2019ರ ದಾಳಿಯನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಬಳಸಿತು: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್ (ಪಾಕಿಸ್ತಾನ), ಜ. 18: 2019ರಲ್ಲಿ ಭಾರತವು ಬಾಲಾಕೋಟ್ ಮೇಲೆ ನಡೆಸಿದ ವಾಯು ದಾಳಿಯು, ಆ ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಚುನಾವಣಾ ಲಾಭಕ್ಕಾಗಿ ನಡೆಸಿದ ‘ತೋರಿಕೆಯ ದಾಳಿ’ಯಾಗಿತ್ತು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾರೆ ಹಾಗೂ ಭಾರತದ ‘‘ಬೇಜವಾಬ್ದಾರಿಯುತ ಸೇನಾ ಕಾರ್ಯಸೂಚಿಯನ್ನು ನಿಲ್ಲಿಸುವಂತೆ ಅವರು ಜಾಗತಿಕ ಸಮುದಾಯವನ್ನು ಒತ್ತಾಯಿಸಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತದ ಫ್ಯಾಶಿಸ್ಟ್ ಸರಕಾರವು ಬಾಲಾಕೋಟ್ ಬಿಕ್ಕಟ್ಟನ್ನು ತನ್ನ ಚುನಾವಣಾ ಲಾಭಕ್ಕಾಗಿ ಬಳಸಿಕೊಂಡಿತು’’ ಎಂದು ಅವರು ಹೇಳಿದರು.
2019 ಫೆಬ್ರವರಿ 16ರಂದು ಬಾಲಾಕೋಟ್ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ರಿಪಬ್ಲಿಕ್ ಟಿವಿಯ ಸುದ್ದಿ ನಿರೂಪಕ ಅರ್ನಾಬ್ ಗೋಸ್ವಾಮಿ ಮತ್ತು ರೇಟಿಂಗ್ ನೀಡುವ ಸಂಸ್ಥೆ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ನ ಅಂದಿನ ಮುಖ್ಯಸ್ಥ ಪಾರ್ಥೊ ದಾಸ್ಗುಪ್ತ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ ಬಾಲಾಕೋಟ್ ದಾಳಿಯ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.