ಏಷಿಯನ್ ಪೇಂಟ್ಸ್ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾದ ಸಿದ್ದರಾಮಯ್ಯ
ಮೈಸೂರು,ಜ.17: ಕೆಲಸ ಕೊಡಿ ಇಲ್ಲವೇ ಭೂಮಿ ವಾಪಸ್ ಕೊಡಿ ಎಂದು ಆಗ್ರಹಿಸಿ ನಂಜನಗೂಡಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆ ಎದುರು ಕಳೆದ 45 ದಿನಗಳಿಂದ ಧರಣಿ ನಡೆಸುತ್ತಿರುವ ರೈತರನ್ನು ಮಾಜಿ ಸಿಎಂ ಸಿದ್ದರಾಮಯ್ಯ ರವಿವಾರ ಭೇಟಿ ಮಾಡಿದರು.
ರೈತರ ಭೇಟಿ ನಂತರ ಮಾತನಾಡಿದ ಸಿದ್ದರಾಮಯ್ಯ, ಭೂಮಿ ಕಳೆದುಕೊಂಡವರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಿಸುವ ಕುರಿತು ಆಡಳಿತ ಮಂಡಳಿ, ಕಾರ್ಮಿಕ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಬಿಕ್ಕಟ್ಟು ಶೀಘ್ರವೇ ಸುಖಾಂತ್ಯ ಕಾಣಲಿದೆ. ಜಮೀನು ಕಳೆದುಕೊಂಡವರಿಗೆ ಕಾರ್ಖಾನೆ ಉದ್ಯೋಗ ಒದಗಿಸುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಒಂದು ವೇಳೆ ಕೆಲಸ ಕೊಡದಿದ್ದರೆ ನಾನು ಮತ್ತೆ ಮಧ್ಯೆ ಪ್ರವೇಶ ಮಾಡುತ್ತೇನೆ. ನೀವು ನಡೆಸುವ ಹೋರಾಟದಲ್ಲಿ ನಾನೂ ಭಾಗಿಯಾಗುವೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಹೆಜ್ಜಿಗೆ ಪ್ರಕಾಶ್, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ.ಮರಂಕಯ್ಯ, ಚಂದ್ರಶೇಖರ್ ಮೇಟಿ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಸೇರಿದಂತೆ ಹಲವರು ಉಪಸ್ಥತಿರಿದ್ದರು.