ಕಲಬುರಗಿ: ಅರ್ನಬ್ ಗೋಸ್ವಾಮಿ ಬಂಧನಕ್ಕೆ ಆಗ್ರಹಿಸಿ ಎಸ್ಡಿಪಿಐ ಧರಣಿ
ಕಲಬುರಗಿ, ಜ.20: ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ವಾಟ್ಸ್ ಆ್ಯಪ್ ಚಾಟ್ ನಿಂದ ರಾಷ್ಟ್ರೀಯ ಭದ್ರತೆಗೆ ದಕ್ಕೆಯಾಗಿದಲ್ಲದೇ ಅವರು ದೇಶದ 40 ಸೈನಿಕರ ಸಾವನ್ನು ಸಂಭ್ರಸಿದ್ದಾರೆ. ಹೀಗಾಗಿ ರಿಪಬ್ಲಿಕ್ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಿ ಅರ್ನಬ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರಕಾರದ ಪ್ರಮುಖ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡ ಅರ್ನಬ್ ಗೋಸ್ವಾಮಿ ರಾಷ್ಟ್ರೀಯ ಭದ್ರತೆಯ ವಿಷಯಗಳ ಮಾಹಿತಿಯನ್ನು ಹಂಚಿಕೊಂಡು ಭದ್ರತೆಗೆ ದಕ್ಕೆ ತಂದಿದ್ದು, ಕೇಂದ್ರ ಸರಕಾರ ಈ ವಿಷಯದಲ್ಲಿ ಜಾಣ ಕುರುಡರಂತೆ ವರ್ತಿಸುತ್ತಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಝ್ವಾನ್ ಅಹ್ಮದ್ ಆರೋಪಿಸಿದ್ದಾರೆ.
ಈ ಬಗ್ಗೆ ಕೂಲಂಕಶ ತನಿಖೆ ನಡೆಸಲು ತಂಡ ನೇಮಿಸಿ, ಅರ್ನಬ್ ನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು. ಗೌಷ್ಯ ಮಾಹಿತಿ ಪಡೆಯಲು ಸಹಾಯ ಮಾಡಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ, ಪಂಚಾಯತ್ ಸದಸ್ಯ ಶಕೀಲ್ ಪಾಷಾ ಭಂಕೂರು, ಪಕ್ಷದ ಕೌನ್ಸಿಲ್ ಸದಸ್ಯ ಮಹಮ್ಮದ್ ಮೊಹ್ಸಿನ್, ಸೈಯದುದ್ದೀನ್ ಫಾರೂಕ್, ಪಕ್ಷದ ಸದಸ್ಯರ ಪ್ರತಿಭಟನೆಯಲ್ಲಿ ಭಾಗವಹಿಸಿದರು.