆ ನನಗೂ ಸ್ವಲ್ಪ ಭಯವಾಗಿತ್ತು. ಆದರೆ ವೈದ್ಯರು ನನಗೆ ಭರವಸೆ ನೀಡಿದರು. ಚಿಂತಿಸಬೇಡಿ ಎಂದು ಆರೋಗ್ಯ ಸಚಿವರು ನನಗೆ ತಿಳಿಸಿದರು. ನನಗೆ ಈ ತನಕ ಯಾವುದೇ ಕೊರೋನ ಲಕ್ಷಣ ಕಂಡುಬಂದಿಲ್ಲ'' ಎಂದು ಕೃಷ್ಣಮ್ಮಹೇಳಿದ್ದಾರೆ.
ಸೋಮವಾರ ದೇಶದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ, ರಾಜಕಾರಣಿಗಳು ಮೊದಲಿಗೆ ಸರದಿಯಲ್ಲಿ ನಿಂತು ಲಸಿಕೆ ತೆಗೆದುಕೊಳ್ಳಬಾರದು. ಅವರ ಸರದಿ ಬರುವ ತನಕ ಕಾಯಬೇಕು ಎಂದು ಸಲಹೆ ನೀಡಿದ್ದರು.