ತುಮಕೂರು: ಎಟಿಎಂ ದೋಚಿದ ಕಳ್ಳರು!
ತುಮಕೂರು, ಜ.18: ಎಟಿಎಂ ಬಾಗಿಲು ಒಡೆದು ನಗದು ದೋಚಿದ ಪ್ರಕರಣ ತುಮಕೂರು ನಗರ ಹೊರವಲಯದ ಹೆಗ್ಗೆರೆ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಹೆಗ್ಗೆರೆ ಗ್ರಾಮದ ಸಿದ್ದಾರ್ಥ ಮೆಡಿಕಲ್ ಕಾಲೇಜು ಸಮೀಪವಿರುವ ಇಂಡಿಯನ್ ಓವರ್ ಸಿಸ್ ಬ್ಯಾಂಕಿಗೆ ಸೇರಿದ ಎಟಿಎಂನಿಂದ ಈ ಕಳವು ನಡೆದಿದೆ. ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಶಾಖೆ ಕಾರ್ಯಾಚರಿಸುತ್ತಿರುವ ಈ ಕಟ್ಟಡದ ಮೇಲ್ಭಾಗದಲ್ಲಿ ಜಿಮ್ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರ ಬೆಳಗಿನ ಜಾವ 5:30ರ ವೇಳೆಗೆ ಜಿಮ್ ಗೆ ಯುವಕರು ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬ್ಯಾಂಕಿನ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಆಗಮಿಸಿದ್ದು, ಕಳವಾಗಿರುವ ಹಣದ ಮೊತ್ತವನ್ನು ಲೆಕ್ಕ ಹಾಕುತ್ತಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story