ಗಡಿ ಕಿರಿಕ್ ಬೆನ್ನಲ್ಲೇ ರಾಜ್ಯದ ಸರಕಾರಿ ಕಾರ್ಯಕ್ರಮದಲ್ಲಿ ಮರಾಠಿ ಹಾಡು, ಭಾಷಣ !
ಬೆಳಗಾವಿ, ಜ. 18: ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ತಾಯಿ-ಮಗು ಆಸ್ಪತ್ರೆ(ಎಂಸಿಎಚ್) ಹಾಗೂ ಸಿಬ್ಬಂದಿ ವಸತಿ ಗೃಹ ಉದ್ಘಾಟನೆ ಸಮಾರಂಭದಲ್ಲಿ ಮರಾಠಿ ಗೀತೆ, ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೋಮವಾರ ನಿಪ್ಪಾಣಿಯಲ್ಲಿ ಆರೋಗ್ಯ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಶಶಿಕಲಾ ಜೊಲ್ಲೆ ಉಪಸ್ಥಿತಿಯಲ್ಲಿ ಮರಾಠಿ ಭಾಷೆಯಲ್ಲೇ ಸ್ವಾಗತ ಗೀತೆ ಹಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಮರ್ಥನೆ: ‘ಸರಕಾರಿ ಕಾರ್ಯಕ್ರಮದಲ್ಲಿ ಕೆಲ ವೈದ್ಯರು ಮರಾಠಿಯಲ್ಲಿ ಮಾತನಾಡಿದ್ದಾರೆ. ಅವರಿಗೆ ಕನ್ನಡ ಬರುವುದಿಲ್ಲವೆಂದು ಭಾವನಾತ್ಮಕವಾಗಿ ಮರಾಠಿ ಭಾಷೆಯಲ್ಲಿ ಮಾತಾಡಿದ್ದಾರೆ. ನಿಪ್ಪಾಣಿಯಲ್ಲಿ ಮರಾಠಿ ಜೊತೆ ಕನ್ನಡ ಭಾಷೆಯೂ ಬೆಳೆಯುತ್ತಿದೆ' ಎಂದು ಸಚಿವೆ ಶಶಿಕಲಾ ಜೊಲ್ಲೆ ಸಮರ್ಥಿಸಿದರು.
‘ನಾನು ಮತ್ತು ಡಾ.ಸುಧಾಕರ್ ಮಾತಾಡಿದಾಗ ಅಲ್ಲಿನ ಜನ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಗಡಿಯಲ್ಲಿ ಮರಾಠಿ ಹಾಗೂ ಕನ್ನಡ ಭಾಷಿಕರು ಅನ್ಯೂನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಠಾಕ್ರೆ ಹೇಳಿಕೆ ಮೂರ್ಖತನದ್ದು' ಎಂದು ಶಶಿಕಲಾ ಜೊಲ್ಲೆ ಟೀಕಿಸಿದರು.