ಜೆಡಿಎಸ್ ಅಧಿಕಾರಕ್ಕೆ ಬಂದರೆ 'ಪಂಚರತ್ನ' ಯೋಜನೆ ಜಾರಿ: ಕುಮಾರಸ್ವಾಮಿ
ಅನುಷ್ಠಾನಗೊಳಿಸದಿದ್ದರೆ ಪಕ್ಷ ವಿಸರ್ಜನೆ ಸವಾಲು
ಬೆಂಗಳೂರು, ಜ. 18: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಕ್ಷೇತ್ರಗಳ ಜೊತೆಗೆ ಸಾಲ ರಹಿತ ರೈತನ ಬದುಕು ರೂಪಿಸುವ ‘ಪಂಚರತ್ನ' ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಯುಕೆಜಿಯಿಂದ ಪಿಯುಸಿಯ ವರೆಗೆ ಕುಟುಂಬದ ಒಬ್ಬರಿಗೆ ಉಚಿತ ಶಿಕ್ಷಣ, ಪ್ರತಿಯೊಂದು ಕುಟುಂಬಕ್ಕೆ ವಸತಿ ಸೌಲಭ್ಯ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಲಾಗುವುದೆಂದು ಆಶ್ವಾಸನೆ ನೀಡಿದರು.
ಜೆಡಿಎಸ್ಗೆ ರಾಜ್ಯದ ಜನತೆ ಪೂರ್ಣ ಪ್ರ್ರಮಾಣದಲ್ಲಿ ಅಧಿಕಾರ ಬಂದ ಐದು ವರ್ಷದಲ್ಲಿ'ಪಂಚರತ್ನ' ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಎಚ್ಡಿಕೆ ಪ್ರಕಟಿಸಿದರು.
ನಗು ಬಂತು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಬೆಳಗಾವಿಯಲ್ಲಿ ಮಾಡಿದ ಭಾಷಣ ಕೇಳಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ಯೋಜನೆ ತಂದಿದ್ದು ನಾನು. ಕಾಂಪಿಟ್ ವಿತ್ ಚೈನಾ ಯೋಜನೆ ರೂಪಿಸಿದ್ದೆ. ಆ ಯೋಜನೆಗೆ ಬಿಜೆಪಿ ಶಂಕುಸ್ಥಾಪನೆ ನೆರವೇರಿಸಿದೆ ಎಂದು ಟೀಕಿಸಿದರು.