ಕಾರು ಕಳವು ಪ್ರಕರಣ: ಆರೋಪಿ ಬಂಧನ
ಬೆಂಗಳೂರು, ಜ.17: ಕಾರುಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪದಡಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ನಗರದ ಗಿರೀಶ್ ಗೌಡ ಹಾಗೂ ಮೋಹನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳು 12 ಇನೋವಾ ಕ್ರಿಸ್ಟಾ, ಮಾರುತಿ ಕಂಪನಿಯ 5 ಕಾರುಗಳು, ಹುಂಡೈ ಕಂಪೆನಿಯ 4 ಕಾರುಗಳು, 3 ಟೊಯೋಟಾ ಫಾರ್ಚುನರ್, ಹೋಂಡಾ ಕಂಪೆನಿಯ 1 ಕಾರು, ನಿಸಾನ್ ಕಂಪೆನಿಯ 1 ಕಾರು ಹಾಗೂ ಟಾಟಾ ಕಂಪೆನಿಯ 1 ಕಾರು ಸೇರಿ ಒಟ್ಟು 27 ಕಾರುಗಳ ಕಳ್ಳತನ ಮಾಡಿದ್ದರು ಎನ್ನುವ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪೆನಿಯ ಜನರಲ್ ಮ್ಯಾನೇಜರ್ ಮೋಹಲ್ ವೇಲು ಎಂಬುವವರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಬಾಡಿಗೆಗೆ ಕಾರನ್ನು ಪಡೆದುಕೊಂಡು ಹಳದಿ ಬೋರ್ಡ್ ವಾಹನಗಳನ್ನು ಬಿಳಿ ಬೋರ್ಡ್ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಇನ್ನು, ಬಂಧಿತರಿಂದ ಕಾರು ಗಳು ಮಾತ್ರವಲ್ಲದೆ, 75 ಗ್ರಾಂ ಚಿನ್ನಾಭರಣ, 2 ಬೆಲೆ ಬಾಳುವ ಮೊಬೈಲ್, 6 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.