ಫೆ.7: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಜ.23: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 82ನೇ ಸಂಸ್ಥಾಪನಾ ದಿನಾಚರಣೆಯು ಫೆ.7ರಂದು ಮಧ್ಯಾಹ್ನ 2ರಿಂದ 5ರ ತನಕ ನಗರದ ಸುಜೀರ್ ಸಿ.ವಿ.ನಾಯಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸೇವಾ ಸಂಘದ ಸಮಿತಿ ಸದಸ್ಯ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಕಣಿಯಲ್ಲಿ ವಿವಿಧ ವೌಖಿಕ ಹಾಗೂ ಲಿಖಿತ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಣೆ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ, ಹಿರಿಯ ನಾಗರಿಕರಿಗೆ ವೈದ್ಯಕೀಯ ಸಹಾಯ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ, ಶಾಲಾ ಸಮವಸ್ತ್ರ, ಕೊಂಕಣಿ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದು ಹೇಳಿದರು.
ಪುಟ್ಟ ಮಕ್ಕಳಿಂದ ಹಿರಿಯರ ತನಕ ಕೊಂಕಣಿಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಪುಟಾಣಿಗಳಿಗೆ ಬಾಲಗೀತೆ, ಕಿಶೋರರಿಗೆ ಕೊಂಕಣಿ ವೌಖಿಕ ಕಥಾ ನಿರೂಪಣೆ, ಶಾಲಾ ವಿದ್ಯಾರ್ಥಿಗಳಿಗೆ ಸಮಾನಾಂತರ ಕೊಂಕಣಿ ಶಬ್ದ ಲೇಖನ ಹಾಗೂ ಹಿರಿಯ ನಾಗರಿಕರಿಗೆ ಸಮಾನಾಂತರ ವೌಖಿಕ ಶಬ್ಧ ನಿರೂಪಣೆ, ಹಿರಿಯ ವಿದ್ಯಾರ್ಥಿಗಳಿಗೆ ಆಶು ಭಾಷಣ ಹಾಗೂ ಕಥಾ ಲೇಖನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ವಯೋಮಾನದವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಂಬ್ಳೆ ನರಸಿಂಹ ಪ್ರಭು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಜಿ.ಗೋವಿಂದರಾಯ ಪ್ರಭು, ಖಜಾಂಚಿ ಜಿ.ವಿಶ್ವನಾಥ ಭಟ್, ಗೌರವ ಕಾರ್ಯದರ್ಶಿ ಡಾ.ಎ.ರಮೇಶ್ ಪೈ ಉಪಸ್ಥಿತರಿದ್ದರು.